ಕುಮಾರಸ್ವಾಮಿಯನ್ನು ಹೊಗಳಿ ಅಟ್ಟಕ್ಕೇರಿಸಿದ ಸಚಿವ ಸೋಮಣ್ಣ
Recommended Video
ಚಿತ್ರದುರ್ಗ, ನವೆಂಬರ್ 3: "ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗಿಂತ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರೇ ಒಳ್ಳೆಯವರು" ಎಂದು ಹೇಳುವ ಮೂಲಕ ವಸತಿ ಸಚಿವ ವಿ. ಸೋಮಣ್ಣ ಭಾನುವಾರ ಅಚ್ಚರಿ ಮೂಡಿಸಿದ್ದಾರೆ.
ಚಿತ್ರದುರ್ಗದ ಮುರುಘಾ ಮಠಕ್ಕೆ ಭೇಟಿ ನೀಡಿದ್ದ ವೇಳೆ ಮಾಧ್ಯಮಗಳ ಜೊತೆ ಮಾತಾಡಿದರು. ಆಪರೇಷನ್ ಕಮಲ ಕುರಿತ ಯಡಿಯೂರಪ್ಪ ಆಡಿಯೋ ವಿಚಾರವನ್ನು ಕಾಂಗ್ರೆಸ್ ಸೋಮವಾರ ಸುಪ್ರೀಂ ಕೋರ್ಟ್ ನಲ್ಲಿ ಪ್ರಸ್ತಾಪ ಮಾಡಲಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿ, ಕಾಂಗ್ರೆಸ್ ನಾಯಕರಿಗೆ ಮಾಡುವುದಕ್ಕೆ ಏನೂ ಕೆಲಸ ಇಲ್ಲ. ಮೊದಲು ಅವರು ಏನು ಮಾಡಿದ್ದಾರೆ ಅನ್ನೋದು ತಿಳಿದುಕೊಳ್ಳಬೇಕು ಎಂದರು.
ಅನರ್ಹ ಶಾಸಕರ ಬಗ್ಗೆ ಯಡಿಯೂರಪ್ಪ ಏನು ಮಾತಾಡಿದ್ದಾರೆ? ಆಡಿಯೋದಲ್ಲಿ ಅಂತಹದ್ದೇನಿದೆ? ನಾನೂ ಆಡಿಯೋ ಕೇಳಿದ್ದೇನೆ, ಅದರಲ್ಲಿ ಆಡಿಯೋ ತಿರುಚಲಾಗಿದೆ ಎಂದರು.

ಸಿದ್ದರಾಮಯ್ಯ ಅವರಿಗಿಂತ ಕುಮಾರಸ್ವಾಮಿ ಒಳ್ಳೆಯ ಕೆಲಸ ಮಾಡಿದ್ದಾರೆ ಎನ್ನುವ ಮೂಲಕ ಮಾಜಿ ಸಿ.ಎಂ. ಕುಮಾರಸ್ವಾಮಿ ಅವರನ್ನು ಕೊಂಡಾಡಿದ ವಸತಿ ಸಚಿವ ಸೋಮಣ್ಣ, ಕುಮಾರಸ್ವಾಮಿ ನಾಲ್ಕೈದು ಊರಿಗೆ ಓಡಾಡಿ ಜನರ ಸಮಸ್ಯೆ ಆಲಿಸಿದ್ದಾರೆ. ಸಿದ್ದರಾಮಯ್ಯ ಏನು ಮಾಡಿದ್ದಾರೆ? ಸಿದ್ದರಾಮಯ್ಯಗೆ ಭಾಷೆ ಮೇಲೆ ಹಿಡಿತ ಇಲ್ಲ ಎಂದು ಹೇಳಿದರು.
ಅವರಪ್ಪ, ಇವರಪ್ಪ ಅಂತ ಮಾತಾಡುತ್ತಾರೆ. ಒಂದು ವೇಳೆ ಅದೇ ವಾಪಸ್ ಯಾರಾದರೂ ಸಿದ್ದರಾಮಯ್ಯಗೆ ಅದೇ ಭಾಷೆ ಬಳಸಿದರೆ ಹೇಗೆ? ಸಿದ್ದರಾಮಯ್ಯ ಸಿಎಂ ಆಗಿದ್ದಾಗ ರಾಜ್ಯದಲ್ಲಿ ಬರ ತಾಂಡವವಾಡುತ್ತಿತ್ತು. ಈಗ ಯಡಿಯೂರಪ್ಪ ಮುಖ್ಯಮಂತ್ರಿ ಆದಮೇಲೆ ಅತಿವೃಷ್ಟಿ ಆಗಿದೆ. ಮಳೆ- ಬೆಳೆ ಚನ್ನಾಗಿ ಆಗಿದೆ ಎಂದು ಹೇಳಿದರು.
ವಸತಿ ಯೋಜನೆ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮಾತನಾಡಿದ ಸೋಮಣ್ಣ, ಎಲ್ಲೆಲ್ಲಿ ಅಕ್ರಮ ಆಗಿದೆ ಅನ್ನೋದರ ಬಗ್ಗೆ ಮಾಹಿತಿ ಕಲೆ ಹಾಕಿದ್ದೇನೆ. ಇಂದು ಭಾನುವಾರ ಸರ್ಕಾರಿ ರಜೆ ಇದ್ದರೂ ವಿಧಾನಸೌಧದಲ್ಲಿ ನನ್ನ ಕಚೇರಿ ತೆರೆದಿತ್ತು. ಪ್ರಮುಖ ಕಡತಕ್ಕೆ ಸಹಿ ಹಾಕಿದ್ದೇನೆ, ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ತಿನಿ ಎಂದರು.
ಬಿಜೆಪಿ ಕಚೇರಿಯಲ್ಲಿ ಯಡಿಯೂರಪ್ಪ ಆಪ್ತರ ಬದಲಾವಣೆ ವಿಚಾರವಾಗಿ ಮಾತನಾಡಿ, ಬದಲಾವಣೆ ಅನಿವಾರ್ಯ. ಅದು ಆಂತರಿಕ ವಿಚಾರ. ನಿಮ್ಮ ಮಾಧ್ಯಮಗಳಲ್ಲೂ ಬದಲಾವಣೆ ಆಗುವುದಿಲ್ಲವಾ ಎಂದು ಸಚಿವ ಸೋಮಣ್ಣ ಪ್ರಶ್ನಿಸಿದರು.











Click it and Unblock the Notifications