ಗ್ರಾಮಕ್ಕಿಲ್ಲ ಸೂಕ್ತ ರಸ್ತೆ ವ್ಯವಸ್ಥೆ; ಪ್ರಧಾನಿ ಕಚೇರಿ ಸೂಚನೆಗೂ ಸ್ಪಂದಿಸದ ಅಧಿಕಾರಿಗಳು
ಚಿತ್ರದುರ್ಗ, ಅಕ್ಟೋಬರ್ 30: ಭಾರತ ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳೇ ಕಳೆದರೂ ಅದೆಷ್ಟೋ ಗ್ರಾಮಗಳು ಮೂಲಭೂತ ಸೌಲಭ್ಯಗಳಿಂದ ಇಂದಿಗೂ ವಂಚಿತವಾಗಿವೆ.
ಕೆಲವು ಗ್ರಾಮಗಳಲ್ಲಿ ಸರಿಯಾದ ರಸ್ತೆ ಇರುವುದಿಲ್ಲ. ರಸ್ತೆಗಳ ತುಂಬಾ ಗುಂಡಿ ಬಿದ್ದಿದ್ದು, ಮಳೆ ಬಂದರೆ ಗುಂಡಿ ತುಂಬಾ ನೀರು ನಿಂತು, ಕೆಸರು ಗದ್ದೆಯಾಗುತ್ತಿದ್ದು, ಗ್ರಾಮಸ್ಥರು ಓಡಾಡದಂತೆ ಆಗಿರುತ್ತದೆ. ಗ್ರಾಮದಲ್ಲಿ ಸಿಸಿ ರಸ್ತೆಗಳು ನಿರ್ಮಾಣವಾಗಿಲ್ಲ, ಇಂಥದೊಂದು ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ಕಾಣಬಹುದಾಗಿದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಶೇಷಪ್ಪನಹಳ್ಳಿ ಹಿಂದುಳಿದ ಗ್ರಾಮವಾಗಿದ್ದು, ಮೂಲಭೂತ ಸೌಲಭ್ಯಗಳನ್ನು ದೊರಕಿಸುವಂತೆ ಸ್ಥಳೀಯ ಶಾಸಕರಿಗೆ, ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಇದುವರೆಗೂ ಕ್ಯಾರೇ ಎಂದಿಲ್ಲ.

ಇದರಿಂದ ಬೇಸತ್ತ ಶೇಷಪ್ಪನಹಳ್ಳಿ ಗ್ರಾಮದ "ಕಿರಣ್ ಯುವಾ ಎಸ್.ಪಿ' ಎನ್ನುವ ಯುವಕ ಪ್ರಧಾನಮಂತ್ರಿಗಳ ಕಚೇರಿಗೆ ಆನ್ ಲೈನ್ ಮೂಲಕ ದೂರು ನೀಡಿದ್ದಾರೆ. ಯುವಕನ ದೂರಿಗೆ ಸ್ಪಂದನೆ ದೊರೆತಿದ್ದು, ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಪ್ರಧಾನಮಂತ್ರಿಗಳ ಕಾರ್ಯಾಲಯದಿಂದ ಸೂಚನೆ ನೀಡಲಾಗಿದೆ.

ಪ್ರಧಾನಿ ಕಾರ್ಯಾಲಯದಿಂದ ಕ್ರಮಕೈಗೊಳ್ಳಲು ಸೂಚನೆ ನೀಡಿದರೂ, ಸ್ಥಳೀಯ ಅಧಿಕಾರಿಗಳು ಕಿಮ್ಮತ್ತು ಕೊಡುತ್ತಿಲ್ಲ ಎಂದು ಪ್ರಧಾನಮಂತ್ರಿಗಳ ಕಚೇರಿ ಆದೇಶ ಲಗತ್ತಿಸಿ ಯುವಕನಿಂದ ಟ್ವೀಟ್ ಮಾಡಲಾಗಿದೆ.












Click it and Unblock the Notifications