ಭ್ರಷ್ಟಾಚಾರದ ಬಗ್ಗೆ ಬಿಜೆಪಿ ಶಾಸಕರೇ ಬರೆದ ಪತ್ರ ದಾಖಲೆ ಅಲ್ಲವೇ..?: ಸಿಎಂಗೆ ಸಿದ್ದರಾಮಯ್ಯ ತಿರುಗೇಟು
ಶಾಸಕ ಗೂಳಿಹಟ್ಟಿ ಡಿ.ಶೇಖರ್, ಭದ್ರಾ ಮೇಲ್ದಂಡೆ ಕಾಮಗಾರಿಯಲ್ಲಿ ಸುಮಾರು 23 ಸಾವಿರ ಕೋಟಿ ರೂ ಭ್ರಷ್ಟಾಚಾರ ನಡೆದಿದೆ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಇದು ದಾಖಲೆ ಅಲ್ಲವೇ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ತಿರುಗೇಟು ನೀಡಿ
ಚಿತ್ರದುರ್ಗ ಫೆಬ್ರವರಿ 15: ಕಾಂಗ್ರೆಸ್ ಪಕ್ಷದವರು ಭ್ರಷ್ಟಾಚಾರದ ಬಗ್ಗೆ ದಾಖಲೆ ಇಲ್ಲದೆ ಮಾತಾನಾಡುತ್ತಿದ್ದಾರೆ. ಕಾಂಗ್ರೆಸ್ ಬಳಿ ದಾಖಲೆ ಇದ್ದರೆ ಬಿಡುಗಡೆ ಮಾಡಲಿ ಎನ್ನುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಕ್ಯಾದಿಗೆರೆ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸದುರ್ಗ ಬಿಜೆಪಿ ಶಾಸಕ ಗೂಳಿಹಟ್ಟಿ ಡಿ.ಶೇಖರ್ ಅವರು ಭದ್ರಾ ಮೇಲ್ದಂಡೆ ಕಾಮಗಾರಿಯಲ್ಲಿ ಸುಮಾರು 23 ಸಾವಿರ ಕೋಟಿ ರೂಪಾಯಿ ಭ್ರಷ್ಟಾಚಾರ ನಡೆದಿದೆ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಇದು ದಾಖಲೆ ಅಲ್ಲವೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ದಾಖಲೆ ಎಂದರೆ ಏನು..? ಹಣ ಪಡೆದಿದ್ದು ಫೋಟೋ ಇಟ್ಟುಕೊಂಡು ತೋರಿಸಬೇಕಾ..? ಶಾಸಕ ಗೂಳಿಹಟ್ಟಿ 18 ಸಾವಿರ ಕೋಟಿ ರೂಪಾಯಿ ತರಾತುರಿ ಟೆಂಡರ್ ಆಗಿದೆ ಎಂದಿದ್ದಾರೆ. ಜೊತೆಗೆ ಕೇವಲ 7 ದಿನಗಳ ಸಮಯದಲ್ಲಿ ಟೆಂಡರ್ ಕರೆದು, ಪಾರ್ಟಿ ಪಂಡ್ ಪಡೆಯಲು ಶುರು ಮಾಡಿದ್ದೀರಿ ಎಂದು ಬರೆದಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

ಇದೆಲ್ಲವನ್ನೂ ಬಿಜೆಪಿ ಪಕ್ಷದ ಶಾಸಕ ಗೂಳಿಹಟ್ಟಿ ಶೇಖರ್ ಬರೆದಿದ್ದಾರೆ. ಒಂದು ವೇಳೆ ನಮ್ಮ ಆಡಳಿತದಲ್ಲಿ ಈ ಅಕ್ರಮ ಆಗಿದಿದ್ದರೆ ಆಗ ನೀವು ಕಡ್ಲೆ ಪುರಿ ತಿಂತಾ ಇದ್ರಾ ..?. ಎಂದು ಪ್ರಶ್ನೆ ಹಾಕಿದ ಸಿದ್ದರಾಮಯ್ಯ, ನಮ್ಮ ಆಡಳಿತದ ಕಾಲದಲ್ಲೂ ಭ್ರಷ್ಟಾಚಾರ ನಡೆದಿದ್ದರೆ ಅದನ್ನು ಸೇರಿಸಿ ತನಿಖೆ ಮಾಡಯ್ಯ ಎಂದು ಸವಾಲು ಹಾಕಿದರು.
ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಗೆ ಒಂದು ತಿಂಗಳು ಬಾಕಿ ಇದೆ. ಈಗ್ಯಾಕೆ ತರಾತುರಿ. ಕೋಟಿ ಗಟ್ಟಲೇ ಹಣದ ಟೆಂಡರ್ಅನ್ನು ಕಡಿಮೆ ಅವಧಿಯಲ್ಲಿ ಕರೆಯುವ ಉದ್ದೇಶ ಏನು..?. ಪೆಂಡಿಂಗ್ ಬಿಲ್ಸ್ ಯಾರು ಜಾಸ್ತಿ ಹಣ ಕೊಡುತ್ತಾರೆ ಅವರಿಗೆ ಕೊಡುವುದು. ಇದಕ್ಕೂ ಸಿದ್ದರಾಮಯ್ಯ ಸರ್ಕಾರ ಕಾರಣನಾ..? ಸುಮಾರು 20 ಸಾವಿರ ಕೋಟಿ ಪೆಂಡಿಗ್ ಬಿಲ್ ಇದೆ. ಜಾಸ್ತಿ ದುಡ್ಡು ಕೊಟ್ಟವರಿಗೆ ಟೆಂಡರ್ ಕೊಡುತ್ತಾರೆ. ಹೀಗಾಗಿ ಈ ಟೆಂಡರ್ ರದ್ದು ಮಾಡಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಮಾತು ಮುಂದುವರಿಸಿದ ಅವರು, ಸರ್ಕಾರ ಬಂದು 3.5 ವರ್ಷ ಆಗಿದೆ. ಇಲ್ಲಿಯವರೆಗೂ ಕಡ್ಲೆಪುರಿ ತಿಂತಾ ಇದ್ರಾ..? 40% ಕಮಿಷನ್ ಎಂದ ಕೂಡಲೇ ದಾಖಲೆ ಕೊಡಿ ಎಂದು ಶುರು ಮಾಡಿದ್ದಾರೆ. ಮೊದಲೇ ಸಿದ್ದರಾಮಯ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿತ್ತು ಎಂದು ಹೇಳಲು ಕಡುಬು ಸಿಕ್ಕಿಕೊಂಡಿತ್ತಾ..? ಧಮ್ ಇದ್ದರೆ ಭ್ರಷ್ಟಾಚಾರದ ತನಿಖೆ ಮಾಡಿಸಲಿ ಎಂದು ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.












Click it and Unblock the Notifications