ದಲಿತ ಸಂಸದನ ತಡೆದ ಗ್ರಾಮಸ್ಥರು; ಕ್ಷಮೆ ಕೋರಿದ ಶಾಸಕಿ ಪೂರ್ಣಿಮಾ ಶ್ರೀನಿವಾಸ್
ಚಿತ್ರದುರ್ಗ, ಸೆಪ್ಟೆಂಬರ್ 17: ಗುಡಿಸಲು ಮುಕ್ತ ಯೋಜನೆ ಉದ್ದೇಶವಾಗಿ ಊರಿಗೆ ಬಂದ ಸಂಸದರನ್ನು ಗ್ರಾಮದೊಳಗೆ ಬಿಡದೆ ಗ್ರಾಮಸ್ಥರು ತಡೆ ಹಾಕಿದ್ದ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಪೆಮ್ಮನಹಳ್ಳಿಯಲ್ಲಿ ನಡೆದಿದ್ದು, ಇದಕ್ಕೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಶಾಸಕಿ ಕೆ. ಪೂರ್ಣಿಮಾ ಸಮುದಾಯದ ಪರವಾಗಿ ಕ್ಷಮೆ ಕೇಳಿದ್ದಾರೆ.
"ಸಂಸದ ನಾರಾಯಣಸ್ವಾಮಿ ಗೊಲ್ಲರಹಟ್ಟಿಗೆ ಭೇಟಿ ಕೊಟ್ಟ ಸಂದರ್ಭ ಗ್ರಾಮಸ್ಥರು ಈ ರೀತಿ ನಡೆಸಿಕೊಂಡಿದ್ದನ್ನು ಸಮುದಾಯ ಸಹಿಸುವುದಿಲ್ಲ ಹಾಗೂ ಸಮುದಾಯದ ಪರವಾಗಿ ನಾನು ಕ್ಷಮೆ ಕೋರುತ್ತೇನೆ" ಎಂದು ಕೇಳಿಕೊಂಡಿದ್ದಾರೆ.
"ಸಮುದಾಯದಲ್ಲಿ ಶಿಕ್ಷಣದ ಕೊರತೆ ಇದೆ. ಕಾಡುಗೊಲ್ಲರು ಮೂಢನಂಬಿಕೆಗಳಿಗೆ ಇನ್ನೂ ಕಟ್ಟುಬಿದ್ದಿದ್ದಾರೆ. ಈ ಸಂಪ್ರದಾಯಗಳು ಬದಲಾವಣೆ ಆಗಬೇಕಿದೆ. ನಾನು ಹೋದ ಕಡೆಗಳಲ್ಲಿ ನಮ್ಮ ಜನಾಂಗದವರಿಗೆ ಮೊದಲು ಹೇಳುವುದು ಮೂಢನಂಬಿಕೆಯಿಂದ ಹೊರ ಬನ್ನಿ ಎಂದು. ಗೊಲ್ಲರಹಟ್ಟಿಗಳಲ್ಲಿ ಜಾಗೃತಿ ಕಾರ್ಯಕ್ರಮಗಳ ಮೂಲಕ ಬದಲಾವಣೆ ತರಬೇಕಿದೆ" ಎಂದು ಹೇಳಿದರು.

"ಇದರ ಜೊತೆಗೆ ಹಲವು ವರ್ಷಗಳಿಂದ ಸೌಲಭ್ಯವಂಚಿತ ಈ ಸಮಾಜವನ್ನು ಸರ್ಕಾರ ಕೂಡ ಕಡೆಗಣಿಸಿದೆ. ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಗೊಲ್ಲರಹಟ್ಟಿ ಅಭಿವೃದ್ಧಿಯತ್ತ ಗಮನ ಕೊಟ್ಟಾಗ ಜನರ ಮನಸ್ಥಿತಿಯೂ ಬದಲಾವಣೆ ಆಗುತ್ತದೆ. ಸಮಾಜದ ಮುಖಂಡರು, ಯುವಕರು, ವಿದ್ಯಾವಂತರು ಎಲ್ಲರು ಸೇರಿ ಮೂಢನಂಬಿಕೆಗಳನ್ನು ಹೋಗಲಾಡಿಸಲು ಸಾಕಷ್ಟು ಪ್ರಯತ್ನ ಮಾಡಬೇಕಿದೆ" ಎಂದು ಹೇಳಿದರು.












Click it and Unblock the Notifications