ಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸೂಚನೆ; ಸಿಎಂ ಮೇಲೆ ಕಾಡುಗೊಲ್ಲರ ಆಕ್ರೋಶ
ಚಿತ್ರದುರ್ಗ, ಸೆಪ್ಟೆಂಬರ್ 28: ನಿನ್ನೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು "ಕಾಡುಗೊಲ್ಲರ ಅಭಿವೃವೃದ್ಧಿ ನಿಗಮ" ಸ್ಥಾಪಿಸುವುದಾಗಿ ಘೋಷಿಸಿದ್ದರು. ಆದರೆ ಘೋಷಣೆ ಮಾಡಿ 24 ಗಂಟೆಯೊಳಗೆ ಇಂದು ಈ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದು, ಅದರಲ್ಲಿ "ಗೊಲ್ಲ ಅಭಿವೃದ್ಧಿ ನಿಗಮ" ಸ್ಥಾಪನೆ ಕುರಿತಂತೆ ಕ್ರಮ ಕೈಗೊಳ್ಳಲು ಸೂಚಿಸಿರುವುದಕ್ಕೆ ಕಾಡುಗೊಲ್ಲ ಯುವಕರು, ಹೋರಾಟಗಾರರು, ಮುಖಂಡರು ಸಾಮಾಜಿಕ ಜಾಲತಾಣಗಳಲ್ಲಿ ಸಿಎಂ ಬಿಎಸ್ವೈ ವಿರುದ್ಧ ಸಿಡಿದೆದ್ದಿದ್ದಾರೆ.
ನಿನ್ನೆ ಸಿಎಂ ಯಡಿಯೂರಪ್ಪ ಅವರು ಘೋಷಿಸಿದ್ದೇ ಒಂದು, ಈಗ ಮಾಡುತ್ತಿರುವುದು ಮತ್ತೊಂದು. ಈ ಹೇಳಿಕೆ ನೋಡಿದರೆ ಕಾಡುಗೊಲ್ಲರನ್ನು ದಿಕ್ಕು ತಪ್ಪಿಸುವಂತಹ ಕೆಲಸ ಮಾಡುತ್ತಿರುವುದು ಕಂಡು ಬರುತ್ತಿದೆ. ನಿನ್ನೆ ಘೋಷಣೆಯಲ್ಲಿ 'ಕಾಡುಗೊಲ್ಲ' ಇವತ್ತು 'ಗೊಲ್ಲ' ಎಂದಿದ್ದಾರೆ. ಇದರಲ್ಲಿ ಯಾರ ಕೈವಾಡವಿದೆ ಎಂದು ಕಾಡುಗೊಲ್ಲರು ಪ್ರಶ್ನಿಸಿದ್ದಾರೆ.

ನಿನ್ನೆ ಕಾಡುಗೊಲ್ಲ ಸಮುದಾಯ ಎಂದಿದ್ದ ಬಿಎಸ್ ವೈ
"ನಿನ್ನೆ ಸಿಎಂ ಬಿಎಸ್ವೈ ರೈತರಿಗೆ ಸ್ವಾತಂತ್ರ್ಯ ನೀಡುವುದಕ್ಕಾಗಿ, ಅವರು ಬೆಳೆದ ಬೆಳೆಯನ್ನು ಅವರು ಎಪಿಎಂಸಿಯಲ್ಲಾಗಲಿ ಅಥವಾ ಎಲ್ಲಿ ಬೇಕಾದರೂ ಮಾರುವ ಅವಕಾಶ ಅವರಿಗೆ ನೀಡಲಾಗುತ್ತಿದೆ. ಬಹುತೇಕ ರೈತರು ಇದನ್ನು ಸ್ವಾಗತ ಮಾಡುತ್ತಿದ್ದಾರೆ. ಹಾಗೆಯೇ, ಬಹುದಿನಗಳ ಬೇಡಿಕೆಯಂತೆ ಕಾಡುಗೊಲ್ಲರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ" ಎಂದು ಹೇಳಿದ್ದರು. ಇದೀಗ ಗೊಲ್ಲ ನಿಗಮ ಮಂಡಳಿ ಸ್ಥಾಪಿಸಲು ಕ್ರಮ ಕೈಗೊಳ್ಳಲು ಪತ್ರದಲ್ಲಿ ತಿಳಿಸಿದ್ದಾರೆ.

