Karnataka Budget 2023 Expectations : ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ನಿರೀಕ್ಷೆಗಳೇನು?
ಫೆಬ್ರವರಿ 10ರಂದು ವಿಧಾನಮಂಡಲ ಅಧಿವೇಶನ ಆರಂಭವಾಗಲಿದ್ದು, ಫೆಬ್ರವರಿ 17ರಂದು ಮುಖ್ಯಮಂತ್ರಿ ರಾಜ್ಯ ಬಜೆಟ್ ಮಂಡನೆ ಆಗಲಿದೆ. ಕರ್ನಾಟಕ ಬಜೆಟ್ 2023ರ ಮೇಲಿನ ಚಿತ್ರದುರ್ಗ ಜಿಲ್ಲೆಯ ಜನತೆಯ ನಿರೀಕ್ಷೆಗಳೇನು ಎನ್ನುವುದು ಇಲ್ಲಿದೆ.
ಮಧ್ಯ ಕರ್ನಾಟಕದಲ್ಲಿ ಹಿಂದುಳಿದ ಜಿಲ್ಲೆಯಾಗಿ ಗುರುತಿಸಿಕೊಂಡಿರುವ ಚಿತ್ರದುರ್ಗ ಜಿಲ್ಲೆಗೆ 2023ರ ರಾಜ್ಯ ಬಜೆಟ್ ನಲ್ಲಿ ಜಿಲ್ಲೆಗೆ ಹಲವಾರು ಯೋಜನೆಗಳು ಘೋಷಣೆಯಾಗುವ ನಿರೀಕ್ಷೆ ಜಿಲ್ಲೆಯ ಜನತೆಯಲ್ಲಿದೆ.
ಜಿಲ್ಲೆಯ ಐತಿಹಾಸಿಕ ಕಲ್ಲಿನ ಕೋಟೆ ಅಭಿವೃದ್ಧಿಯಾಗಬೇಕಿದೆ. ಜಿಲ್ಲೆಯ ವಿದ್ಯಾರ್ಥಿಗಳ ಬಹು ನಿರೀಕ್ಷಿತ ಮೆಡಿಕಲ್ ಕಾಲೇಜು ಘೋಷಣೆಯಾಗಿದ್ದು, ಕಾಮಗಾರಿ ಆರಂಭಕ್ಕೆ ಕ್ರಮ ಕೈಗೊಳ್ಳಬೇಕಿದೆ. ಇತ್ತ ಹಿರಿಯೂರಿನ ಸಕ್ಕರೆ ಕಾರ್ಖಾನೆ ಮರು ಆರಂಭಕ್ಕೆ ಕ್ರಮ ಕೈಗೊಳ್ಳಬೇಕು ಎನ್ನುವುದು ಜನರ ಆಶಯ. ಗಾಯಿತ್ರಿ ಜಲಾಶಯ, ವಾಣಿ ವಿಲಾಸ ಜಲಾಶಯ, ಚಳ್ಳಕೆರೆಯ ರಾಣಿಕೆರೆ ಸೇರಿದಂತೆ ಮತ್ತಿತರರ ದೊಡ್ಡ ದೊಡ್ಡ ಜಲಾಶಯಗಳನ್ನು ಪುನಃಶ್ಚೇತನ ಗೊಳಿಸುವ ಕ್ರಮ ಕೈಗೊಳ್ಳಬೇಕು.
ಪ್ರಮುಖವಾಗಿ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸುತ್ತಿವೆ, ಇದನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಮೂಲಭೂತ ಸೌಲಭ್ಯಕ್ಕೆ ಆದ್ಯತೆ ನೀಡಬೇಕು. ಹೀಗೆ ಹಲವಾರು ಯೋಜನೆಗಳ ನಿರೀಕ್ಷೆಯನ್ನು ಜಿಲ್ಲೆಯ ಜನರು ರಾಜ್ಯದ ಬಜೆಟ್ ಮೇಲಿಟ್ಟಿದ್ದಾರೆ.

ಇದೇ ತಿಂಗಳ ಫೆಬ್ರವರಿ 17 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯ ಬಜೆಟ್ ಮಂಡಿಸಲಿದ್ದಾರೆ. ಮತ್ತೆ ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ನಿರೀಕ್ಷಿಗಳ ಬಗ್ಗೆ ಹತ್ತು ಹಲವಾರು ನಿರೀಕ್ಷೆಗಳು ಇವೆ. ಮತ್ತೊಂದು ಕಡೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಗೆ ಸರ್ಕಾರ ಹಲವಾರು ಯೋಜನೆಗಳನ್ನು ಘೋಷಿಸುವ ಸಾಧ್ಯತೆಗಳಿವೆ.
