ಸುಳ್ಳು ವರದಿ ಕೊಟ್ಟರೆ ಬರೆ ಹಾಕಬೇಕಾಗುತ್ತದೆ : ಸಚಿವ ವೆಂಕಟರಮಣಪ್ಪ
ಚಿತ್ರದುರ್ಗ, ಮೇ 13 : 'ನಿನ್ ತಲೆ....ನಿನ್ ನೇಣು ಹಾಕಬೇಕು....ಸುಳ್ಳು ವರದಿ ಕೊಟ್ಟರೆ ಬರೆ ಎಳೆಯಬೇಕಾಗುತ್ತದೆ' ಎಂದು ಸಚಿವ ವೆಂಕಟರಮಣಪ್ಪ ಅವರು ಸರ್ಕಾರಿ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಕಾರ್ಮಿಕ ಮತ್ತು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಮಣಪ್ಪ ಅವರು ಇಂದು ಜಿಲ್ಲೆಯಲ್ಲಿ ಬರ ಪರಿಶೀಲನಾ ಸಭೆಯನ್ನು ನಡೆಸಿದರು. ಈ ಸಂದರ್ಭದಲ್ಲಿ ಅಧಿಕಾರಿಗಳು ತಪ್ಪು ವರದಿಯನ್ನು ಸಚಿವರಿಗೆ ನೀಡಿದರು. ಇದರಿಂದಾಗಿ ಅವರು ಕೋಪಗೊಂಡರು.
'ಸುಳ್ಳು ಹೇಳಿದರೆ ಬರೆ ಎಳೆಯಬೇಕಾಗುತ್ತದೆ' ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಚಳ್ಳಕೆರೆ ಎಇಇ ಭೀಮಾ ನಾಯಕ್ ಅವರನ್ನು ತರಾಟೆಗೆ ತೆಗೆದುಕೊಂಡರು. ಹಿರಿಯೂರು ಎಕ್ಸಿಕ್ಯೂಟಿವ್ ಇಂಜಿನಿಯರ್ಗೂ ಎಚ್ಚರಿಕೆ ಕೊಟ್ಟು ಕಾಮಗಾರಿಗಳನ್ನು ತಕ್ಷಣ ಮುಗಿಸುವಂತೆ ಸೂಚನೆ ನೀಡಿದರು.

ರೈತರಿಂದ ಪ್ರತಿಭಟನೆ : ಸಚಿವ ವೆಂಕಟರಮಣಪ್ಪ ಅವರಿಗೆ ರೈತರಿಂದ ಪ್ರತಿಭಟನೆಯ ಸ್ವಾಗತ ಸಿಕ್ಕಿತ್ತು. ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿಯಲ್ಲಿ ಬೆಳೆ ವಿಮೆ ಮತ್ತು ಬೆಳೆ ನಷ್ಟ ಪರಿಹಾರವನ್ನು ರೈತರ ಖಾತೆಗೆ ಜಮಾ ಮಾಡಲು ವಿಳಂಬ ಮಾಡಲಾಗುತ್ತಿದೆ ಎಂದು ರೈತರು ಪ್ರತಿಭಟನೆ ನಡೆಸಿದರು.
ರೈತರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ತೆರಳಿದ ಸಚಿವ ವೆಂಕಟರಮಣಪ್ಪ ಅವರು, 'ಈ ಬಗ್ಗೆ ಮುಖ್ಯಮಂತ್ರಿಯವರ ಗಮನಕ್ಕೆ ತಂದು ಸಮಸ್ಯೆಯನ್ನು ಶೀಘ್ರದಲ್ಲೇ ಬಗೆಹರಿಸುತ್ತೇವೆ' ಎಂದು ಭರವಸೆ ನೀಡಿದರು.
ಕುಟುಂಬದವರ ಚಿನ್ನವನ್ನು ಅಡವಿಟ್ಟು ಬೆಳೆ ಬೆಳೆದಿದ್ದೇವೆ. ಬೆಳೆ ನಷ್ಟವಾಗಿದೆ. ಪರಿಹಾರವನ್ನು ತಕ್ಷಣ ಸಿಗುವಂತೆ ಮಾಡಬೇಕು ಎಂದು ರೈತರು ಸಚಿವರಿಗೆ ಮನವಿ ಮಾಡಿದರು. ಪ್ರತಿಭಟನಾಕಾರರು ಮತ್ತು ಸಚಿವರ ನಡುವೆ ಮಾತಿನ ಚಕಮಕಿಯೂ ನಡೆಯಿತು.












Click it and Unblock the Notifications