ಸಿಎಂ ಪತ್ರದಲ್ಲಿ ಬೇರೆ ಉಲ್ಲೇಖ?
ಆದರೆ ಇಂದು ರಾಜ್ಯದಲ್ಲಿ ಗೊಲ್ಲ ಜನಾಂಗದವರು ಗಣನೀಯವಾಗಿದ್ದು, ಅವರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಸರ್ವತೋಮುಖ ಅಭಿವೃದ್ಧಿಗಾಗಿ "ಗೊಲ್ಲ ಅಭಿವೃದ್ಧಿ ನಿಗಮ" ವನ್ನು ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಸಮಾಜ ಕಲ್ಯಾಣ ಇಲಾಖೆ ಇವರಿಗೆ ಸೂಚಿಸಲಾಗಿದೆ ಎಂದು ಸಿಎಂ ಪತ್ರದಲ್ಲಿ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಿರೋಧ
ಗೊಲ್ಲ ಅಭಿವೃದ್ಧಿ ನಿಗಮ ಮಂಡಳಿ ನೇಮಕಕ್ಕೆ ವಿರೋಧ ವ್ಯಕ್ತಪಡಿಸಿರುವ ಯುವಕರು, ನಿನ್ನೆ ಕಾಡುಗೊಲ್ಲ ಅಭಿವೃದ್ಧಿ ನಿಗಮ ಮಂಡಳಿ ಅಂತ ಸಿಎಂ ಬಿಎಸ್ವೈ ಹೇಳಿದ್ದರು. ಆದರೆ ಯಾರೋ ಕುತಂತ್ರಿಗಳ ಮಾತಿಗೆ ಕಾಡುಗೊಲ್ಲರನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಸಿಎಂ ಬಿಎಸ್ವೈ ಮಾಡುತ್ತಿದ್ದಾರೆ. ಹೇಳೋದೇ ಒಂದು, ಮಾಡಿದ್ದೇ ಒಂದು. ಕೊಟ್ಟ ಮಾತಿನಂತೆ ನಡೆಯದ ವಚನ ಭ್ರಷ್ಟ ಸಿಎಂ ಎಂದು ಬಿಎಸ್ವೈ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಕಾಡುಗೊಲ್ಲ ಯುವಕರು ಕಿರಿಕಾರಿದ್ದಾರೆ.

"ವೋಟ್ ಬ್ಯಾಂಕ್ ಗಾಗಿ ಬಳಸಿಕೊಳ್ಳುತ್ತಾರೆ"
ಶಿರಾ ಉಪಚುನಾವಣೆಯಲ್ಲಿ ನಮ್ಮ ಒಗ್ಗಟ್ಟು ಪ್ರದರ್ಶಿಸುತ್ತೇವೆ. ಚುನಾವಣೆಯಲ್ಲಿ ನಮ್ಮ ಹೋರಾಟ ಮುಂದುವರಿಯಲಿದೆ ಎಂದೂ ಹೇಳಿದ್ದಾರೆ. ಕಾಡುಗೊಲ್ಲರ ಬಗ್ಗೆ ಅನುಕಂಪವಿಲ್ಲ, ಬದಲಿಗೆ ನಮ್ಮನ್ನು ವೋಟ್ ಬ್ಯಾಂಕ್ ಗಾಗಿ ಬಳಸಿಕೊಳ್ಳುವುದು ಸರಿಯಲ್ಲ. ಈ ಬದಲಾವಣೆಯಲ್ಲಿ ಹಿರಿಯೂರು ಶಾಸಕರ ಕೈವಾಡ ಇದೆ ಎಂದು ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ಅನುಮಾನ ವ್ಯಕ್ತಪಡಿಸಿದ್ದಾರೆ.












Click it and Unblock the Notifications