ರಾಜ್ಯ ಬಜೆಟ್ನಲ್ಲಿ ಹಲವು ಯೋಜನೆಗಳು ಜಿಲ್ಲೆಗೆ ಸಿಗಲಿದೆ ಎಂಬುದು ಜನತೆಯ ನಿರೀಕ್ಷೆಯಾಗಿದೆ. ಈ ಕುರಿತು ಒನ್ ಇಂಡಿಯಾ ನ್ಯೂಸ್ ಜೊತೆ ಮಾಹಿತಿ ಹಂಚಿಕೊಂಡಿರುವ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಕಸವನಹಳ್ಳಿ ರಮೇಶ್, "2023ರ ಬಜೆಟ್ನಲ್ಲಿನಲ್ಲಿ ಬರಪೀಡಿತ ಕೋಟೆ ನಾಡಿಗೆ ನ್ಯಾಯ ಸಿಗಬಹುದೇ ಎಂದು ಪ್ರಶ್ನಿಸಿದ್ದು, ಬಹು ನಿರೀಕ್ಷಿತ 2023ರ ರಾಜ್ಯ ಸರ್ಕಾರದ ಬಜೆಟ್ನಲ್ಲಿ ಕರ್ನಾಟಕ ರಾಜ್ಯದ ಶಾಶ್ವತ ಬರಪೀಡಿತ ಚಿತ್ರದುರ್ಗ ಜಿಲ್ಲೆಗೆ ಬಂಪರ್ ಕೊಡುಗೆ ನಿರೀಕ್ಷಿಸಲಾಗಿದೆ" ಎಂದಿದ್ದಾರೆ.
ಕೇಂದ್ರ ಸರ್ಕಾರದ ಬಜೆಟ್ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ಮೀಸಲಿಟ್ಟಿರುವುದು ಸರಿ ಅಷ್ಟೇ, ಆದರೆ ಅದನ್ನು ಕಾಲಮಿತಿಯೊಳಗೆ ಬಳಸಿಕೊಂಡು ಯೋಜನೆ ಮುಗಿಸುವ ನೀಲಿನಕ್ಷೆ ತಯಾರಿಸಬೇಕು. ಕೊನೆ ಭಾಗದ ತಾಲೂಕುಗಳಿಗೆ ನೀರು ಹರಿಸಲು ನೀಲಿ ನಕ್ಷೆ ತಯಾರಿಸಬೇಕು ಎಂದರು.
ಒಂದು ವೇಳೆ ಈ ಯೋಜನೆ ದೀರ್ಘಕಾಲವಾದರೆ ಯೋಜನಾ ವೆಚ್ಚ ಪದೇ ಪದೇ ಜಾಸ್ತಿಯಾಗುತ್ತದೆ. ರೈತಾಪಿ ವರ್ಗ ಸಂಕಷ್ಟಕ್ಕೆ ಸಿಲುಕುತ್ತದೆ. ಪದೇ ಪದೇ ಮಳೆಯ ಅಭಾವ ಹಾಗೂ ಬೆಲೆಕುಸಿತ ದಿಂದ ಈರುಳ್ಳಿ, ಟೊಮೆಟೊ, ಶೇಂಗಾ, ತೆಂಗು, ರಾಗಿ,ಮೆಕ್ಕೆ ಜೋಳ, ಕಡಲೆ ಇತ್ಯಾದಿ ಬೆಳೆಗಳ ನಷ್ಟಕ್ಕೆ ಹೆಚ್ಚಿನ ಪರಿಹಾರ ನಿಧಿ ಸ್ಥಾಪಿಸುವ ಮೂಲಕ ರೈತ ಸಂಕುಲವನ್ನು ಪಾರು ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ಇನ್ನು ತುಮಕೂರು, ಚಿತ್ರದುರ್ಗ, ದಾವಣಗೆರೆ ನೇರ ರೈಲು ಮಾರ್ಗಕ್ಕೆ ಕೇಂದ್ರ ಸರ್ಕಾರದ ಬಜೆಟ್ನಲ್ಲಿ ಹಣ ಕೊಟ್ಟಿದ್ದರು ರೈಲು ಮಾರ್ಗ ಕನ್ನಡಿಯ ಗಂಟಾಗಿರುವುದು ಈ ಭಾಗದ ಜನರ ಬದುಕಿನ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಈ ವರ್ಷದೊಳಗೆ ರೈಲು ಬಿಡುವ ಸಾಧ್ಯತೆಯನ್ನು ನೋಡಬಹುದೇ ಎಂದು ಪ್ರಶ್ನೆ ಹಾಕಲಾಗಿದೆ.
