ಚಿತ್ರದುರ್ಗ : ದೊಣ್ಣೆ, ಕಲ್ಲಿನಿಂದ ಹೊಡೆದು ಚಿರತೆ ಹತ್ಯೆ
ಚಿತ್ರದುರ್ಗ, ಜುಲೈ 03 : ಕಲ್ಲು ಮತ್ತು ದೊಣ್ಣೆಯಿಂದ ಹೊಡೆದು ಚಿರತೆಯನ್ನು ಹತ್ಯೆ ಮಾಡಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಚಿರತೆಯನ್ನು ಹಿಡಿಯಲು ಬಂದ ಅರಣ್ಯಾಧಿಕಾರಿಗಳ ಮುಂದೆಯೇ ಈ ಘಟನೆ ನಡೆದಿದೆ.
ಬುಧವಾರ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಕುರುಬರಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಇಂದು ಬೆಳಗ್ಗೆ ಗ್ರಾಮದಲ್ಲಿ ಕಾಣಿಸಿಕೊಂಡಿದ್ದ ಚಿರತೆ ಇಬ್ಬರ ಮೇಲೆ ದಾಳಿ ಮಾಡಿ ಗಾಯಗೊಳಿಸಿತ್ತು.
ಚಿರತೆ ಪ್ರತ್ಯಕ್ಷವಾದ ಬಗ್ಗೆ ಜನರು ಅರಣ್ಯ ಇಲಾಖೆ ಮಾಹಿತಿ ನೀಡಿದ್ದರು. ಅಧಿಕಾರಿಗಳು ಚಿರತೆ ಹಿಡಿಯಲು ಗ್ರಾಮಕ್ಕೆ ಆಗಮಿಸಿದ್ದರು. ಜನರನ್ನು ನೋಡಿದ ಚಿರತೆ ಗಾಬರಿಯಾಗಿ ಓಡಲು ಆರಂಭಿಸಿತು. ಆಗ ಜನರು ಕಲ್ಲು, ದೊಣ್ಣೆಯಿಂದ ಹೊಡೆಯಲು ಆರಂಭಿಸಿದರು.

ಅರಣ್ಯ ಇಲಾಖೆ ಅಧಿಕಾರಿಗಳು ಜನರನ್ನು ತಡೆಯಲು ಮಾಡಿದ ಪ್ರಯತ್ನ ವಿಫಲವಾಯಿತು. ಜನರು ಹಲ್ಲೆ ಮಾಡಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದ ಚಿರತೆ ಮೃತಪಟ್ಟಿತು.
2018ರಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಚಿರತೆ ಗಣತಿ ನಡೆದಿತ್ತು. ರಾಜ್ಯದಲ್ಲಿ 2,500 ಚಿರತೆಗಳಿವೆ ಎಂಬ ವರದಿ ಸಿಕ್ಕಿತ್ತು. ದೇಶದಲ್ಲಿಯೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಚಿರತೆ ಗಣತಿ ಮಾಡಲಾಗಿತ್ತು. ರಾಜ್ಯದಲ್ಲಿ ಆನೆ, ಹುಲಿ ಗಣತಿಯನ್ನು ಮಾಡಲಾಗುತ್ತದೆ.
ಕರಡಿ ಹತ್ಯೆ ನಡೆದಿತ್ತು : 2016ರಲ್ಲಿ ಚಿತ್ರದುರ್ಗದ ಉಪನಾಯಕನಹಳ್ಳಿಯಲ್ಲಿ ಜನರು ದೊಣ್ಣೆಯಿಂದ ಹೊಡೆದು ಕರಡಿ ಹತ್ಯೆ ಮಾಡಿದ್ದರು. ದಿಕ್ಕು ತಪ್ಪಿ ಗ್ರಾಮಕ್ಕೆ ಬಂದಿದ್ದ ಕರಡಿ ಇಬ್ಬರ ಮೇಲೆ ದಾಳಿ ಮಾಡಿತ್ತು. ಅದನ್ನು ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಲಾಗಿತ್ತು.











Click it and Unblock the Notifications