ಕಾಂಗ್ರೆಸ್ ಪಕ್ಷವನ್ನು ಬೇರು ಸಮೇತ ಕಿತ್ತು ಹಾಕಬೇಕು: ಸಿಎಂ ಬಸವರಾಜ ಬೊಮ್ಮಾಯಿ
ಚಿತ್ರದುರ್ಗ, ನವೆಂಬರ್22: ಬಿಜೆಪಿಯ ಜನಸಂಕಲ್ಪ ಯಾತ್ರೆ ವಿಜಯ ಸಂಕಲ್ಪವಾಗಿ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ನೆಹರೂ ಮೈದಾನದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಜನ ಸಂಕಲ್ಪ ಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾನು ನೀರಾವರಿ ಸಚಿವನಾಗಿ ಕೇವಲ ಒಂದೂವರೆ ತಿಂಗಳು ಆಗಿತ್ತು. 2007/2008ರಲ್ಲಿ ಎರಡು ವರ್ಷ ನೀರಾವರಿ ಹೋರಾಟಗಾರ ಧರಣಿ ನಡೆಸುತ್ತಿದ್ದರು.
ವಾಣಿ ವಿಲಾಸ ಜಲಾಶಯ ಅಭಿವೃದ್ಧಿಗೆ 738 ಕೋಟಿ ರೂ ಮೀಸಲು: ಬೊಮ್ಮಾಯಿ
ನಾನು ನೀರಾವರಿ ಸಚಿವನಾದ ಮೇಲೆ ಧರಣಿ ಸ್ಥಳಕ್ಕೆ ಆಗಮಿಸಿದ್ದೆ. ಆಗ ಸುಮಾರು ಹತ್ತು ಸಾವಿರ ರೈತರು ಸೇರಿದ್ದರು. ಒಂದು ಉದ್ವೇಗದ ವಾತಾವರಣ ನಿರ್ಮಾಣವಾಗಿತ್ತು. ಅಂದಿನ ರೈತರ ಕಷ್ಟದ ದಿನಗಳನ್ನು ಅರಿತು ಅಂದು ಸಿಎಂ ಜೊತೆ ಚರ್ಚಿಸಿ ಭದ್ರಾ ಮೇಲ್ದಂಡೆ ಯೋಜನೆಯಿಂದ ವಾಣಿ ವಿಲಾಸ ಜಲಾಶಯಕ್ಕೆ ನೀರು ಹರಿಸುವ ಕ್ರಮ ಕೈಗೊಳ್ಳಲಾಯಿತು. ಹದಿನೈದು ದಿನದೊಳಗೆ ಆದೇಶ ಮಾಡಲಾಯಿತು ಎಂದು ಹೇಳಿದರು.
ಋಣ ತೀರಿಸುವ ಕೆಲಸ ಕಾಂಗ್ರೆಸ್ ಪಕ್ಷ ಮಾಡಿಲ್ಲ
ಇನ್ನು ರಾಜ್ಯದಲ್ಲಿ ಜಲಸಂಪನ್ಮೂಲ ಇದೆ. ಜನರ ಪರ ಕೆಲಸ ಮಾಡಬೇಕು. ಮೈಸೂರು ಮಹಾರಾಜರು ಮಾಡಿದ ಕಾರ್ಯವನ್ನು ಕಾಂಗ್ರೆಸ್ ಪಕ್ಷ ಮಾಡಲಿಲ್ಲ. ಈ ಭಾಗದ ಕಾಂಗ್ರೆಸ್ ನಾಯಕರು, ವಾಣಿ ವಿಲಾಸ ಜಲಾಶಯಕ್ಕೆ ನೀರು ಕೊಡಲು ಆಗಿಲಿಲ್ಲ. ಮೈಸೂರು ಮಹಾರಾಜರ ಋಣ ತೀರಿಸುವ ಕೆಲಸ ಕಾಂಗ್ರೆಸ್ ಪಕ್ಷ ಮಾಡಿಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಐದು ವರ್ಷಗಳಲ್ಲಿ ಏಳೂವರೆ ಲಕ್ಷ ನೀರಾವರಿ ಸೌಲಭ್ಯ ಯಡಿಯೂರಪ್ಪ ಅವರು ಮಾಡಿದ್ದಾರೆ. ಇಂತಹ ಒಂದು ಸಂದರ್ಭದಲ್ಲಿ ವಿವಿ ಸಾಗರಕ್ಕೆ ಬಾಗಿನ ಅರ್ಪಿಸುವ ಸೌಭಾಗ್ಯ ನನಗೆ ಮತ್ತು ಯಡಿಯೂರಪ್ಪ ಅವರಿಗೆ ಸಿಕ್ಕಿದೆ. ಈ ಜಲಾಶಯಕ್ಕೆ ಕಾಯಕಲ್ಪ ಕೊಡಬೇಕು ಎಂಬ ಹಿನ್ನೆಲೆಯಲ್ಲಿ ಡ್ರಿಪ್ ಯೋಜನೆಯಲ್ಲಿ 20 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಲಾಗಿದೆ. ವಾಣಿ ವಿಲಾಸ ಕಾಲುವೆಗಳನ್ನು ನವೀಕರಣ ಮಾಡಲು 738 ರೂಪಾಯಿ ಕೋಟಿ ಮಂಜೂರು ಮಾಡಲಾಗುತ್ತಿದೆ. ಭದ್ರಾ ಮೇಲ್ದಂಡೆ ಜಲಾಶಯದಿಂದ ವಾಣಿ ವಿಲಾಸ ಜಲಾಶಯಕ್ಕೆ ಐದು ಟಿಎಂಸಿ ನೀರು ಹಂಚಿಕೆ ಮಾಡಲಾಗುತ್ತದೆ ಎಂದರು.
