ಲಾಕ್ ಡೌನ್ ಉಲ್ಲಂಘಿಸಿ ಜೈಲು ಸೇರಬೇಡಿ; ಎಸ್ಪಿ ರಾಧಿಕಾ
ಚಿತ್ರದುರ್ಗ, ಏಪ್ರಿಲ್ 08: ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಆದೇಶಿಸಿರುವ ಲಾಕ್ ಡೌನ್ ಉಲ್ಲಂಘಿಸಿದರೆ ಎರಡು ವರ್ಷ ಜೈಲು ಶಿಕ್ಷೆಯಾಗುತ್ತದೆ, ಹೀಗಾಗಿ ನಾಗರಿಕರು ಎಚ್ಚರವಹಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಧಿಕಾ ಎಚ್ಚರಿಕೆ ನೀಡಿದ್ದಾರೆ.
ಇಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, "ನಾಗರಿಕರು ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಹೊರಗೆ ಬರಬೇಕು. ಅನಗತ್ಯವಾಗಿ ತಿರುಗಾಡಿ ಕಾನೂನು ಉಲ್ಲಂಘನೆ ಮಾಡಬಾರದು. ಜನರ ಆರೋಗ್ಯ ಕಾಪಾಡುವುದು ಸರ್ಕಾರದ ಉದ್ದೇಶ. ಜನರು ಅವರ ಆರೋಗ್ಯದ ಬಗ್ಗೆ ಎಚ್ಚರ ವಹಿಸಬೇಕು. ಮನೆಯಲ್ಲೇ ಇದ್ದು ಅವರ ಮತ್ತು ಕುಟುಂಬದ ಆರೋಗ್ಯ ಕಾಪಾಡಿಕೊಳ್ಳಬೇಕು" ಎಂದು ಸಲಹೆ ನೀಡಿದರು.
ಮನೆಯಿಂದ ಹೊರಗೆ ಬಂದು ಅನಗತ್ಯವಾಗಿ ಕೇಸ್ ಹಾಕಿಸಿಕೊಳ್ಳಬೇಡಿ. ಲಾಕ್ ಡೌನ್ ಪೂರ್ಣಗೊಂಡ ಮೇಲೆ ಸಮಸ್ಯೆ ಅನುಭವಿಸಬೇಕಾಗುತ್ತದೆ. ಸೀಜ್ ಮಾಡಿದ ವಾಹನಗಳನ್ನು ಬಿಡಿಸಿಕೊಳ್ಳುವುದು ಸಹ ತುಂಬಾ ಕಷ್ಟ. ಹಾಗಾಗಿ ಇದರ ಕಡೆ ಸಾರ್ವಜನಿಕರು ಗಮನ ಹರಿಸಬೇಕು ಎಂದು ತಿಳಿವಳಿಕೆ ಹೇಳಿದರು.

ಜಿಲ್ಲೆಯ ವಿವಿಧೆಡೆ ಸುಮಾರು 32 ಚೆಕ್ ಪೋಸ್ಟ್ ತೆರೆಯಲಾಗಿದ್ದು, ಹೊರಗಿನಿಂದ ಬರುವ ವಾಹನಗಳಿಗೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಜಿಲ್ಲೆಯಿಂದ ಹೊರ ಹೋಗುವ ಮತ್ತು ಒಳಬರುವ ಎಲ್ಲ ವಾಹನಗಳ ಬಗ್ಗೆ ಎಚ್ಚರ ವಹಿಸಲಾಗಿದ್ದು, ಲಾಕ್ಡೌನ್ ಉಲ್ಲಂಘನೆ ಮಾಡಿ ತಿರುಗಾಡುತ್ತಿದ್ದವರ ಬಗ್ಗೆ ನಾಗರಿಕರೇ ಇಲಾಖೆಗೆ ಮಾಹಿತಿ ನೀಡಬಹುದು ಎಂದು ಚಿತ್ರದುರ್ಗ ಪೊಲೀಸ್ ಇಲಾಖೆ ತಿಳಿಸಿದೆ.












Click it and Unblock the Notifications