ಜೆಜಿ ಹಳ್ಳಿ ಕಾಲೇಜು ಸ್ಥಳಾಂತರ ಆದೇಶದ ವಿರುದ್ಧ ಸಿಡಿದೆದ್ದ ವಿದ್ಯಾರ್ಥಿಗಳು
ಹಿರಿಯೂರು, ಜೂನ್ 28: ಜೆಜಿ ಹಳ್ಳಿ ಕಾಲೇಜು ಸ್ಥಳಾಂತರಿಸಲು ಆದೇಶ ಹೊರಡಿಸಿದ ಸರ್ಕಾರದ ನಿರ್ಧಾರವನ್ನು ಖಂಡಿಸಿ ಜೆಜಿ ಹಳ್ಳಿ ಗ್ರಾಮ ಪಂಚಾಯ್ತಿ ಮುಂದೆ ಹಳೇ ವಿದ್ಯಾರ್ಥಿಗಳು, ಕಾಲೇಜು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಆರಂಭಿಸಿರುವ ಉಪವಾಸ ಧರಣಿ ಸತ್ಯಾಗ್ರಹ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಹೋರಾಟ ತೀವ್ರಗೊಳ್ಳುತ್ತಿದೆ. ಧರಣಿ ಸ್ಥಳಕ್ಕೆ ಚಿತ್ರದುರ್ಗ ಎಸಿ ವಿಜಯ್ ಕುಮಾರ್ ಭೇಟಿ ನೀಡಿ ಪ್ರತಿಭಟನಾಕಾರರ ಸಮಸ್ಯೆ ಆಲಿಸಿ ಮನವಿ ಸ್ವೀಕರಿಸಿದ್ದಾರೆ.
ಜೆಜಿ ಹಳ್ಳಿ ಕಾಲೇಜು ಸ್ಥಳಾಂತರ ಆದೇಶಕ್ಕೆ ಶಾಸಕಿ ಕೆ. ಪೂರ್ಣಿಮಾ ಗರಂ
ಹಿರಿಯೂರು ತಾಲ್ಲೂಕಿನ ಜೆಜಿ ಹಳ್ಳಿ ಡಿಗ್ರಿ ಕಾಲೇಜನ್ನು ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಕಡಿಮೆ ಇದೆ ಎಂದು ಹೇಳಿ ಮಂಡ್ಯ ಜಿಲ್ಲೆಯ ಕೆಸ್ತೂರಿಗೆ ಸ್ಥಳಾಂತರಿಸುವ ಆದೇಶ ಹೊರಡಿಸಿದೆ. ಈ ಆದೇಶದ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ ಮುಗಿಲು ಮುಟ್ಟಿದೆ. ಜೆಜಿ ಹಳ್ಳಿಯಲ್ಲಿ ಬಂದ್ ಗೆ ಕರೆ ಕೊಟ್ಟಿದ್ದು, ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿದ್ಯಾರ್ಥಿಗಳು ಪ್ರತಿಭಟನಾ ಮೆರವಣಿಗೆ ನಡೆಸಿ, ಮಾನವ ಸರಪಳಿ ನಿರ್ಮಿಸಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
'ಸರ್ಕಾರದ ಅಂಧಕಾರದಲ್ಲಿ ಅಕ್ಷರ ಅಳಿಸದಿರಲಿ', 'ಪದವೀಧರ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದ ಕುಸುಮಗಳು', 'ಕಾಲೇಜು ಉಳಿಸಿ ಶಿಕ್ಷಣ ಕೊಡಿಸಿ' ಇನ್ನು ಮುಂತಾದ ಘೋಷಣೆಗಳ ಬೋರ್ಡ್ ಗಳನ್ನು ಹಿಡಿದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ವಿರೋಧದ ನಡುವೆಯೂ ಮತ್ತೊಮ್ಮೆ ಕಾಲೇಜು ಸ್ಥಳಾಂತರದ ಆದೇಶ
ಇದೇ ವೇಳೆ ಚಿತ್ರದುರ್ಗ ಎಸಿ ವಿಜಯ್ ಕುಮಾರ್ ಧರಣಿ ನಡೆಯುತ್ತಿರುವ ಸ್ಥಳಕ್ಕೆ ಬಂದು ಪ್ರತಿಭಟನಾಕಾರರ ಸಮಸ್ಯೆ ಆಲಿಸಿ ಮನವಿ ಸ್ವೀಕರಿಸಿದ್ದಾರೆ. ಜಿಲ್ಲಾ ಪಂಚಾಯ್ತಿ ಸದಸ್ಯ ಸಿ.ಬಿ.ಪಾಪಣ್ಣ, ಶಿವಕುಮಾರ್, ಶ್ರೀನಿವಾಸ್, ಪವಿತ್ರಾ, ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಸದಸ್ಯರು ಸೇರಿದಂತೆ ಸಾವಿರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.