ಕರ್ನಾಟಕದ ದೊಡ್ಡ ಶಕ್ತಿಯ ಕೇಂದ್ರ ಚಿತ್ರದುರ್ಗ ಜಿಲ್ಲೆ
ಇನ್ನು ಧರ್ಮಪುರ ಕೆರೆಗೆ ನೀರು ಹರಿಸುವ ಕಾಮಗಾರಿ ಯೋಜನೆ ಜಾರಿಗೆ ತರಲಾಗಿದೆ. ಹಿರಿಯೂರು ನಗರಕ್ಕೆ ಯುಜಿಡಿ ಯೋಜನೆಗೆ 208 ಕೋಟಿ ರೂಪಾತಿ ಅನುದಾನ ಮಂಜೂರು ಮಾಡಿದೆ. ಇದರಲ್ಲಿ 104 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಚಿತ್ರದುರ್ಗ ಜಿಲ್ಲೆಗೆ ನೀರಾವರಿ ಸೌಲಭ್ಯ ಒದಗಿಸಲಾಗುವುದು. ಒಂದು ಲಕ್ಷಕ್ಕಿಂತ ಹೆಚ್ಚು ಹೆಕ್ಟೇರ್ ನೀರಾವರಿ ಪ್ರದೇಶ ಮಾಡಲಾಗುವುದು. ಜೊತೆಗೆ ರೈತರ ಬೆಳೆಗಳಿಗೆ ಸಮರ್ಪಕವಾದ ಬೆಲೆ ಕೊಡಲಾಗುತ್ತದೆ ಎಂದರು.
ಜಿಲ್ಲೆಯಲ್ಲಿ ಇಸ್ರೋ ಸಂಸ್ಥೆಯಿದೆ. ದೊಡ್ಡ ಶಕ್ತಿಯ ಕೇಂದ್ರ ಚಿತ್ರದುರ್ಗ ಜಿಲ್ಲೆಯಾಗಲಿದೆ. ಒಂದು ಸಾವಿರ ಕೈಗಾರಿಕಾ ಪ್ರದೇಶ ಗುರುತಿಸಿದ್ದು, ಶೀಘ್ರದಲ್ಲೇ ಕಾಮಗಾರಿ ನಡೆಯಲಿದೆ. ತುಮಕೂರು ಹಾಗೂ ದಾವಣಗೆರೆ ನೇರ ರೈಲ್ವೆ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲಾಗುತ್ತದೆ. ರಾಜ್ಯದಲ್ಲಿ ಎಂಟು ಸಾವಿರ ಶಾಲಾ ಕಟ್ಟಡಗಳನ್ನು ಕಟ್ಟಲಾಗಿದೆ. ಇದು ದೊಡ್ಡ ದಾಖಲೆಯಾಗಿದೆ. ಆರೋಗ್ಯ ಕ್ರಾಂತಿ ನಡೆಯುತ್ತಿದೆ. ಉಚಿತ ಕಣ್ಣಿನ ತಪಾಸಣಾ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಬಿಜೆಪಿ ಸರ್ಕಾರದ ಕೊಡುಗೆಗಳನ್ನು ವಿವರಿಸಿದರು.
ಭ್ರಷ್ಟಾಚಾರ ಹುಟ್ಟು ಹಾಕಿದ್ದೇ ಕಾಂಗ್ರೆಸ್
ರಾಜ್ಯದಲ್ಲಿ ಕಾಂಗ್ರೆಸ್ ಯಾಕೆ ