Republic day 2023: ಚಿತ್ರದುರ್ಗ ಜಿಲ್ಲೆ ಅಭಿವೃದ್ಧಿಗೆ ಬಿ.ಸಿ ಪಾಟೀಲ್ ನೀಡಿದ ಭರವಸೆಗಳಿವು
ಚಿತ್ರದುರ್ಗ, ಜನವರಿ, 26: ಭಿನ್ನತೆಯಲ್ಲಿ ಏಕತೆಯನ್ನು ಸಾಧಿಸಿದ ರಾಷ್ಟ್ರ ಭಾರತವಾಗಿದೆ. ಸಂವಿಧಾನದಿಂದಾಗಿ ದೇಶಕ್ಕೆ ಭದ್ರ ಬುನಾದಿ ಲಭಿಸಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ನಗರದ ಶ್ರೀ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ಗುರುವಾರ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾದ 74ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ಬಳಿಕ ಅವರು ಮಾತನಾಡಿದರು. ಸಂವಿಧಾನ ರಚನೆ ಪೂರ್ಣಗೊಳಿಸಲು 2 ವರ್ಷ 11 ತಿಂಗಳು ಬೇಕಾಯಿತು. ಈ ಸಂವಿಧಾನ 1950 ಜನವರಿ 26 ರಂದು ಜಾರಿಗೆ ಬಂದಿದೆ. ಇದರ ನೆನಪಿಗಾಗಿ ಗಣರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಅಚರಣೆ ಮಾಡಲಾಗುತ್ತಿದೆ. ಪ್ರಜೆಗಳು ಆಳುವವರನ್ನು ಆಯ್ಕೆ ಮಾಡುತ್ತಾರೆ. ಈ ಮೂಲಕ ಪ್ರಜೆಗಳೇ ಸ್ವತಃ ಆಡಳಿತ ನಡೆಸುವ ಮಾದರಿ ದೇಶದಲ್ಲಿದೆ.
Karnataka Assembly Election 2023: ಚಿತ್ರದುರ್ಗ ಜಿಲ್ಲೆಯಲ್ಲಿನ ಟಿಕೆಟ್ ಆಕಾಂಕ್ಷಿಗಳು
ಚಿತ್ರದುರ್ಗ ಐತಿಹಾಸಿಕ ನಗರ, ವೀರಮದಕರಿ ಆಳಿದ ನಾಡು. ಇಲ್ಲಿನ ಒನಕೆ ಓಬವ್ವ ನಾಡಿಗೆ ಮಾದರಿಯಾಗಿದ್ದಾಳೆ. ದೇಶದ ಆರ್ಥಿಕತೆ ಅಭಿವೃದ್ಧಿ ಹೊಂದುತ್ತಿದೆ. ಭಾರತ ಆರ್ಥಿಕತೆಯಲ್ಲಿ ಅಭಿವೃದ್ಧಿ ಹೊಂದಿದ ಜಗತ್ತಿನ 3ನೇ ಅತಿ ದೊಡ್ಡ ರಾಷ್ಟ್ರವಾಗಿದೆ. ಕೋವಿಡ್ ಮಹಾಮಾರಿಗೆ ದೇಶದಲ್ಲಿ ಲಸಿಕೆ ಕಂಡುಹಿಡಲಾಗಿದೆ. ಹಾಗೆಯೇ ಹೊರದೇಶಗಳಿಗೂ ಲಸಿಕೆ ಸರಬಾರಾಜು ಮಾಡಲಾಗುತ್ತಿದೆ ಎಂದರು.
