ಚಿತ್ರದುರ್ಗದಲ್ಲಿ ವರುಣನ ಅಬ್ಬರಕ್ಕೆ ತತ್ತರಿಸಿದ ಜನತೆ, ಮನೆಗಳಿಗೆ ನುಗ್ಗಿದ್ದ ನೀರು..!
ಚಿತ್ರದುರ್ಗ, ಜೂನ್ 6 : ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಭಾನುವಾರ ತಡರಾತ್ರಿ ಗುಡುಗು, ಮಿಂಚು, ಆಲಿಕಲ್ಲು ಸಹಿತ ಮಳೆಯಾಗಿದೆ. ವರುಣನ ಅಬ್ಬರಕ್ಕೆ ಜನರು ತತ್ತರಿಸಿದ್ದಾರೆ.
ಹಿರಿಯೂರು ನಗರ ಸೇರಿದಂತೆ ತಾಲ್ಲೂಕಿನ ಬಹುತೇಕ ಭಾಗಗಳಲ್ಲಿ ಭಾರೀ ಮಳೆಯಾಗಿದ್ದು ಹಲವೆಡೆ ಭಾರೀ ಅವಾಂತರ ಸೃಷ್ಟಿಸಿದೆ. ನಗರದ ಸಿಎಂ ಬಡಾವಣೆಯ ಅಂಬೇಡ್ಕರ್ ಶಾಲೆ ಬಳಿ ಅನೇಕ ಮನೆಗಳಿಗೆ ದೊಡ್ಡ ಪ್ರಮಾಣದಲ್ಲಿ ನೀರು ನುಗ್ಗಿದ್ದು ಇದರಿಂದ ಜನರು ಜೀವನ ಅಸ್ತವ್ಯಸ್ತಗೊಂಡಿದೆ.
ಇನ್ನು ತಾಲ್ಲೂಕಿನ ಕಾತ್ರಿಕೇನಹಳ್ಳಿ ಚೆಕ್ ಡ್ಯಾಂ ತುಂಬಿ ಭೋರ್ಗರೆಯುತ್ತಿದ್ದರೆ ಮತ್ತೊಂದು ಕಡೆ ಮದ್ದೇರುಹಳ್ಳ ಸಹ ಸ್ವಲ್ಪಪ್ರಾಣದಲ್ಲಿ ಹರಿಯುತ್ತಿದೆ. ಜಿಲ್ಲೆಯ ಏಕೈಕ ಜೀವನಾಡಿಯಾಗಿರುವ ವಾಣಿ ವಿಲಾಸ ಜಲಾಶಯಕ್ಕೆ 5300 ಕ್ಯೂಸೆಕ್ ನೀರು ಒಳಹರಿವು ಹೆಚ್ಚಿದೆ.
ಪ್ರಸ್ತುತ ಜಲಾಶಯದ ನೀರಿನ ಮಟ್ಟ 120.60 ಅಡಿ ನೀರಿದೆ. ಸೋಮವಾರ ಸಹ ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ. ಜಲಾಶಯದ ಮೇಲ್ಭಾಗದಲ್ಲಿ ಹೆಚ್ಚು ಮಳೆ ಬಂದರೆ ವಿವಿ ಸಾಗರ ಡ್ಯಾಂಗೆ ನೀರು ಹರಿದು ಬರುವ ನಿರೀಕ್ಷೆಯಿದೆ.

ಮಳೆ ವಿವರ : ಹಿರಿಯೂರು ತಾಲ್ಲೂಕಿನಲ್ಲಿ ಸುರಿದ ಮಳೆಯ ವಿವರ ಈ ರೀತಿ ಇದೆ. ಹಿರಿಯೂರು 83.0 ಮಿಲಿ ಮೀಟರ್, ಬಬ್ಬೂರು 85.6 ಮಿಲಿ ಮೀಟರ್, ಇಕ್ಕನೂರು 52.4, ಈಶ್ವರಗೆರೆ 40.2, ಸುಗೂರು 17.3 ಮಿಲಿ ಮೀಟರ್ ಮಳೆಯಾಗಿದೆ. ಜೆಜಿ ಹಳ್ಳಿಯಲ್ಲಿ ಯಾವುದೇ ಮಳೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಳಿದಂತೆ ಹೊಳಲ್ಕೆರೆ, ಹೊಸದುರ್ಗ, ಮೊಳಕಾಲ್ಮೂರು, ಚಿತ್ರದುರ್ಗ ಭಾಗದಲ್ಲೂ ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಕಳೆದ ಇಪ್ಪತ್ತು ದಿನಗಳ ಹಿಂದೆಯಷ್ಟೇ ಮಳೆರಾಯನ ಆಗಮನವಾಗಿತ್ತು. ಸೋಮವಾರವೂ ಸಹ ಮೋಡಕವಿದ ವಾತಾವರಣ ಉಂಟಾಗಿದ್ದು ಮಳೆ ಬರುವ ಮುನ್ಸೂಚನೆ ಇದೆ. ಹೆಚ್ಚು ಮಳೆ ಬಂದಿರುವುದರಿಂದ ಹಳ್ಳ ಕೊಳ್ಳಗಳು, ಚೆಕ್ ಡ್ಯಾಂ ತುಂಬಿ ಹರಿಯುತ್ತಿವೆ. ರೈತರ ಕೃಷಿ ಚಟುವಟಿಕೆಗಳು ಗರಿಗೆದರಿಲಿವೆ.

ಗಾಳಿಗೆ ಬಿದ್ದ ಜಿಯೋ ಟವರ್ : ಚಳ್ಳಕೆರೆ ತಾಲ್ಲೂಕಿನಲ್ಲೂ ಸಹ ಮಳೆರಾಯ ಆರ್ಭಟಿಸಿದ್ದು, ಗಾಳಿ ಸಮೇತ ಮಳೆಗೆ ಜಿಯೋ ಟವರ್ ಮುರಿದು ಬಿದ್ದ ಘಟನೆ ಚಳ್ಳಕೆರೆ ತಾಲೂಕು ದುರ್ಗಾವರ ಗ್ರಾಮದಲ್ಲಿ ನಡೆದಿದೆ. ಇನ್ನು ಟವರ್ ಮುರಿದು ಬಿದ್ದ ಹಿನ್ನೆಲೆಯಲ್ಲಿ ಪಕ್ಕದಲ್ಲಿದ್ದ ಅಂಗಡಿವೊಂದು ಜಖಂಗೊಂಡಿದೆ. ಅಂಗಡಿಯಲ್ಲಿ ಯಾರು ಇಲ್ಲದ ಕಾರಣ ಭಾರಿ ಅನಾವುತ ತಪ್ಪಿದೆ. ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.












Click it and Unblock the Notifications