ಲೈಂಗಿಕ ದೌರ್ಜನ್ಯ ಆರೋಪ: ಮುರುಘಾ ಶರಣರ ನಿರೀಕ್ಷಣಾ ಜಾಮೀನು ಅರ್ಜಿ ಸೆ.1ರಂದು ವಿಚಾರಣೆ
ಚಿತ್ರದುರ್ಗಾ, ಆಗಸ್ಟ್ 29: ಮಠದ ವಸತಿ ನಿಲಯದ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು ಕೋರಿ ಮುರುಘಾ ಮಠದ ಶಿವಾಮೂರ್ತಿ ಮುರುಘಾ ಶರಣರ ಪರ ವಕೀಲರು ಚಿತ್ರದುರ್ಗದ ಎರಡನೇ ಸೆಷನ್ಸ್ ಕೋರ್ಟ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯನ್ನು ಸ್ವೀಕರಿಸಿರುವ ನ್ಯಾಯಾಲವು ಅರ್ಜಿ ವಿಚಾರಣೆಯನ್ನು ಸೆಪ್ಟಂಬರ್ 1ಕ್ಕೆ ನಡೆಸುವುದಾಗಿ ತಿಳಿಸಿದೆ.
ವಸತಿ ನಿಲಯದ ಬಾಲಕಿಯರ ಮೇಲೆ ಲೌಂಗಿಕ ದೌರ್ಜನ್ಯ ಆರೋಪದಲ್ಲಿ ಮುರುಘಾ ಮಠದ ಶ್ರೀಗಳ ವಿರುದ್ಧ ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಇದೀಗ ಬಂಧನದ ಭೀತಿಯಲ್ಲಿರುವ ಡಾ. ಶಿವಮೂರ್ತಿ ಶರಣರು ಸೋಮವಾರ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಹಾವೇರಿಯಿಂದ ಸೋಮವಾರ ಬೆಳಗ್ಗೆ ಚಿತ್ರದುರ್ಗದ ಮಠಕ್ಕೆ ವಾಪಾಸಾದ ಬಳಿಕ ಭಕ್ತರನ್ನು ಉದ್ದೇಶಿಸಿ ಮಾತನಾಡಿ, ನಾವೆಲ್ಲರೂ ಈ ಆರೋಪದ ವಿರುದ್ಧ ಶಾಶ್ವತವಾಗಿ ಪರಿಹಾರ ಕಂಡುಕೊಳ್ಳೋಣ. ಇಂತಹ ಆರೋಪಗಳು ಹೊಸತೇನಲ್ಲ, ಈ ಹಿಂದೆ ಒಳಗೆ ನಡೆಯುತ್ತಿತ್ತು, ಈಗ ಹೊರಕ್ಕೆ ಬಂದಿದೆ, ಇದಕ್ಕೆ ತಾರ್ಕಿಕ ಅಂತ್ಯವಾಡೋಣ ಎಂದು ತಿಳಿಸಿದ್ದರು.

ಇದಾದ ನಂತರ ಮಠದಾ ಸಲಹಾ ಸಮಿತಿ ಸಭೆ ನಡೆಸಲಾಗಿತ್ತು. ಸಭೆಯ ಬಳಿಕ ಮುರುಘಾ ಮಠದ ಸಲಹಾ ಸಮಿತಿ ಸದಸ್ಯ ಎನ್ ಬಿ ವಿಶ್ವನಾಥ್ ಮಾತನಾಡಿ, " ಈ ಆರೋಪ ನಮಗೆ ಆಘಾತವುಂಟು ಮಾಡಿದೆ, ಭಕ್ತರು ಹಲವು ಸಮಾಜದ ಮುಖಂಡರು ಶರಣರನ್ನು ಭೇಟಿ ಮಾಡಿ ಚರ್ಚಿಸಿದ್ದೇವೆ, ಸ್ವಾಮೀಜಿಗಳು ಕೂಡ ಆರೋಪವನ್ನು ತಳ್ಳಿ ಹಾಕಿದ್ದಾರೆ ಎಂದಿದ್ದರು.
ಮುಂದುವರಿಸಿ, ವಕೀಲರ ತಂಡ ಸ್ವಾಮೀಜಿಯವರೊಂದಿಗೆ ಚರ್ಚೆ ನಡೆಸಿದೆ. ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಲು ತೀರ್ಮಾನಿಸಲಾಗಿದೆ. ಪೊಲೀಸರು ತನಿಖೆ ನಡೆಸಿ ಅಪರಾಧ ನಡೆದಿರುವುದು ನಿಜವಾದರೆ ಮಾತ್ರ ಬಂಧಿಸಲಿ, ಒಂದು ವೇಳೆ ಏಕಾಏಕಿ ನಿರ್ಧಾರ ತೆಗೆದುಕೊಂಡರೆ ಭಕ್ತರ ಭಾವನೆಗಳಿಗೆ ಧಕ್ಕೆ ಉಂಟಾಗುತ್ತದೆ ಎಂದು ತಿಳಿಸಿದ್ದಾರೆ.

ವಿದ್ಯಾರ್ಥಿನಿಯರ ಹೇಳಿಕೆ ದಾಖಲು
ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಸಂತ್ರಸ್ತರಾಗಿರುವ ಮುರುಘಾ ಮಠದ ವಸತಿ ನಿಲಯದ ಇಬ್ಬರು ವಿದ್ಯಾರ್ಥಿನಿಯರನ್ನು ಮೈಸೂರಿನಿಂದ ಭಾನುವಾರ ಸಂಜೆಯ ಸಮಯದಲ್ಲಿ ಚಿತ್ರದುರ್ಗಕ್ಕೆ ಕರೆತರಲಾಗಿದೆ. ಸೋಮವಾರ ಮಕ್ಕಳ ಸಮಿತಿ ಸಮಾಲೋಚಕರು ಹಾಗೂ ಮಹಿಳಾ ಪೊಲೀಸರು ಬಾಲಕಿಯರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಪೋಷಕರ ಹೇಳಿಕೆಯನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.












Click it and Unblock the Notifications