ಏಳು ಸುತ್ತಿನ ಕೋಟೆಯ ಚಿತ್ರದುರ್ಗ ಸುದ್ದಿಯಲ್ಲಿ!
ಸ್ವಚ್ಛ ಭಾರತದ ಅಂಗವಾಗಿ ಗುರುವಾರ ದೇಶದ ಕೆಲ ನಗರ, ಪಟ್ಟಣಗಳಲ್ಲಿ ಸ್ವಚ್ಛ ಸರ್ವೇಕ್ಷಣೆ ನಡೆಸಲಾಯಿತು.
ಚಿತ್ರದುರ್ಗ, ಜನವರಿ 19: ಒಂದು ಕಡೆ ಐತಿಹಾಸಿಕ ಮುರುಘಾಮಠ, ಮತ್ತೊಂದೆಡೆ ಎಪಿಎಂಸಿ ಮಾರುಕಟ್ಟೆ. ನಡುವಿನ ಪ್ರದೇಶ ಇಲ್ಲಿನ ರೈಲ್ವೇ ನಿಲ್ದಾಣದ್ದು.
ಅಂದಹಾಗೆ, ಈ ರೈಲ್ವೇ ನಿಲ್ದಾಣ ಗುರುವಾರ ಮಧ್ಯಾಹ್ನದ ವೇಳೆಗೆ ಏಕಾಏಕಿ ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿತು. ಅದಕ್ಕೆ ಕಾರಣ, ಇಲ್ಲಿ ನಡೆದ ಸ್ವಚ್ಛ ಭಾರತ ಸರ್ವೇಕ್ಷಣೆ.
ರೈಲ್ವೇ ನಿಲ್ದಾಣ ಹಾಗೂ ಸುತ್ತಲಿನ ಪ್ರದೇಶದಲ್ಲಿ ಅಂಥ ಹೇಳಿಕೊಳ್ಳುವಂಥ ಸ್ವಚ್ಛತೆಯೇನಿಲ್ಲ. ನಿಲ್ದಾಣದಲ್ಲೂ ಅಷ್ಟಾಗಿ ಜನಸಂದಣಿ ಇರುವುದಿಲ್ಲ. ಚಿತ್ರದುರ್ಗದ ಜನ ಬಹುತೇಕ ಆಶ್ರಯಿಸುವುದು ಖಾಸಗಿ, ಸರ್ಕಾರಿ ಬಸ್ ಗಳನ್ನೇ.
ಹಾಗಾಗಿ, ಚಿತ್ರದುರ್ಗದ ಜನರಲ್ಲೇ ರೈಲ್ವೇ ಸ್ಟೇಷನ್ ಅನ್ನು ನೋಡಿದವರು, ಅದರೊಳಗೆ ಅಡ್ಡಾಡಿದವರು ಕಡಿಮೆಯೇ. ಹಾಗಾಗಿಯೇ ಇಲ್ಲಿನ ಸುತ್ತಿಲಿನ ಪ್ರದೇಶದಲ್ಲಿ ಅಲ್ಲಲ್ಲಿ ಕೊಳಚೆ, ಅನವಶ್ಯಕ ಜಾಲಿಮುಳ್ಳಿನ ಗಿಡ, ಕಸಗಳಿಂದ ತುಂಬಿದೆ.
ಹಾಗಾಗಿಯೇ, ಕೇಂದ್ರ ಸ್ವಚ್ಛ ಭಾರತ ಅಭಿಯಾನದ ವತಿಯಿಂದ ಗುರುವಾರ ಅಲ್ಲಿ, ಸ್ವಚ್ಛ ಸರ್ವೇಕ್ಷಣೆ ನಡೆಯಿತು. ಇದರ ಅಂಗವಾಗಿ, ರೈಲ್ವೇ ನಿಲ್ದಾಣದ ಪ್ರಾಂಗಣ, ಸುತ್ತಲಿನ ಪ್ರದೇಶಗಳನ್ನು ಕಾರ್ಯಕರ್ತರು ಶುಚಿಗೊಳಿಸಿದರು. ಅದರ ಫಲವಾಗಿ, ರೈಲ್ವೇ ಸ್ಟೇಷನ್ ಫಳಫಳಿಸುತ್ತಿದೆ.
ಇವಿಷ್ಟೇ ಅಲ್ಲ, ಬಸ್ ಸ್ಟಾಂಡ್ ಗಳು, ಅಲ್ಲಿನ ಶೌಚಾಲಯಗಳಲ್ಲಿ ಈ ಅಭಿಯಾನ ನಡೆಸಲಾಯಿತು.
ಅತ್ತ, ದಕ್ಷಿಣ ಕನ್ನಡದ ಉಡುಪಿ, ಮೈಸೂರು, ಕಟಕ್, ವಿಶಾಖಪಟ್ಟಣ, ಸೂರತ್ ಮುಂತಾದ ನಗರಗಳಲ್ಲಿ ಈ ಸ್ವಚ್ಛ ಸರ್ವೇಕ್ಷಣೆ ನಡೆಯಿತು.
(ಚಿತ್ರಗಳು: ಸ್ವಚ್ಛ ಸರ್ವೇಕ್ಷಣೆಯ ಟ್ವಿಟರ್ ಖಾತೆಯಿಂದ)