ಚಿತ್ರದುರ್ಗ; ಹಣ ಕೊಡದ ತಾಯಿಯನ್ನು ಕೊಂದ ಪುತ್ರ
ಚಿತ್ರದುರ್ಗ, ಜುಲೈ 09; ಮದ್ಯಪಾನ ಮಾಡಲು ಹಣ ಕೊಡಲಿಲ್ಲ ಎಂದು ಆಕ್ರೋಶಗೊಂಡ ಮಗನೊಬ್ಬ ಕುಡಿದ ಅಮಲಿನಲ್ಲಿ ತಾಯಿಯನ್ನು ಕೊಲೆ ಮಾಡಿದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಮೊಳಕಾಲ್ಮೂರು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದಲ್ಲಿ ಈ ಘಟನೆ ನಡೆದಿದ್ದು ಕೊಲೆಯಾದ ಮಹಿಳೆಯನ್ನು ರತ್ನಮ್ಮ(45) ಎಂದು ಗುರುತಿಸಲಾಗಿದೆ. 22 ವರ್ಷದ ಲೋಕೇಶ ತಾಯಿಯನ್ನು ಕೊಂದ ಆರೋಪಿ.
ರತ್ನಮ್ಮ ಕಳೆದ 20 ವರ್ಷಗಳ ಹಿಂದೆ ಪಿಲ್ಲಲಹಳ್ಳಿ ಗ್ರಾಮದಲ್ಲಿ ಗೋವಿಂದಪ್ಪರನ್ನು ವಿವಾಹವಾಗಿದ್ದರು. ಗಂಡನನ್ನು ಬಿಟ್ಟು ಮೊಳಕಾಲ್ಮೂರು ಪಟ್ಟಣದಲ್ಲಿ ಕೂಲಿ ಕೆಲಸ ಮಾಡಿಕೊಂಡು ಲೋಕೇಶನ ಜೊತೆ ಜೀವನ ಸಾಗಿಸುತ್ತಿದ್ದರು. ಮಗನೂ ಕೂಡ ಕೂಲಿ ಕೆಲಸ ಮಾಡಿಕೊಂಡಿದ್ದು, ಕುಡಿತದ ಚಟಕ್ಕೆ ಸಿಲುಕಿದ್ದ.

ಪ್ರತಿದಿನ ಕುಡಿದು ಮನೆಯಲ್ಲಿ ಜಗಳ ಮಾಡುತ್ತಿದ್ದ ಲೋಕೇಶ ಗುರುವಾರ ರಾತ್ರಿ ಕುಡಿದು ಮನೆಗೆ ಬಂದಿದ್ದಾನೆ. ರಾತ್ರಿ ಕೂಲಿ ಕೆಲಸ ಮುಗಿಸಿಕೊಂಡು ಸುಸ್ತಾಗಿದ್ದ ತಾಯಿ ರತ್ನಮ್ಮ ಊಟಕ್ಕೆ ಅನ್ನ ಮಾಡಿಟ್ಟು ವಿಶ್ರಾಂತಿ ಪಡೆಯುತ್ತಿದ್ದಳು.
ಕುಡಿದ ಅಮಲಿನಲ್ಲಿ ಮನೆಗೆ ಬಂದ ಲೋಕೇಶ ಊಟಕ್ಕೆ ಸಾಂಬರ್ ಮಾಡಿಲ್ಲ ಎಂದು ಆಕ್ರೋಶಗೊಂಡು ಮತ್ತಷ್ಟು ಮದ್ಯಪಾನ ಮಾಡಬೇಕು ಹಣ ಕೊಡು ಎಂದು ಪೀಡಿಸಿ, ತಾಯಿಯ ಜೊತೆ ಜಗಳವಾಡಿದ್ದಾನೆ.
ಈ ವೇಳೆ ತಾಯಿಯ ಕೆನ್ನೆಗೆ ಹೊಡೆದಿದ್ದು, ಹೊಡೆತದ ರಭಸಕ್ಕೆ ರತ್ನಮ್ಮ ಮನೆಯ ಕಬ್ಬಿಣದ ಬಾಗಿಲಿಗೆ ಡಿಕ್ಕಿ ಹೊಡೆದು ಬಿದ್ದಿದ್ದಾಳೆ. ಬಿದ್ದ ಹೊಡೆತಕ್ಕೆ ತಲೆಯಿಂದ ತೀವ್ರ ರಕ್ತ ಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ವಿಷಯ ತಿಳಿದು ಅಕ್ಕ ಪಕ್ಕದ ಮೆನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಮೊಳಕಾಲ್ಮೂರು ಪೊಲೀಸರು ಲೋಕೇಶನನ್ನು ಬಂಧಿಸಿ, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.












Click it and Unblock the Notifications