ಜಿಲ್ಲೆಗೆ ಹಲವು ಯೋಜನೆಗಳ ಜಾರಿ
ಚಿತ್ರದುರ್ಗ ಜಿಲ್ಲೆ ಅಭಿವೃದ್ಧಿ ಹೊಂದುತ್ತಿದ್ದು, ಭದ್ರ ಮೇಲ್ದಂಡೆ ಯೋಜನೆ, ವೈದ್ಯಕೀಯ ವಿಜ್ಞಾನ ಕಾಲೇಜು, ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲು ಯೋಜನೆ ಜಾರಿ ಗೊಳಿಸಲಾಗುತ್ತಿದೆ. ಸರ್ಕಾರದಿಂದ ರೈತರಿಗಾಗಿ ಹಲವು ಯೋಜನೆ ಹಾಕಿಕೊಳ್ಳಲಾಗಿದೆ. ರೈತ ವಿದ್ಯಾನಿಧಿ ಮೂಲಕ ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗಿದೆ. ಕೃಷಿ ವಿ.ವಿ.ಗಳಲ್ಲಿ ರೈತರ ಮಕ್ಕಳಿಗೆ ಶೇಕಡಾ 50ರಷ್ಟು ಸ್ಥಾನ ಮೀಸಲು ಇಡಲಾಗಿದೆ ಎಂದರು.
ಡೀಸೆಲ್ಗೆ ಸಹಾಯಧನ, ಭರವಸೆ
ಶೀಘ್ರದಲ್ಲೇ ಮುಖ್ಯಮಂತ್ರಿಗಳು ರೈತಶಕ್ತಿ ಯೋಜನೆಗೆ ಚಾಲನೆ ನೀಡಲಿದ್ದಾರೆ. ಈ ಮೂಲಕ ಗರಿಷ್ಠ 5 ಹೆಕ್ಟೇರ್ವರೆಗೆ ರೈತರು ಬಳಸುವ ಡೀಸೆಲ್ಗೆ ಸಹಾಯಧನ ಒದಗಿಸಲಾಗುವುದು. ಚಿತ್ರದುರ್ಗ ಜಿಲ್ಲೆಯಲ್ಲಿ 200 ಗ್ರಾಮ ಒನ್ ಕೇಂದ್ರಗಳನ್ನು ತೆರೆಯಲಾಗಿದೆ. ಇಲ್ಲಿ ರೈತರಿಗೆ ಪಹಣಿ ಸೇರಿದಂತೆ ಹಲವು ಸೇವೆಗಳನ್ನು ನೀಡಲಾಗುವುದು. ಆರೋಗ್ಯ ಸೇವೆಯನ್ನು ಜನರಿಗೆ ತಲುಪಿಸಲು ನಮ್ಮ ಕ್ಲೀನಿಕ್ ತೆರೆಯಲಾಗಿದೆ. ಜಿಲ್ಲೆಯ ಕೆರೆಗಳನ್ನು ತುಂಬಿಸಿ ರೈತರ ಕಣ್ಣೀರು ಒರೆಸು ಕೆಲಸ ಮಾಡಲಾಗಿದೆ ಎಂದರು.
