ಚಿತ್ರದುರ್ಗದಲ್ಲಿ ಆರೋಗ್ಯ ಸಚಿವರ ನಾಮಕಾವಸ್ತೆ ಆಸ್ಪತ್ರೆ ವಾಸ್ತವ್ಯ
ಚಿತ್ರದುರ್ಗ, ಜನವರಿ 24: ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಆರೋಗ್ಯ ಸಚಿವ ಶ್ರೀರಾಮುಲು ನಿನ್ನೆ ಮಧ್ಯರಾತ್ರಿ ಭೇಟಿ ನೀಡಿ ವಾಸ್ತವ್ಯ ಹೂಡಿದ್ದಾರೆ. ವಿವಿಧ ವಾರ್ಡ್ ಗಳಿಗೆ ಭೇಟಿ ನೀಡಿ, ಕೆಲ ನಿಮಿಷಗಳ ಕಾಲ ಪರಿಶೀಲನೆ ನಡೆಸಿದ ಸಚಿವರು ವಿಶ್ರಾಂತಿಗೆ ತೆರಳಿ ವಿಐಪಿ ವಾರ್ಡ್ ನ ಕೊಠಡಿಯಲ್ಲಿ ನಿದ್ರೆಗೆ ಜಾರಿದರು.
ಆರೋಗ್ಯ ಸಚಿವರು ಭೇಟಿ ನೀಡಲಿದ್ದಾರೆ ಎಂದು ವಿಷಯ ತಿಳಿದ ನಂತರ ಆಸ್ಪತ್ರೆ ಸಿಬ್ಬಂದಿ ಸಚಿವರಿಗೆ ಕಾಯುತ್ತಿದ್ದರು. ಮಧ್ಯರಾತ್ರಿ ಶ್ರೀರಾಮುಲು ಅವರು ಆಸ್ಪತ್ರೆಗೆ ಬಂದರು.

ಈ ಸಮಯದಲ್ಲಿ ಸಚಿವರಿಗೆ ದೂರು ಕೊಡಲು ಸಿದ್ದೇಶ್ ಎಂಬಾತ ಮುಂದಾಗಿದ್ದು, ಆತನನ್ನು ಆಸ್ಪತ್ರೆ ಸಿಬ್ಬಂದಿ ತಡೆದರು. ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ಮಾಧ್ಯಮಗಳ ಬಳಿ ಸಿದ್ದೇಶ್ ಅಳಲು ತೋಡಿಕೊಂಡರು. ಪತ್ನಿಗೆ ಮುಂಚಿತವಾಗಿಯೇ ಹೆರಿಗೆಗೆ ದಾಖಲು ಮಾಡಿದ್ದರೂ ಮಗು ಹೊಟ್ಟೆಯಲ್ಲೇ ಮೃತಪಟ್ಟಿತ್ತು. ಇದೇ ಆಸ್ಪತ್ರೆಯಲ್ಲಿ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ತಂದೆ ಮೃತಪಟ್ಟಿದ್ದರು ಎಂದು ದೂರು ಹೇಳಿದರು.
ಆದರೆ ಸಚಿವರ ತಡರಾತ್ರಿ ಭೇಟಿ ಹಿನ್ನೆಲೆ ಬಹುಪಾಲು ರೋಗಿಗಳು ನಿದ್ದೆಗೆ ಜಾರಿದ್ದರು. ನಾಮಕಾವಸ್ತೆಗೆ ಒಂದು ವಾರ್ಡ್ ಗೆ ಭೇಟಿ ನೀಡಿದರು. "ಆಸ್ಪತ್ರೆ ಅವ್ಯವಹಾರ ಸರಿಪಡಿಸಲು ತನಿಖಾ ತಂಡ ರಚಿಸಿದ್ದೇನೆ. ವರದಿ ಬಂದ ಬಳಿಕ ಭ್ರಷ್ಟಾಚಾರ ತಡೆದು ಅವ್ಯವಸ್ಥೆ ಸರಿಪಡಿಸುತ್ತೇನೆ. ರೋಗಿಗಳ ಬಳಿ ಹಣ ಕೇಳುವವರನ್ನ ಅಮಾನತು ಮಾಡುತ್ತೇನೆ" ಎಂದು ಭರವಸೆ ನೀಡಿದರು.
ಬೆಳಿಗ್ಗೆ 6ಕ್ಕೆ ಎಚ್ಚರವಾದ ಬಳಿಕ ಬೋವಿಗುರುಪೀಠಕ್ಕೆ ತೆರಳಿದ ಅವರು, ಬೋವಿ ಮಠದಲ್ಲಿ ಶಿವಲಿಂಗ ಪೂಜೆ ಸಲ್ಲಿಸಿ ನಂತರ ಬೆಳಿಗ್ಗೆ 9 ಗಂಟೆಗೆ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ಮುಂದುವರೆಸಿದ್ದಾರೆ. ಈ ಸಮಯದಲ್ಲಿ ಆರೋಗ್ಯ ಸಚಿವರನ್ನು ಗುತ್ತಿಗೆ ಆಧಾರಿತ ನೌಕರರು ಭೇಟಿ ಮಾಡಿ ಉದ್ಯೋಗ ಭದ್ರತೆ ನೀಡುವಂತೆ ಮನವಿ ಸಲ್ಲಿಸಿದರು.
ಗುತ್ತಿಗೆ ಆಧಾರಿತ ನೌಕರರನ್ನು ಕೆಲಸದಿಂದ ಬಿಡುಗಡೆಗೊಳಿಸುವ ನಿರ್ಧಾರ ಕೈಬಿಡುವಂತೆ ಮನವಿ ಮಾಡಿದ್ದಾರೆ.












Click it and Unblock the Notifications