ಕೋಟೆ ನಾಡಲ್ಲಿ ಮತ್ತೆ ಅರಳಿದ ಕಮಲ: ಕಾಂಗ್ರೆಸ್ಗೆ ಆಘಾತ
ಬೆಂಗಳೂರು, ಮೇ 23: ಹಾಲಿ ಸಂಸದ ಕಾಂಗ್ರೆಸ್ನ ಬಿ.ಎನ್. ಚಂದ್ರಪ್ಪ ಅವರ ಗೆಲುವು ಸುಲಭ ಎಂದು ಭಾವಿಸಿದ್ದ ಚಿತ್ರದುರ್ಗ ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಆಘಾತ ಎದುರಿಸಿದೆ.
ಬಿಜೆಪಿ ಅಭ್ಯರ್ಥಿ ನಾರಾಯಣಸ್ವಾಮಿ ಅವರು ಚಿತ್ರದುರ್ಗದಲ್ಲಿ ಅಚ್ಚರಿಯ ಗೆಲುವು ಸಾಧಿಸಿದ್ದಾರೆ. ಮೀಸಲು ಕ್ಷೇತ್ರವಾದ ಚಿತ್ರದುರ್ಗದಲ್ಲಿ ದಲಿತ ಮತ್ತು ಹಿಂದುಳಿದ ವರ್ಗಗಳ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕಾಂಗ್ರೆಸ್ ಹಿಡಿತದಲ್ಲಿರುವ ಈ ಕ್ಷೇತ್ರದಲ್ಲಿ ಕೈ ಅಭ್ಯರ್ಥಿ ಚಂದ್ರಪ್ಪ ಅವರ ಗೆಲುವನ್ನು ಪಕ್ಷ ನಿರೀಕ್ಷಿಸಿತ್ತು. ಆದರೆ, ಬಿಜೆಪಿ ಅಭ್ಯರ್ಥಿ ಅಚ್ಚರಿಯ ರೀತಿಯಲ್ಲಿ ಭರ್ಜರಿ ಮುನ್ನಡೆ ಪಡೆದು ಗೆಲುವು ಸಾಧಿಸಿದ್ದಾರೆ.
2009ರಲ್ಲಿ ಬಿಜೆಪಿ ಅಭ್ಯರ್ಥಿ ಜನಾರ್ದನ ಸ್ವಾಮಿ ಇಲ್ಲಿ ಜಯಗಳಿಸಿದ್ದರು. ಅದಾದ ಬಳಿಕ ನಾರಾಯಣಸ್ವಾಮಿ ಕಮಲವನ್ನು ಮತ್ತೆ ಅರಳಿಸಿದ್ದಾರೆ. ಕೋಟೆ ನಾಡಿನ ಇತಿಹಾಸದಲ್ಲಿ ಬಿಜೆಪಿಗೆ ಇದು ಎರಡನೆಯ ಜಯ. ಇದಕ್ಕೂ ಮೊದಲು 11 ಲೋಕಸಭೆ ಚುನಾವಣೆಗಳಲ್ಲಿ ಎಂಟು ಬಾರಿ ಕಾಂಗ್ರೆಸ್ ಅಭ್ಯರ್ಥಿಗಳೇ ಗೆದ್ದಿದ್ದರು.

ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ಎ. ನಾರಾಯಣಸ್ವಾಮಿ ಕೊನೆಯವರೆಗೂ ಅದನ್ನು ಕಾಯ್ದುಕೊಂಡರು. 55 ಸಾವಿರಕ್ಕೂ ಅಧಿಕ ಮತಗಳ ಮುನ್ನಡೆ ಪಡೆದಿದ್ದರು.
ಏಪ್ರಿಲ್ ಎಂಟರಂದು ಪ್ರಧಾನಿ ನರೇಂದ್ರ ಮೋದಿ ಕೋಟೆ ನಾಡಿನಲ್ಲಿ ನಾರಾಯಣ ಸ್ವಾಮಿ ಅವರ ಪರ ಪ್ರಚಾರ ನಡೆಸಿದ್ದರು.
ಮಾಜಿ ಸಮಾಜ ಕಲ್ಯಾಣ ಸಚಿವ, ಪರಿಶಿಷ್ಟಜಾತಿ ಎಡಗೈ ಗುಂಪಿಗೆ ಸೇರಿದ ಆನೇಕಲ್ ನಾರಾಯಣಸ್ವಾಮಿ ಅವರಿಗೆ ಬಿಜೆಪಿ ಟಿಕೆಟ್ ನೀಡಿತ್ತು.












Click it and Unblock the Notifications