ಸತೀಶ್ ಜಾರಕಿಹೊಳಿ ಬಹುಶಃ ಇತಿಹಾಸ ಓದಿಲ್ಲ: ಬಿ.ಸಿ ಪಾಟೀಲ್
ಚಿತ್ರದುರ್ಗ ನವೆಂಬರ್9: ಹಿಂದೂ ಪದ ಸಿಂಧೂ ನದಿಯಿಂದ ಬಂದಿದೆ. ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ಅವರು ಬಹುಶಃ ಇತಿಹಾಸ ಓದಿಲ್ಲ ಎನಿಸುತ್ತದೆ. ಸತೀಶ್ ಜಾರಕಿಹೊಳಿ ಹೇಳಿಕೆಯನ್ನು ದೇಶದ ಜನರು ಸಹಿಸುವುದಿಲ್ಲ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಕಿಡಿಕಾರಿದ್ದಾರೆ.
ಚಿತ್ರದುರ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸತೀಶ್ ಜಾರಕಿಹೊಳಿ ಹೇಳಿಕೆಯನ್ನು ಜನರು ಸಹಿಸುವುದಿಲ್ಲ. ಜಾರಕಿಹೊಳಿಗೆ ತಕ್ಕ ಉತ್ತರವನ್ನು ಜನರು ನೀಡುತ್ತಾರೆ. ಹಿಂದೂ ಪದ ಅಶ್ಲೀಲ ಎನ್ನುವುದಾದರೆ, ಸತೀಶ್ ಜಾರಕಿಹೊಳಿ ದಾಖಲೆಗಳಲ್ಲಿ ಹಿಂದೂ ಎಂದು ಹಾಕಿಕೊಂಡಿದ್ದೇಕೆ ಎಂದು ಪ್ರಶ್ನೆ ಹಾಕಿದರು. ಹಾಗೂ ಹಿಂದೂಗಳ ಬಗ್ಗೆ ಅಸಭ್ಯವಾಗಿ, ಹಗುರವಾಗಿ, ಅಶ್ಲೀಲವಾಗಿ ಮಾತಾಡಬಾರದು. ಸತೀಶ್ ಜಾರಕಿಹೊಳಿ ಇಂತಹ ವಿಚಾರಗಳನ್ನು ಕೆಳ ಮಟ್ಟದಲ್ಲಿ ಮಾತನಾಡಬಾರದು, ನಾಲಿಗೆ ಮೇಲೆ ಹಿಡಿತ ಇರಬೇಕು ಎಂದು ಎಚ್ಚರಿಕೆ ನೀಡಿದರು.
ಮಹಿಳೆಯರು ಸ್ವಾಮಿಗಳ ಬಳಿ ಹೋಗದಂತಹ ಸ್ಥಿತಿ ನಿರ್ಮಾಣವಾಗಿದೆ: ಶಾಮನೂರು ಶಿವಶಂಕರಪ್ಪ
ಮಾತು ಮುಂದುವರಿಸಿದ ಸಚಿವ ಬಿ.ಸಿ ಪಾಟೀಲ್, ""ಬಿಜೆಪಿ ಅಧಿಕಾರಕ್ಕೆ ಬಂದರೆ ಬಡವರ ಬದುಕು ಕಷ್ಟ ಎನ್ನುವ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ರಾಜ್ಯದಲ್ಲಿ ಈಗ ಸಿದ್ದರಾಮಯ್ಯ ಬಡವರಿಗೆ ಊಟ ಹಾಕುತ್ತಿದ್ದಾರೆಯೇ..? ಬಡವರು ಸಿದ್ದರಾಮಯ್ಯ ಅವರ ಮನೆಗೆ ಹೋಗಿ ಊಟ ಕೇಳಿದ್ದಾರೆಯೇ..? ಕೊರೊನಾ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಉಚಿತ ಅಕ್ಕಿ ವಿತರಣೆ ಮಾಡಿದ್ದರು. ಕೊರೊನಾ ವೇಳೆ ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ದೇಶ ಮಾರಾಟ ಮಾಡುತ್ತಿದ್ದರು. ಕೋವಿಡ್ ಹಾಗೂ ಪ್ರವಾಹ ಪರಿಸ್ಥಿತಿಯನ್ನು ಬಿಜೆಪಿ ಸರ್ಕಾರ ಸಮರ್ಥವಾಗಿ ನಿಭಾಯಿಸಿದೆ'' ಎಂದು ಹೇಳಿದರು.
