ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ; ಸಿಎಂಗೆ ಸಾಣೇಹಳ್ಳಿ ಶ್ರೀಗಳ ಸಲಹೆ
ಚಿತ್ರದುರ್ಗ, ನವೆಂಬರ್ 18: ವೀರಶೈವ-ಲಿಂಗಾಯತ ಸಮಾಜದ ಅಭಿವೃದ್ಧಿಗಾಗಿ 'ಕರ್ನಾಟಕ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ' ಸ್ಥಾಪನೆ ಮಾಡಲು ಮಂಗಳವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಆದೇಶ ನೀಡಿದ್ದಾರೆ. ಈ ಕುರಿತು ಹೊಸದುರ್ಗದ ಸಾಣೆಹಳ್ಳಿ ತರಳಬಾಳು ಪೀಠದ ಡಾ.ಪಂಡಿತಾರಾಧ್ಯ ಶ್ರೀಗಳು ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದ್ದಾರೆ.
"ವೀರಶೈವ- ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ಬೇಡ, ಇದರ ಬದಲಿಗೆ ಶ್ರೀ ಬಸವೇಶ್ವರ ಅಭಿವೃದ್ಧಿ ನಿಗಮ ಸ್ಥಾಪಿಸಿ" ಎಂದಿದ್ದಾರೆ.
ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಸಾಣೆಹಳ್ಳಿ ಪೀಠದಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಶ್ರೀಗಳು, "ಈಗಾಗಲೇ ವೀರಶೈವ - ಲಿಂಗಾಯತರ ನಡುವೆ ಭಿನ್ನಾಭಿಪ್ರಾಯಗಳಿವೆ. ಹೀಗಿರುವಾಗ "ಬಸವೇಶ್ವರ ಅಭಿವೃದ್ಧಿ ನಿಗಮ" ಸ್ಥಾಪಿಸಬೇಕು. ನಿಗಮಕ್ಕೆ ಸಾವಿರಾರು ಕೋಟಿ ಅನುದಾನ ಮೀಸಲಿಡಬೇಕು ಎಂದಿದ್ದಾರೆ.

ಮಹಾರಾಷ್ಟ್ರದಲ್ಲಿ ಮರಾಠಿಗರಿಗೆ ಶೇ 16ರಷ್ಟು ಮೀಸಲಾತಿ ನೀಡಿರುವಂತೆ, ಕರ್ನಾಟಕದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿರುವ ಲಿಂಗಾಯತರಿಗೆ ಶೇ 16 ಮೀಸಲಾತಿ ಕೊಡಿ. ಅದರ ಜೊತೆಗೆ ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆ ಸಿಗುವಂತೆ ಕೇಂದ್ರಕ್ಕೆ ಶಿಫಾರಸು ಮಾಡಿ. ಇದರಿಂದ ನಮ್ಮ ಸಮುದಾಯದ ಬಡ ಮಕ್ಕಳಿಗೆ ಅನೇಕ ಸವಲತ್ತುಗಳು ಸಿಗುತ್ತವೆ. ಅದು ಬಿಟ್ಟು ಅಭಿವೃದ್ಧಿ ನಿಗಮಗಳ ಸ್ಥಾಪನೆ ವಿಚಾರವನ್ನು ಚುನಾವಣೆಯ ಗಿಮಿಕ್ ಗಾಗಿ ಮಾಡಬೇಡಿ. ಮುಂದೆ ಬರುವ ಸರ್ಕಾರಗಳು ಇದನ್ನು ಕಡೆಗಣಿಸಬಹುದು. ಹೀಗಾಗಿ ಯಾವುದೇ ರಾಜಕೀಯ ಆಲೋಚನೆಗಳನ್ನು ಬದಿಗಿಟ್ಟು, ರಾಜಕೀಯೇತರ ವ್ಯಕ್ತಿಗಳನ್ನು ಅಭಿವೃದ್ಧಿ ನಿಗಮಗಳ ಅಧ್ಯಕ್ಷರನ್ನಾಗಿ ಮಾಡಬೇಕು ಎಂದರು.
ಈ ಮೂಲಕ ಎಲ್ಲಾ ಬಡವರ್ಗದ ಜನರಿಗೂ ಅನುಕೂಲ ಸಿಗುವಂತೆ ಮಾಡಿ. ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವವರಿಗೆ ಮೀಸಲಾತಿ ಸಿಗುವಂತಾಗಬೇಕು ಎಂದಿದ್ದಾರೆ. ಇತ್ತೀಚಿಗೆ ಎಲ್ಲರೂ ಮೀಸಲಾತಿ ಕೇಳುತ್ತಿರುವುದು ವಿಷಾದನೀಯ ಎಂದು ಬೇಸರ ಹೊರಹಾಕಿದರು.












Click it and Unblock the Notifications