ಯೋಗೇಶ್ವರಗೆ ಸಚಿವ ಸ್ಥಾನ; ಜಿ. ಎಚ್. ತಿಪ್ಫಾರೆಡ್ಡಿ ಗರಂ!
ಚಿತ್ರದುರ್ಗ, ಜನವರಿ 13: "ಚುನಾವಣೆಯಲ್ಲಿ ಸೋತ ಸಿ. ಪಿ. ಯೋಗೇಶ್ವರಗೆ ಯಾಕೆ ಮಂತ್ರಿಗಿರಿ ಕೊಡುತ್ತಿದ್ದಾರೆ? ಎಂಬುದು ಆಶ್ಚರ್ಯ" ಎಂದು ಚಿತ್ರದುರ್ಗ ಶಾಸಕ, ಹಿರಿಯ ಬಿಜೆಪಿ ನಾಯಕ ಜಿ. ಎಚ್. ತಿಪ್ಪಾರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಸಂಪುಟ ವಿಸ್ತರಣೆ ಬುಧವಾರ ಮಧ್ಯಾಹ್ನ ನಡೆಯಲಿದೆ. ನೂತನ ಸಚಿವರ ಪಟ್ಟಿಯನ್ನು ಯಡಿಯೂರಪ್ಪ ಅವರೇ ಘೋಷಣೆ ಮಾಡಿದ್ದಾರೆ. ಆದರೆ, ಜಿ. ಎಚ್. ತಿಪ್ಪಾರೆಡ್ಡಿ ಅವರ ಹೆಸರು ಇಲ್ಲ.
ಮಾಧ್ಯಮಗಳ ಜೊತೆ ಮಾತನಾಡಿದ ಜಿ. ಎಚ್. ತಿಪ್ಪಾರೆಡ್ಡಿ ಅವರು, "ನಾನು ಐವತ್ತೊಂದು ವರ್ಷಕಾಲ ರಾಜಕೀಯ ಮಾಡಿದ್ದು ವೇಸ್ಟ್. ಇನ್ನು ನೂರು ವರ್ಷ ಬದುಕುತ್ತೇವೆಂದರೆ ಆಸೆ ಇರಿಸಿಕೊಳ್ಳಬಹುದಿತ್ತು. ಆದರೆ, ಒಂದು ಜನರೇಷನ್ ಸುಮ್ಮನೇ ವೇಸ್ಟ್ ಆಗಿದೆ" ಎಂದು ಅಸಮಾಧಾನ ವ್ಯಕ್ತಪಡಿಸಿದರು.

"ಸೋತ ಯೋಗೀಶ್ವರಗೆ ಯಾಕೆ ಮಂತ್ರಿಗಿರಿ ಕೊಡುತ್ತಿದ್ದಾರೆ ಎಂಬುದು ಆಶ್ಚರ್ಯ ಮೂಡಿಸಿದೆ. ಸರ್ಕಾರ ರಚನೆಗೆ ಸಹಕರಿಸಿದ್ದಕ್ಕೆ ಯೋಗೀಶ್ವರಗೆ ಮಂತ್ರಿಗಿರಿ ಅಂತಾರೆ. ಅದೇನು ಸಹಾಯ ಮಾಡಿದ್ದಾರೋ? ನನಗೆ ಅರ್ಥ ಆಗಿಲ್ಲ" ಎಂದು ಹೇಳಿದರು.
"ಸೋತವರಿಗೆ ವಿಧಾನ ಪರಿಷತ್ ಸ್ಥಾನ ಕೊಟ್ಟಿದ್ದು ಸಂತೋಷ. ಬಿಜೆಪಿ ಸರ್ಕಾರ ರಚನೆ ವೇಳೆ ಯೋಗೀಶ್ವರ ನನಗೂ ಕರೆ ಮಾಡಿದ್ದರು. ನನಗೆ ಯಾವ ಕಾರಣಕ್ಕೆ ಕರೆ ಮಾಡಿ ಮಾತಾಡುತ್ತಿದ್ದರೋ ಗೊತ್ತಿಲ್ಲ" ಎಂದು ತಿಪ್ಪಾರೆಡ್ಡಿ ತಿಳಿಸಿದರು.
"ಸಂಪುಟದಲ್ಲಿ ಬೆಳಗಾವಿ, ಬೆಂಗಳೂರಿನವರೇ ಅರ್ಧಕ್ಕಿಂತ ಹೆಚ್ಚಿದ್ದಾರೆ. ಒಬ್ಬಿಬ್ಬರು ಪಕ್ಷ ವಿರೋಧಿ ಕೆಲಸ ಮಾಡಿದವರಿಗೂ ಮಂತ್ರಿಗಿರಿ. 3 ಸಲದ ಬಿಜೆಪಿ ಅಧಿಕಾರದಲ್ಲೂ ಜಿಲ್ಲೆಗೆ ಮಂತ್ರಿಸ್ಥಾನ ಸಿಕ್ಕಿಲ್ಲ, ಈ ಸಲದ ಸಚಿವ ಸಂಪುಟದಲ್ಲಿ ಸಮಾನತೆ ಕಾಣುತ್ತಿಲ್ಲ" ಎಂದು ತಿಪ್ಪಾರೆಡ್ಡಿ ಹೇಳಿದರು.
"ಈ ಜನುಮದಲ್ಲಿ 51 ವರ್ಷ ರಾಜಕೀಯದಲ್ಲಿ ಕಳೆದಿದ್ದೇನೆ. ಜಿಲ್ಲೆ, ರಾಜ್ಯ ಮಟ್ಟದಲ್ಲಿ ಜನ ಸೇವೆಗೆ ಅವಕಾಶ ಸಿಗದೆ ನಿರಾಸೆ ಮೂಡಿಸಿದೆ" ಎಂದು ತಿಪ್ಪಾರೆಡ್ಡಿ ಬೇಸರ ವ್ಯಕ್ತಪಡಿಸಿದರು.












Click it and Unblock the Notifications