ಚಿತ್ರದುರ್ಗದಲ್ಲಿ ವರುಣನ ಸಿಂಚನ, ಎಲ್ಲೆಲ್ಲಿ ಎಷ್ಟು ಮಳೆಯಾಯಿತು?
ಚಿತ್ರದುರ್ಗ, ಸೆಪ್ಟೆಂಬರ್ 4: ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದ ಎರಡು ಮೂರು ದಿನಗಳಿಂದ ಹದವಾದ ಮಳೆಯಾಗುತ್ತಿದೆ. ಬಿಸಿಲಿಗೆ ಬಾಡುತ್ತಿದ್ದ ಬೆಳೆಗಳು ಇದೀಗ ಮಳೆಯಿಂದ ಕಂಗೊಳಿಸುತ್ತಿವೆ. ವರುಣನ ಆಗಮನ ರೈತರಲ್ಲಿ ಸಮಾಧಾನ ತಂದಿದೆ. ಜಿಲ್ಲೆಯಾದ್ಯಂತ ಮಳೆಯಾಗಿದ್ದು ಕೃಷಿ ಚಟುವಟಿಕೆ ಗರಿಗೆದರಿದೆ.
Recommended Video
ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಾರದ ಹಿನ್ನೆಲೆ ಜಿಲ್ಲೆಯಾದ್ಯಂತ ಬೆಳೆಗಳು ಬಾಡುತ್ತಿದ್ದು, ಸಾವಿರಾರು ರೈತರು ಆತಂಕಕ್ಕೆ ಒಳಗಾಗಿದ್ದರು. ಆದರೆ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಗೆ ಬೆಳೆಗಳು ಚಿಗುರೊಡೆಯುತ್ತಿವೆ. ರೈತರಲ್ಲಿ ಇದೀಗ ಮತ್ತೆ ಆಶಾಭಾವನೆ ಮೂಡಿದೆ.
ಮಳೆ ಮಾಯ; ಚಿತ್ರದುರ್ಗದ ರೈತರಲ್ಲಿ ದಿಗಿಲು ಹುಟ್ಟಿಸಿದೆ ಬಿಸಿಲು
ರಾಗಿ, ಶೇಂಗಾ, ಮೆಕ್ಕೆಜೋಳ ಬೆಳೆದಿದ್ದ ರೈತರು
ರೈತರು ಸಾಲ ಸೂಲ ಮಾಡಿಕೊಂಡು ಬೀಜ, ಗೊಬ್ಬರ ಖರೀದಿಸಿ ಹತ್ತಾರು ಸಾವಿರ ಖರ್ಚು ಮಾಡಿ ರಾಗಿ, ಜೋಳ, ಶೇಂಗಾ, ಮೆಕ್ಕೆಜೋಳ, ಸೂರ್ಯಕಾಂತಿ ಬಿತ್ತನೆ ಮಾಡಿದ್ದರು. ರಾಗಿ, ಶೇಂಗಾ, ಮೆಕ್ಕೆಜೋಳಕ್ಕೆ ಎಡೆಕುಂಟೆ ಹೊಡೆದು, ಕಳೆ ತೆಗೆದು ಗೊಬ್ಬರ ಹಾಕಿದ್ದರು. ಆ ಸಮಯದಲ್ಲಿ ಬೆಳೆಗಳಿಗೆ ಮಳೆ ಬೇಕಿತ್ತು. ಆದರೆ ಮಳೆಯಿಲ್ಲದೇ ರೈತರು ಕಂಗಾಲಾಗಿದ್ದರು.
ಒಂದು ತಿಂಗಳಿಂದ ಮಳೆಯಿಲ್ಲ
ಕಳೆದ ಒಂದು ತಿಂಗಳಿನಿಂದ ಮಳೆ ಬಾರದ ಕಾರಣ ಬಿಸಿಲಿಗೆ ಈ ಬೆಳೆಗಳು ಬಾಡುತ್ತಿದ್ದವು. ಈ ಬೆಳೆಗಳಿಗೆ ಮಳೆಯ ಅವಶ್ಯಕತೆ ತುಂಬಾ ಇತ್ತು. ಜಿಲ್ಲೆಯ ರೈತರು ಫಸಲು ಕೈಕೊಡುವ ಆತಂಕದಲ್ಲಿದ್ದರು. ಇದೀಗ ಜಿಲ್ಲೆಯ ಹಿರಿಯೂರು, ಚಿತ್ರದುರ್ಗ, ಚಳ್ಳಕೆರೆ, ಮೊಳಕಾಲ್ಮೂರು, ಹೊಳಲ್ಕೆರೆ ಸೇರಿದಂತೆ ಹೊಸದುರ್ಗ ತಾಲ್ಲೂಕಿನಲ್ಲೂ ಹದವಾದ ಮಳೆಯಾಗಿದ್ದು ಅನ್ನದಾತರು ನಿಟ್ಟುಸಿರು ಬಿಟ್ಟಿದ್ದಾರೆ.
ಜೂನ್ ನಲ್ಲಿ ತುಂಬಿಹರಿದಿದ್ದ ಹಳ್ಳಕೊಳ್ಳಗಳು
ಜಿಲ್ಲೆಯಲ್ಲಿ ಉತ್ತಮ ಮಳೆ ಸುರಿದಿದ್ದು ಯಾವುದೇ ಹಾನಿಯಾಗಿರುವುದು ವರದಿಯಾಗಿಲ್ಲ. ಜೂನ್ ತಿಂಗಳಲ್ಲಿ ಮಳೆಯಾಗಿದ್ದರಿಂದ ಜಿಲ್ಲೆಯಲ್ಲಿ ಕೆರೆ ಕಟ್ಟೆ ತುಂಬಿ ಹರಿಯುತ್ತಿದ್ದವು. ಚಿತ್ರದುರ್ಗ ಜಿಲ್ಲೆಯ ಮಲ್ಲಾಪುರ ಕೆರೆ ತುಂಬಿ ಕೊಡಿ ಬಿದ್ದು ಗ್ರಾಮದ ಕೆಲವು ಮನೆಗಳು ಜಲಾವೃತವಾಗಿದ್ದವು. ಇಂದು ಕೂಡ ಜಿಲ್ಲೆಯಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ದಾವಣಗೆರೆ ತಾಲೂಕುವಾರು ಮಳೆ ಪ್ರಮಾಣ, ಲಕ್ಷಾಂತರ ಆಸ್ತಿ ನಷ್ಟ
ಚಿತ್ರದುರ್ಗದಲ್ಲಿ ಎಷ್ಟು ಪ್ರಮಾಣದ ಮಳೆ?
ಚಿತ್ರದುರ್ಗ ಜಿಲ್ಲೆಯಲ್ಲಿ 19.8 ಮಿ.ಮೀ ಮಳೆಯಾಗಿರುವುದಾಗಿ ದಾಖಲಾಗಿದೆ. ಚಳ್ಳಕೆರೆಯಲ್ಲಿ 26.6 ಮಿ.ಮೀ., ಹಿರಿಯೂರು 52.0, ಹೊಸದುರ್ಗ 3.2, ಹಿರೆಗೂಂಟನೂರು 3.2, ಭರಮಸಾಗರ 16.0, ಸಿರಿಗೆರೆ 7.4, ತುರುವನೂರು 48.2, ಐನಹಳ್ಳಿ 13.4, ಒಟ್ಟು 135.8 ಮಿ.ಮೀ ಮಳೆ ದಾಖಲಾಗಿದೆ. ಸರಾಸರಿ 19.4 ಮಿ.ಮೀ ಮಳೆ ದಾಖಲಾಗಿದೆ.