ಮುರುಘಾ ಶ್ರೀಗಳ ಪೋಕ್ಸೋ ಕೇಸಿಗೆ ಸ್ಫೋಟಕ ಟ್ವಿಸ್ಟ್!
ಚಿತ್ರದುರ್ಗ, ಸೆ 5: ಮುರುಘಾ ಮಠದ ಶರಣರ ವಿರುದ್ದದ ಪೋಕ್ಸೋ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಬಾಲಕಿಯರ ಚಿಕ್ಕಪ್ಪನ ಎಂಟ್ರಿಯಾಗಿದೆ. ಪ್ರಕರಣದ ಹಿಂದೆ ಮಠದ ಹಿಂದಿನ ಆಡಳಿತಾಧಿಕಾರಿಯ ಕೈವಾಡವಿದೆ ಎಂದು ದೂರು ದಾಖಲಾಗಿದೆ.
ಈ ನಡುವೆ ಪೊಲೀಸ್ ಕಸ್ಟಡಿ ಮುಗಿಯುವವರೆಗೆ ಜಾಮೀನು ಅರ್ಜಿ ಸಲ್ಲಿಸದಂತೆ ಕೋರ್ಟ್ ಶರಣರ ಪರ ವಕೀಲರಿಗೆ ಸೂಚಿಸಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ, ಸದ್ಯಕ್ಕೆ ಮುರುಘಾ ಶ್ರೀಗಳು ಜೈಲಿನಲ್ಲೇ ಕಾಲ ಕಳೆಯಬೇಕಿದೆ.
ಪೊಲೀಸರ ವಿಚಾರಣೆಯ ವೇಳೆ ಶ್ರೀಗಳ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಮತ್ತೆ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇವೆಲ್ಲದರ ನಡುವೆ ಹಿಂದಿನಿಂದ ನಡೆದುಕೊಂಡು ಬರುತ್ತಿದ್ದ ಪದ್ದತಿ ಮುರುಘಾ ಮಠದಲ್ಲಿ ಮುಂದುವರಿಯಲಿದೆ. ಪ್ರತೀ ತಿಂಗಳ ಐದನೇ ತಾರೀಕು ಮಠದಲ್ಲಿ ಸಾಮೂಹಿಕ ವಿವಾಹ ನಡೆಯುವ ಪದ್ದತಿಯಿದೆ.
ಶ್ರೀಗಳ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು ಓರ್ವ ಬಾಲಕಿಯ ಚಿಕ್ಕಪ್ಪ ಚಿತ್ರದುರ್ಗ ಪೊಲೀಸ್ ಮುಖ್ಯಸ್ಥರಿಗೆ ದೂರನ್ನು ಸಲ್ಲಿಸಿದ್ದಾರೆ. ಈ ವಿಚಾರ, ಇಡೀ ಪ್ರಕರಣಕ್ಕೆ ಹೊಸ ಆಯಾಮ ಕೊಡುವ ಸಾಧ್ಯತೆಯಿಲ್ಲದಿಲ್ಲ.

ಹೆಬ್ಬಾಳ ಶಾಖಾ ಮಠದ ಹಿರಿಯ ಸ್ವಾಮೀಜಿಗಳಾದ ಮಹಾಂತ ರುದ್ರಸ್ವಾಮೀಜಿ
ದೇಶಾದ್ಯಂತ ಸದ್ದು ಮಾಡುತ್ತಿರುವ ಮುರುಘಾ ಶ್ರೀಗಳು ಜೈಲು ಸೇರಿದ್ದರಿಂದ ಹೆಬ್ಬಾಳ ಶಾಖಾ ಮಠದ ಹಿರಿಯ ಸ್ವಾಮೀಜಿಗಳಾದ ಮಹಾಂತ ರುದ್ರಸ್ವಾಮೀಜಿ ಅವರನ್ನು ಮುರುಘಾ ಮಠದ ಪ್ರಭಾರ ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ. ಮಠದ ಪರಂಪರೆಯಲ್ಲಿ ಭಕ್ತರು ಈ ರೀತಿಯ ಸನ್ನಿವೇಶವನ್ನು ಎದುರಿಸಲಿಲ್ಲ, ಇದರಿಂದಾಗಿ ಇಂತಹ ಸಮಯದಲ್ಲಿ ಮಹಾಂತ ರುದ್ರಸ್ವಾಮೀಜಿಯವರ ನೇಮಕ ಭಕ್ತವಲಯದಲ್ಲಿ ಆಶ್ಚರ್ಯವನ್ನು ತಂದಿದೆ.