ಗಮನ ಸೆಳೆದ ಪಥಸಂಚಲನ
ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಜರುಗಿದ ಪಥ ಸಂಚಲನದಲ್ಲಿ ನಾಗರಿಕ ಪೊಲೀಸ್, ಗೃಹರಕ್ಷಕ, ಅಬಕಾರಿ, ಅರಣ್ಯ, ಎನ್ಸಿಸಿ, ಸೇವಾದಳ, ಸ್ಕೌಟ್ಸ್ ಮತ್ತು ಗೈಡ್ಸ್, ಮೊರಾರ್ಜಿ ದೇಸಾಯಿ ಸೇರಿದಂತೆ ನಗರದ ವಿವಿಧ ಶಾಲಾ -ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಬಾರಿಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲಾ -ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಗಮನ ಸೆಳೆದ ವಿವಿಧ ಬಗೆಯ ನೃತ್ಯಗಳು
ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಾಷ್ಟ್ರದ ವೈವಿಧ್ಯತೆ ಹಾಗೂ ಭಾವೈಕ್ಯತೆ ಸಾರುವ ನೃತ್ಯ ರೂಪಕಗಳನ್ನು ಪ್ರಸ್ತತ ಪಡಿಸಿದರು. ಗಾರ್ಡಿಯನ್ ಏಂಜಲ್ಸ್ ಶಾಲೆಯ ವಿದ್ಯಾರ್ಥಿಗಳು ಜಲಯನ್ ವಾಲಾಬಾಗ್ ದುರಂತ ನೆನಪಿಸುವ ನೃತ್ಯ, ಆರ್.ಆರ್.ಆರ್ ಚಲಚಿತ್ರದ ಶೋಲೆ ಗೀತೆಯೊಂದಿಗೆ ಪ್ರದರ್ಶಿಸಿದ್ದು ಜನರ ಗಮನ ಸಳೆಯಿತು. ಅಗಸಕಲ್ಲು ಸರ್ಕಾರಿ ಪ್ರೌಢಶಾಲೆ ಹಾಗೂ ವೆಸ್ಟ್ರನ್ ಹಿಲ್ಸ್ ಪ್ರೌಡಶಾಲೆಯ 200ಕ್ಕೂ ವಿದ್ಯಾರ್ಥಿಗಳು ಸಂಯುಕ್ತವಾಗಿ ದೇಶಭಕ್ತಿ ಸಾರುವ ಖ್ಯಾತ ಕನ್ನಡ ಮತ್ತು ಹಿಂದಿ ಚಲನಚಿತ್ರ ಗೀತೆಗಳಿಗೆ ನೃತ್ಯ, ಹಾಗೂ ಭಾರತೀಯ ಸೇನೆಯ ಮಹತ್ವವನ್ನು ಸಾರಿದರು. ಇದಕ್ಕೂ ಮುನ್ನ ಜಿಲ್ಲೆಯ 14 ಸಾಧಕರನ್ನು ಜಿಲ್ಲಾಡಳಿತದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಗರ ಸಭೆ ಅಧ್ಯಕ್ಷೆ ತಿಪ್ಪಮ್ಮ, ಜಿಲ್ಲಾಧಿಕಾರಿ ದಿವ್ಯಪ್ರಭು.ಜಿ.ಆರ್.ಜೆ, ಜಿಲ್ಲಾ ಪಂಚಾಯತ್ ಸಿಇಓ ಎಂ.ಎಸ್.ದಿವಾಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರುಶುರಾಮ್, ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ಉಪವಿಭಾಗಧಿಕಾರಿ ಆರ್.ಚಂದ್ರಯ್ಯ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಚ್.ಕುಮಾರಸ್ವಾಮಿ, ಜಂಟಿ ಕೃಷಿ ನಿರ್ದೇಶಕ ಪಿ.ರಮೇಶ್, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಮಧುಸೂಧನ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ರಂಗಸ್ವಾಮಿ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ರವಿಶಂಕರ್ ರೆಡ್ಡಿ, ನಗರ ಸಭೆ ಆಯುಕ್ತ ಸತೀಶ್ ರೆಡ್ಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಇನ್ನು ಹಿರಿಯೂರಿನಲ್ಲಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಧ್ವಜಾರೋಹಣ ನೆರವೇರಿಸಿದರು. ಚಳ್ಳಕೆರೆಯಲ್ಲಿ ಶಾಸಕ ಟಿ. ರಘುಮೂರ್ತಿ, ಹೊಳಲ್ಕೆರೆ ನಗರದಲ್ಲಿ ಶಾಸಕ ಎಂ. ಚಂದ್ರಪ್ಪ ಹಾಗೂ ಹೊಸದುರ್ಗ ನಗರದಲ್ಲಿ ಶಾಸಕ ಗೂಳಿಹಟ್ಟಿ ಡಿ.ಶೇಖರ್ ಧ್ವಜಾರೋಹಣ ನೆರವೇರಿಸಿದರು.