ವಿವಿ ಸಾಗರ ಡೆಡ್ ಸ್ಟೋರೇಜ್ ಉಳಿಸಲು ಆಗ್ರಹಿಸಿ ಬಂದ್ ಗೆ ಕರೆ
ಹಿರಿಯೂರು, ಜೂನ್ 28: 'ವಿವಿ ಸಾಗರ ಡೆಡ್ ಸ್ಟೋರೇಜ್ ಉಳಿಸಿ ಡ್ಯಾಂ ರಕ್ಷಿಸಿ' ಎಂದು ಜುಲೈ 1ರಂದು ವಾಣಿ ವಿಲಾಸ ಹೋರಾಟ ಸಮಿತಿಯಿಂದ ಹಿರಿಯೂರು ಬಂದ್ ಗೆ ಕರೆ ನೀಡಲಾಗಿದ್ದು, ತಾಲ್ಲೂಕಿನ ಕನ್ನಡಪರ ಸಂಘಟನೆಗಳು, ಸಾಹಿತ್ಯ ಪರಿಷತ್ ಸೇರಿದಂತೆ ಎಲ್ಲ ಸಂಘಟನೆಗಳ ಬೆಂಬಲ ಸೂಚಿಸಲಾಗಿದೆ.
ಹಿರಿಯೂರು ಸತತ ಬರಗಾಲಕ್ಕೆ ತುತ್ತಾಗಿದ್ದು, ಕಳೆದ ಹದಿನೈದು ವರ್ಷಗಳಿಂದ ತಾಲ್ಲೂಕಿನಲ್ಲಿ ಯಾವುದೇ ತರಹದ ಮಳೆಯಾಗಿಲ್ಲ. ತೋಟಗಳೆಲ್ಲಾ ಒಣಗಿ, ಕುಡಿಯುವ ನೀರಿಗೆ ಪರದಾಡಬೇಕಿದೆ. ವಿವಿ ಸಾಗರದ ನೀರು 62 ಅಡಿ ಇದ್ದು, ಜಲಾಶಯದ ಹಿನ್ನೀರಿನ ಮಟ್ಟ ಡೆಡ್ ಸ್ಟೋರೇಜ್ ತಲುಪಿದೆ. ಭದ್ರಾ ಮೇಲ್ದಂಡೆ ಕಾಮಗಾರಿಯೂ ವಿಳಂಬವಾಗಿದ್ದು, ವಿವಿ ಸಾಗರಕ್ಕೆ ಭದ್ರಾ ನೀರು ಹರಿದು ಬರಲು ಕನಿಷ್ಠ ಎರಡು ಮೂರು ತಿಂಗಳಾದರೂ ಹಿಡಿಯುತ್ತದೆ. ಇತ್ತ ಇರುವ ಅಲ್ಪ ಸ್ವಲ್ಪ ಡ್ಯಾಂ ನೀರನ್ನೇ ಬಳಸಲಾಗುತ್ತಿದೆ.
ಆದ್ದರಿಂದ, ಈ ನೀರನ್ನು ಬಳಸಬೇಡಿ, ಒಂದು ವೇಳೆ ಬಳಸಿದರೆ ಡ್ಯಾಂಗೆ ತೊಂದರೆಯಾಗುತ್ತದೆ, ಜಲಚರಗಳ ಜೀವಕ್ಕೆ ಕುತ್ತು ಬರುತ್ತದೆ, ಪರಿಸರ ನಾಶವಾಗುತ್ತದೆ. ಡೆಡ್ ಸ್ಟೋರೇಜ್ ನೀರು ಬಳಸಬೇಡಿ ಎಂದು ಬಂದ್ ಗೆ ಕರೆ ನೀಡಲಾಗಿದೆ.

ನಾಳೆ ರೈತ ಮುಖಂಡರು ಹಿರಿಯೂರಿನಲ್ಲಿ ತರಕಾರಿ ಮಾರ್ಕೆಟ್ ಮುಂಭಾಗದಲ್ಲಿ ಸಭೆ ಸೇರಲಿದ್ದು, ಹಿರಿಯೂರು ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್, ಚಳ್ಳಕೆರೆ ಶಾಸಕ ಟಿ, ರಘುಮೂರ್ತಿ, ತಿಪ್ಪಾರೆಡ್ಡಿ, ಗೂಳಿಹಟ್ಟಿ ಶೇಖರ್, ಸಂಸದ ಎ. ನಾರಾಯಣ ಸ್ವಾಮಿ, ಶ್ರೀರಾಮುಲು, ಮಾಜಿ ಸಚಿವ ಜಯಚಂದ್ರ, ಡಿ. ಸುಧಕಾರ್, ಸೇರಿಂದತೆ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಲಿದ್ದಾರೆ.
ಜುಲೈ 1, ಸೋಮವಾರ ಬಂದ್ ಆಚರಿಸಿ, ಡ್ಯಾಂಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು. ಹೋರಾಟದ ಬಗ್ಗೆ ತಾಲ್ಲೂಕಿನ ಮೂಲೆ ಮೂಲೆಗಳಲ್ಲಿಯೂ ಮಾಹಿತಿ ನೀಡಿದ್ದು, ಬೈಕ್ ಜಾಥಾ, ಪಾದಯಾತ್ರೆ, ಆಟೋದಲ್ಲಿ ಪ್ರಚಾರ ಸೇರಿದಂತೆ ಜಾಗೃತಿ ಮೂಡಿಸಿ ಹೋರಾಟಕ್ಕೆ ಸಹಕರಿಸುವಂತೆ ಮನವಿ ಮಾಡಲಾಗಿದೆ ಎಂದು ವಿವಿ ಸಾಗರ ಹೋರಾಟ ಸಮಿತಿ ಅಧ್ಯಕ್ಷ ಕಸವನಹಳ್ಳಿ ರಮೇಶ್ ತಿಳಿಸಿದ್ದಾರೆ.












Click it and Unblock the Notifications