ವಿಡಿಯೋ ವೈರಲ್: ಶ್ರೀರಾಮುಲು ರಾಜೀನಾಮೆ ನೀಡಿ ಎಂದ ಬಿಂದು ಗೌಡ
ಚಿತ್ರದುರ್ಗ, ಜೂನ್ 3: ಮಹಾಮಾರಿ ಕೊರೊನಾ ವೈರಸ್ ನಡುವೆಯೂ ಆರೋಗ್ಯ ಸಚಿವ ಶ್ರೀರಾಮುಲು ಬಾಗಿನ ಅರ್ಪಿಸುವ ನೆಪದಲ್ಲಿ ಅದ್ಧೂರಿ ಸ್ವಾಗತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ರಾಜ್ಯದ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
Recommended Video
ಸಚಿವರ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಇದೀಗ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಯುವತಿ ಬಿಂದು ಗೌಡ ಒತ್ತಾಯಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನಿನ್ನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಪರುಶರಾಂಪುರದಲ್ಲಿ ಗ್ರಾಮದಲ್ಲಿ ಗುಂಪಾಗಿ ಜನ ಸೇರಿಸೆಕೊಂಡು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ, ಮಾಸ್ಕ್ ಧರಿಸದೇ, ಎತ್ತಿನ ಗಾಡಿ ಮೂಲಕ ಮೆರವಣಿಗೆಯಲ್ಲಿ ಭಾಗಿಯಾಗಿ ಬೃಹತ್ ಸೇಬಿನ ಹಾರ ಮತ್ತು ಹೂವು ಹಾಕಿಸಿಕೊಂಡಿದ್ದರು.

ಕೊರೊನಾ ವೈರಸ್ ನಡುವೆ ಆರೋಗ್ಯ ಸಚಿವರಿಗೆ ಈ ಅದ್ಧೂರಿ ಸ್ವಾಗತ ಬೇಕಿತ್ತಾ ಎಂದು ಹಲವಾರು ಜನ ಪ್ರಶ್ನೆ ಮಾಡಿದ್ದು, ನೀವು ಆರೋಗ್ಯ ಸಚಿವರಾಗಲು ಯೋಗ್ಯತೆ ಇಲ್ಲ ಎಂದು ಸಚಿವ ಶ್ರೀರಾಮುಲು ಅವರನ್ನು ತರಾಟೆಗೆ ತೆಗೆದುಕೊಂಡ ಯುವತಿ ಬಿಂದು ಗೌಡ ಅವರ ವಿಡಿಯೋ ವೈರಲ್ ಆಗಿದೆ.
ದೇಶದಲ್ಲಿ ಜನ ಸಾಯುತ್ತಿದ್ದಾರೆ, ನಿಮಗೆ ಆಡಂಬರದ ಸ್ವಾಗತ ಬೇಕಿತ್ತಾ ಎಂದು ಹಲವರು ಪ್ರಶ್ನೆ ಹಾಕಿದರು. ಶ್ರೀರಾಮುಲು ಅವರನ್ನು ಸಚಿವ ಸಂಪುಟದಿಂದ ಕೈ ಬಿಡುವಂತೆ ಹಲವಾರು ಜನ ಒತ್ತಾಯ ಮಾಡಿದ್ದಾರೆ. ಇನ್ನು ಈ ಕಾರ್ಯಕ್ರಮದಲ್ಲಿ ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ, ಸಂಸದ ಎ. ನಾರಾಯಣಸ್ವಾಮಿ ಕೂಡ ಭಾಗವಹಿಸಿದ್ದರು.
ಇದಲ್ಲದೆ ರಾತ್ರಿ ಚಿತ್ರದುರ್ಗ ನಗರದ ಒನಕೆ ಓಬವ್ವ ಸರ್ಕಲ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಶ್ರೀರಾಮುಲು ವಿರುದ್ಧ ಪ್ರತಿಭಟನೆ ನಡೆಸಿ, ಧಿಕ್ಕಾರ ಕೂಗಿದರು. ಕಾಂಗ್ರೆಸ್ ಪಕ್ಷಕ್ಕೊಂದು ನ್ಯಾಯ, ನಿಮಗೊಂದು ನ್ಯಾಯನಾ? ಶ್ರೀರಾಮುಲು ಅವರನ್ನು ಬಂಧಿಸಿ, ನಂತರ ನಮ್ಮನ್ನು ಬಂಧಿಸಿ ಎಂದು ಪ್ರತಿಭಟಿಸಿದರು.












Click it and Unblock the Notifications