ಚಿತ್ರದುರ್ಗ ಜಿಲ್ಲೆಯಲ್ಲಿ ಕೆರೆ ಹೂಳೆತ್ತಲು ಸಾಥ್ ಕೊಟ್ಟ ಮಠಾಧೀಶರು
ಚಿತ್ರದುರ್ಗ, ಮೇ 05:ಜಿಲ್ಲೆಯ ಹೊಸದುರ್ಗ ತಾಲೂಕಿನ ಮಧುರೆ ಗ್ರಾಮದ ಕೆರೆಗೆ ಇತಿಹಾಸದ ಹಿನ್ನೆಲೆಯಿದ್ದು, ಸುತ್ತಮುತ್ತಲು ಹತ್ತಾರು ಹಳ್ಳಿಗಳಿಗೆ ನೀರಿನ ಮೂಲವೆನಿಸಿದೆ. ಆದ್ರೆ ಕಳೆದ ನಾಲ್ಕೈದು ವರ್ಷಗಳಿಂದ ಮಳೆಯಿಲ್ಲದ ಹಿನ್ನಲೆಯಲ್ಲಿ ಬರದಿಂದ ಬತ್ತಿ ಬರಿದಾಗಿದೆ. ಇದೊಂದೆ ಕೆರೆ ಅಲ್ಲ, ಈ ತಾಲೂಕಿನ ನೂರಾರು ಕೆರೆಗಳ ಸ್ಥಿತಿ ಸಹ ಇದೇ ರೀತಿಯಾಗಿದೆ.
ಇಲ್ಲಿನ ಕೊಳವೆ ಬಾವಿಗಳಲ್ಲೂ ಸಹ ನೀರಿಲ್ಲದಂತಾಗಿ ಹನಿ ನೀರಿಗೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಎಚ್ಚೆತ್ತಿರುವ ಹೊಸದುರ್ಗದ ಭಗಿರಥ ಪೀಠದ ಪುರುಷೋತ್ತಮ ನಂದಸ್ವಾಮೀಜಿ, ಕುಂಚಟಿಗ ಮಠದ ಶಾಂತವೀರ ಸ್ವಾಮೀಜಿ ಹಾಗೂ ಸಾಣೆಹಳ್ಳಿಯ ಪಂಡಿತಾರಾದ್ಯಸ್ವಾಮೀಜಿ ಮತ್ತು ಕಾಗಿನೆಲೆ ಶಾಖಾಮಠದ ಈಶ್ವರಾನಂದಪುರಿ ಸ್ವಾಮೀಜಿಯವರು ಜನಸಾಮಾನ್ಯರ ಜೊತೆ ಕೆರೆ ಹೂಳೆತ್ತುವ ಅಭಿಯಾನ ಆರಂಭಿಸಿದ್ದಾರೆ.
ವಿವಿ ಸಾಗರಕ್ಕೆ ಭದ್ರೆ ನೀರು ಹರಿಯಲಿಲ್ಲ, ತೆಂಗು ಉಳಿಯಲಿಲ್ಲ
ಸಾಣೆಹಳ್ಳಿಯಲ್ಲಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಕೆರೆ ಅಭಿವೃದ್ಧಿ ಕಾರ್ಯ ಆರಂಭಿಸಿದ್ದು, ಮಠಾಧೀಶರ ಕಾರ್ಯಕ್ಕೆ ಶಾಸಕ ಗೂಳಿಹಟ್ಟಿ ಶೇಖರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಂತಹ ಕೆಲಸಗಳು ರಾಜ್ಯದ ಮೂಲೆ ಮೂಲೆಯಲ್ಲಿ ನಡೆಯಲಿ, ಸರ್ಕಾರ ಕೂಡ ಈ ಸಂಬಂಧ ಗಮನಹರಿಸಲಿ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.