ಕೇಸಿಗೆ ಬಾಲಕಿಯೋರ್ವಳ ಚಿಕ್ಕಪ್ಪ ಎನ್ನುವ ವ್ಯಕ್ತಿಯ ಎಂಟ್ರಿ
ಕೇಸಿಗೆ ಬಾಲಕಿಯೋರ್ವಳ ಚಿಕ್ಕಪ್ಪ ಎನ್ನುವ ವ್ಯಕ್ತಿಯ ಎಂಟ್ರಿಯಾಗಿದೆ. ಈಗಿನ ಎಲ್ಲಾ ವಿದ್ಯಮಾನಕ್ಕೆ ನೇರವಾಗಿ ಬಸವರಾಜನ್ ಎಂಡ್ ಕೋ ಕಾರಣ ಎಂದು ಲಿಖಿತ ದೂರು ದಾಖಲಾಗಿದೆ. ಖಾಲಿ ಕಾಗದದ ಮೇಲೆ ಬಾಲಕಿಯ ಸಹಿ ತೆಗೆದುಕೊಂಡು, ತಮಗೆ ಬೇಕಾದಂತೆ ಕಾಗದದಲ್ಲಿ ಬರೆಯಲಾಗಿದೆ ಎಂದು ಈ ವ್ಯಕ್ತಿ ತನ್ನ ದೂರಿನಲ್ಲಿ ದಾಖಲಿಸಿದ್ದಾರೆ ಎಂದು ಹೇಳಲಾಗುತ್ತಿದೆ. ವಿದ್ಯಮಾನ ನಡೆದು ಇಷ್ಟು ದಿನವಾದ ಮೇಲೆ ಈ ವ್ಯಕ್ತಿ ಯಾಕೆ ಎಂಟ್ರಿ ಕೊಡುತ್ತಿದ್ದಾರೆ ಎನ್ನುವ ಪ್ರಶ್ನೆಯೂ ಸಹಜವಾಗಿ ಸಾರ್ವಜನಿಕರಲ್ಲಿ ಕಾಡಲಾರಂಭಿಸಿದೆ.

ನನ್ನ ಮನೆಯ ಮಗಳು ಬಸವರಾಜನ್ ಅವರ ಮನೆಯಲ್ಲಿದ್ದಳು
ದೂರಿನಲ್ಲಿ, ಜುಲೈ 27ರಂದು ನನ್ನನ್ನು ಕರೆಸಿಕೊಂಡಿದ್ದರು. ಆಗ ನನ್ನ ಮನೆಯ ಮಗಳು ಬಸವರಾಜನ್ ಅವರ ಮನೆಯಲ್ಲಿದ್ದಳು, ಇದನ್ನು ಪ್ರಶ್ನಿಸಿದಾಗ ಈಕೆಯ ವಿದ್ಯಾಭ್ಯಾಸ ಮತ್ತು ಮದುವೆ ಮಾಡಿಸುವ ಜಬಾಬ್ದಾರಿ ನನ್ನದು ಎಂದು ಬಸವರಾಜನ್ ನನ್ನಲ್ಲಿ ಹೇಳಿದ್ದರು. ನಾವು ನಮ್ಮ ಮಗಳನ್ನು ಮನೆಗೆ ಕರೆದುಕೊಂಡು ಬಂದಿದ್ದೇವೆ ಎನ್ನುವ ವಿಚಾರ ಸತ್ಯಕ್ಕೆ ದೂರವಾದದು ಎಂದು ಬಾಲಕಿಯ ಚಿಕ್ಕಪ್ಪ ಲಿಖಿತ ದೂರಿನಲ್ಲಿ ಹೇಳಿಕೊಂಡಿದ್ದಾರೆ.

ಮುರುಘಾ ಶ್ರೀಗಳ ಪೋಕ್ಸೋ ಕೇಸಿಗೆ ಸ್ಪೋಟಕ ಟ್ವಿಸ್ಟ್
ಶ್ರೀಗಳ ವಿರುದ್ದ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ ಎನ್ನುವ ಮಠದ ಪರ ವಕೀಲರ ಆರೋಪದಿಂದಾಗಿ ಬಾಲಕಿಯ ಚಿಕ್ಕಪ್ಪನ ಹೇಳಿಕೆ ಈಗ ಮಹತ್ವವನ್ನು ಪಡೆದುಕೊಂಡಿದೆ. ಇವರ ಲಿಖಿತ ದೂರನ್ನು ಪೊಲೀಸರು ಯಾವ ಆಯಾಮದಲ್ಲಿ ವಿಚಾರಣೆ ನಡೆಸಲಿದ್ದಾರೆ ಎನ್ನುವುದು ಭಕ್ತ ವಲಯದಲ್ಲಿ ಈಗ ಕುತೂಹಲಕ್ಕೆ ಕಾರಣವಾಗಿದೆ. ಬಸವರಾಜನ್ ವಿರುದ್ದದ ದೂರು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಜುಲೈ 27- ಆಗಸ್ಟ್ 26ರ ಅವಧಿಯಲ್ಲಿ ಸಂತ್ರಸ್ತೆ ಬಾಲಕಿಯರು ಎಲ್ಲಿದ್ದರು ಎನ್ನುವುದು ಪೊಲೀಸರಿಗೂ ಪ್ರಶ್ನೆಯಾಗಿಯೇ ಇನ್ನೂ ಉಳಿದುಕೊಂಡಿದೆ.












Click it and Unblock the Notifications