ಮುರುಘಾ ಶ್ರೀಗಳಿಗೆ ವಿಚಾರಣಾಧೀನ ಕೈದಿ ನಂಬರ್ 2261
ಚಿತ್ರದುರ್ಗ, ಸೆಪ್ಟೆಂಬರ್ 2; ಪೋಕ್ಸೋ ಪ್ರಕರಣದಲ್ಲಿ ಕೊನೆಗೂ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರನ್ನು ಗುರುವಾರ ರಾತ್ರಿ ಬಂಧಿಸಲಾಗಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮೈಸೂರಿನಲ್ಲಿ ಮಠದ ವಸತಿ ನಿಲಯದ ವಿದ್ಯಾರ್ಥಿನಿಯರು ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿದ 6 ದಿನಗಳ ಬಳಿಕ ಮುರುಘಾ ಶರಣರನ್ನು ಗುರುವಾರ ಬಂಧಿಸಲಾಗಿದೆ. ಶುಕ್ರವಾರ ಮುಂಜಾನೆ ಮುರುಘಾ ಶರಣರನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶರು ಸ್ವಾಮೀಜಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಚಿತ್ರದುರ್ಗದ ಜಿಲ್ಲಾ ಕೇಂದ್ರ ಕಾರಾಗೃದಲ್ಲಿರುವ ಸ್ವಾಮೀಜಿಗಳಿಗೆ ಜೈಲು ಸಿಬ್ಬಂದಿ ವಿಚಾರಣಾಧೀನ ಕೈದಿ ನಂಬರ್ 2261 ಸಂಖ್ಯೆಯನ್ನು ನೀಡಿದ್ದಾರೆ. ಶ್ರೀಗಳಿಗೆ ಎದೆನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಶುಕ್ರವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

ಪೊಲೀಸ್ ವಶಕ್ಕೆ ಪಡೆಯುತ್ತೇವೆ : ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆ ಮುರುಘಾ ಶರಣರನ್ನು ಬಂಧನದ ನಂತರ ಪ್ರತಿಕ್ರಿಯಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್, "ಮುರುಘಾಶ್ರೀಗಳನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ವಶಕ್ಕೆ ಪಡೆಯುತ್ತೇವೆ" ಎಂದು ಹೇಳಿದ್ದಾರೆ.
"ಶ್ರೀಗಳನ್ನು ಇನ್ನೂ ವಿಚಾರಣೆ ಮಾಡುವುದು ಬಾಕಿ ಇದೆ. ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ, ಉಳಿದ ಮೂವರು ಆರೋಪಿಗಳನ್ನೂ ಬಂಧನ ಮಾಡುತ್ತೇವೆ. ಸಾಕ್ಷ್ಯಾಧಾರ ಕಲೆಹಾಕಲು ತಡವಾದ ಕಾರಣ ಬಂಧನ ವಿಳಂಬವಾಗಿತ್ತು" ಎಂದರು.
"ಇನ್ನೂ ಪ್ರಕರಣದ 2ನೇ ಆರೋಪಿ ಹಾಸ್ಟೆಲ್ ವಾರ್ಡನ್ರನ್ನು ಈಗಾಗಲೆ ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸಲಾಗುತ್ತಿದೆ. ವಿಚಾರಣೆಗೆ ಹಾಜರಾಗಲು ಉಳಿದ ಮೂವರಿಗೆ ನೋಟಿಸ್ ನೀಡುತ್ತೇವೆ, ಆರೋಪಿಗಳ ಪತ್ತೆಗೂ ಕ್ರಮ ಕೈಗೊಳ್ಳಲಾಗುವುದು" ಎಂದು ಪರಶುರಾಮ್ ತಿಳಿಸಿದ್ದಾರೆ.
ಕಾನೂನಿಗೆ ಗೌರವ ನೀಡಿ ಶರಣಾಗಿದ್ದಾರೆ; ಮುರುಘಾ ಶರಣರ ಬಂಧನದ ಕುರಿತು ಪ್ರತಿಕ್ರಿಯೆ ನೀಡಿರುವ ಮಠದ ಪರ ವಕೀಲ ಉಮೇಶ್, "ಮುರುಘಾ ಮಠದ ಶ್ರೀಗಳನ್ನು ಬಂಧಿಸಿಲ್ಲ. ಶ್ರೀಗಳು ಕಾನೂನಿಗೆ ಗೌರವ ನೀಡಿ ಸ್ವತಃ ಶರಣಾಗಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಪ್ರಾಥಮಿಕ ವಿಚಾರಣೆ ನಡೆಸಲಿದ್ದಾರೆ. ಮಹಿಳಾ ವಾರ್ಡನ್ ಹೇಳಿಕೆ ಆಧಾರದ ಮೇಲೆ ಬಂಧನ ಆಗಿಲ್ಲ" ಎಂದು ಮಾಹಿತಿ ನೀಡಿದ್ದಾರೆ.












Click it and Unblock the Notifications