ಬಿಜೆಪಿ ಜನ ಸಂಕಲ್ಪ ಯಾತ್ರೆಯಲ್ಲಿ ಜನರಿಲ್ಲ ಎನ್ನುವ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಬಿ.ಸಿ ಪಾಟೀಲ್, ಸಿದ್ದರಾಮಯ್ಯ ವೇಷ ಮರೆಸಿಕೊಂಡು ಸಂಕಲ್ಪ ಯಾತ್ರೆಗೆ ಬರಲಿ, ಆಗ ಜನ ಸೇರಿದ್ದು ಅವರಿಗೆ ಗೊತ್ತಾಗುತ್ತದೆ. ಬಿಜೆಪಿ ಜನ ಸಂಕಲ್ಪ ಯಾತ್ರೆಯಲ್ಲಿ ಜನಸಂದಣಿ ಸೇರುವುದು, ಸಹಿಲಾಗದೆ ಟೀಕೆ ಮಾಡುತ್ತಿದ್ದಾರೆ. ಅವರ ಭಟ್ಟಂಗಿಗಳು ಜನರಿಲ್ಲ ಎಂದು ತಪ್ಪು ಮಾಹಿತಿ ನೀಡುತ್ತಾರೆ. ಕಾರ್ಯಕ್ರಮ ಆರಂಭಕ್ಕೂ ಮೊದಲಿನ ಖಾಲಿ ಕುರ್ಚಿಯ ಫೋಟೋ ಹಾಕುತ್ತಾರೆ. ಸಿದ್ದರಾಮಯ್ಯ ಮುಸುಕು ಹಾಕಿಕೊಂಡು ಬಂದು ಕೂರಲಿ. ರಾಜ್ಯದಲ್ಲಿ ಕಾಂಗ್ರೆಸ್ ಬರಬಾರದು ಎಂದು ಜನ ಸಂಕಲ್ಪ ಮಾಡಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಸತೀಶ್ ಜಾರಕಿಹೊಳಿ ಕ್ಷಮೆ ಬೇಕಿಲ್ಲ, ಚರ್ಚೆಯ ಅಗತ್ಯವಿಲ್ಲ: ಸಿಎಂ ಬೊಮ್ಮಾಯಿ
ಇನ್ನು ಚಿತ್ರದುರ್ಗದಲ್ಲಿ ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ಹಿಂದೂ ಪದದ ಬಗ್ಗೆ ನೀಡಿರುವ ಹೇಳಿಕೆ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಕಿಡಿಕಾರಿದ್ದಾರೆ. ಈ ಬಗ್ಗೆ ಸತೀಶ್ ಜಾರಕಿಹೊಳಿ ಕ್ಷಮೆಯೂ ಬೇಕಿಲ್ಲ. ಈ ಬಗ್ಗೆ ಚರ್ಚೆ ಮಾಡುವ ಅಗತ್ಯವೂ ಇಲ್ಲ. ಸತೀಶ್ ಜಾರಕಿಹೊಳಿ ಶತಮಾನಗಳಿಂದ ಸ್ಥಾಪಿತವಾಗಿದ್ದ ನಂಬಿಕೆಗಳಿಗೆ ಕೊಡಲಿ ಪೆಟ್ಟು ಕೊಡುವ ಕೆಲಸ ಮಾಡಿದ್ದಾರೆ. ಜನರ ನಂಬಿಕೆಗೆ ಘಾಸಿ ಮಾಡಿದ್ದಾರೆ. ಸತೀಶ್ ಜಾರಕಿಹೊಳಿ ಕ್ಷಮೆಯೂ ಬೇಕಿಲ್ಲ, ಚರ್ಚೆ ಮಾಡುವುದು ಅಗತ್ಯವಿಲ್ಲ. ಇದೆಲ್ಲವನ್ನೂ ಮುಂದೆ ಜನ ತೀರ್ಮಾನ ಮಾಡುತ್ತಾರೆ ಎಂದು ಕಿಡಿಕಾರಿದ್ದರು.