ಬಾದಾಮಿ; ಮತ್ತೆ ಸಿದ್ದರಾಮಯ್ಯ, ಶ್ರೀರಾಮುಲು ಎದುರಾಳಿಗಳು?
ಚಿತ್ರದುರ್ಗ, ಜುಲೈ 13; 2018ರ ವಿಧಾನಸಭಾ ಚುನಾವಣೆಯಲ್ಲಿ ಬಾದಾಮಿ ವಿಧಾನಸಭಾ ಕ್ಷೇತ್ರ ಕುತೂಹಲ ಕೆರಳಿಸಿತ್ತು. ಕಾರಣ ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಮತ್ತು ಬಿ. ಶ್ರೀರಾಮುಲು ಕ್ಷೇತ್ರದಲ್ಲಿ ಎದುರಾಳಿಗಳಾಗಿದ್ದರು. ಸಿದ್ದರಾಮಯ್ಯ ಗೆದ್ದಿದ್ದರು.
ಮಂಗಳವಾರ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಹಿರೇಹಳ್ಳಿ ಗ್ರಾಮದಲ್ಲಿ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಈ ಕುರಿತು ಮಾತನಾಡಿದರು. "ಬಾದಾಮಿಯಲ್ಲಿ ನನಗೆ ಸ್ವಲ್ಪದರಲ್ಲೇ ಸೋಲಾಯಿತು" ಎಂದರು.
ಪ್ರತಿಪಕ್ಷ ನಾಯಕರಾಗಿರುವ ಸಿದ್ದರಾಮಯ್ಯ ಮತ್ತೆ ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸುವ ವಿಚಾರಕ್ಕೆ ಶ್ರೀರಾಮುಲು ಪ್ರತಿಕ್ರಿಯೆ ನೀಡಿದರು. "ಸಿದ್ಧರಾಮಯ್ಯ ಸ್ಪರ್ಧೆ ಮಾಡಲಿ. ಆದರೆ ನನ್ನ ಸ್ಪರ್ಧೆ ಬಗ್ಗೆ ಆಯಾ ಸಂದರ್ಭದಲ್ಲಿ ಪಕ್ಷ ನಿರ್ಧರಿಸಲಿದೆ" ಎಂದು ಸಚಿವರು ಸ್ಪಷ್ಟಪಡಿಸಿದರು.
Recommended Video


"ಕಳೆದ ಬಾರಿ ಬಾದಾಮಿಯಿಂದ ಸ್ಪರ್ಧಿಸಲು ಭಗವಂತ ನೀಡಿದ ಅವಕಾಶ ಎಂದು ಭಾವಿಸಿದ್ದೆ. ನೆಹರು ಕುಟುಂಬ, ದೊಡ್ಡ ವ್ಯಕ್ತಿಗಳು 2 ಕಡೆ ಸ್ಪರ್ಧಿಸುತ್ತಿದ್ದಾರೆ. ವಾಲ್ಮೀಕಿ ಸಮಾಜದ ನನಗೆ ಎರಡು ಕಡೆ ಸ್ಪರ್ಧೆಗೆ ಅವಕಾಶ ಸಿಕ್ಕಿತ್ತು" ಎಂದರು.
"ಬಾದಾಮಿ ಜನರು ನನ್ನನ್ನು ಬೆಂಬಲಿಸಿದರು, ಆದರೆ ಸ್ವಲ್ಪದರಲ್ಲೇ ಸೋಲಾಗಿತ್ತು. ಚುನಾವಣೆ ಸಂದರ್ಭದಲ್ಲಿ ಜನರು ಹಣೆ ಬರಹ ಬರೆಯುತ್ತಾರೆ. ಆಯಾ ಸಂದರ್ಭದಲ್ಲಿ ನನ್ನ ಸ್ಪರ್ಧೆ ಬಗ್ಗೆ ಪಕ್ಷ ತೀರ್ಮಾನಿಸಲಿದೆ" ಎಂದು ಶ್ರೀರಾಮುಲು ಹೇಳಿದರು.
"ಮಾಜಿ ಸಿಎಂ ಸಿದ್ಧರಾಮಯ್ಯ ಮತ್ತು ನಾವೆಲ್ಲಾ ಹಿಂದುಳಿದ ಸಮಾಜದಿಂದ ಬಂದವರಾಗಿದ್ದೇವೆ. ಸಿದ್ಧರಾಮಯ್ಯ ಹಿಂದುಳಿದ ಸಮಾಜದ ದೊಡ್ಡ ನಾಯಕ, ಅವರು ಅನೇಕ ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿರುವ ವ್ಯಕ್ತಿಯಾಗಿದ್ದಾರೆ. ಬಡವರು, ಹಿಂದುಳಿದವರ ಪರ ಹೋರಾಟದಿಂದ ಸಿದ್ದರಾಮಯ್ಯ ಮೇಲೆ ಬಂದಿದ್ದಾರೆ. ಅಂಥವರಿಗೆ ಗೌರವ ಕೊಡುವುದು ನಮ್ಮ ಸಂಪ್ರದಾಯವಾಗಿದೆ" ಎಂದು ತಿಳಿಸಿದರು.
"ರಾಜಕಾರಣ ಬಂದ ಸಮಯ ವಿರೋಧಿಸುತ್ತೇನೆ. ರಾಜಕಾರಣದಲ್ಲಿ ನಮ್ಮ ಪಕ್ಷ ಸಿದ್ಧಾಂತ ನಮ್ಮದು, ಅವರ ಪಕ್ಷ ಸಿದ್ಧಾಂತ ಅವರದ್ದು. ಅವರ ವ್ಯಕ್ತಿತ್ವ ಮತ್ತು ಹಿಂದುಳಿದ ಸಮಾಜದ ವಿಚಾರದಲ್ಲಿ ಗೌರವ ನೀಡುತ್ತೇವೆ" ಎಂದು ಶ್ರೀರಾಮುಲು ಹೇಳಿದರು.












Click it and Unblock the Notifications