ಇನ್ನು ಹೈದರಾಬಾದ್ ಕರ್ನಾಟಕದ 371ಜೆ ವಿಧಿ ಪ್ರಕಾರ ವಿಶೇಷ ಪ್ಯಾಕೇಜ್ ಕೊಟ್ಟು ಅವರ ಬದುಕಿಗೆ ಊರುಗೋಲಾಗಿರುವುದು ಸಂತೋಷದ ವಿಚಾರ ಅದೇ ರೀತಿ ಶಾಶ್ವತ ಬರಪೀಡಿತ ಹಾಗೂ ಅಹಿಂದ ಜಿಲ್ಲೆ ಚಿತ್ರದುರ್ಗಕ್ಕೆ ವಿಶೇಷ ಪ್ರಾತಿನಿಧ್ಯ ಕೊಡಬೇಕು ಎಂಬ ಅಭಿಪ್ರಾಯ ತಿಳಿಸಿದರು.
ಬಡವರೇ ಹೆಚ್ಚಿರುವ ನಮ್ಮ ಜಿಲ್ಲೆಗೆ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಗ್ರಾಮೀಣ ಶಾಲೆಗಳ ಕಟ್ಟಡ ನಿರ್ಮಾಣ ಮಾಡಲು ಹೆಚ್ಚಿನ ಅನುದಾನ ಕೊಡಬೇಕು. ಮಳೆಯಿಂದ ಹಾನಿಯಾಗಿರುವ ಗ್ರಾಮೀಣ ರಸ್ತೆಗಳನ್ನು ರಿಪೇರಿ ಮಾಡಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚು ಕಾಡುತ್ತಿರುವ ಹಿನ್ನೆಲೆಯಲ್ಲಿ ದೊಡ್ಡ ದೊಡ್ಡ ಕಾರ್ಖಾನೆಗಳು ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು. ಉದ್ಯೋಗ ಇಲ್ಲದೆ ಯುವ ಜನರು ಪಟ್ಟಣದತ್ತ ಹೋಗುತ್ತಿದ್ದಾರೆ. ಇದನ್ನು ತಡೆಗಟ್ಟಲು ಸರ್ಕಾರ ಕ್ರಮ ಕೈಗೊಳ್ಳಬೇಕು. ರೈತರು ಬೆಳೆಗಳನ್ನು ಬೆಳೆಯಲು ಸಬ್ಸಿಡಿ ಮತ್ತು ರಸಗೊಬ್ಬರ ಸೇರಿದಂತೆ ಬೇಕಾದ ಸಲಕರಣೆಗಳನ್ನು ಸರ್ಕಾರ ಮಂಜೂರು ಮಾಡಲು ಕ್ರಮ ಜರುಗಿಸಬೇಕು. ಜೊತೆಗೆ ಜಿಲ್ಲೆಗೆ ಅನುಕೂಲವಾಗುವಂತೆ ಬಜೆಟ್ ಘೋಷಣೆಯಾಗಲಿ ಎಂದು ಸ್ಥಳೀಯರಾದ ಕುಮಾರ್ ಹೇಳಿದ್ದಾರೆ.
ಒಟ್ಟಾರೆಯಾಗಿ ಫೆಬ್ರವರಿ 17ರಂದು ನಡೆಯಲಿರುವ ರಾಜ್ಯ ಬಜೆಟ್ನಲ್ಲಿ ಜಿಲ್ಲೆಯ ಜನತೆ ಹತ್ತು ಹಲವಾರು ಕನಸುಗಳನ್ನು ಕಟ್ಟಿಕೊಂಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಲಿರುವ ಕೊನೆಯ ಬಜೆಟ್ನಲ್ಲಿ ಜಿಲ್ಲೆಗೆ ಏನು ಏನು ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications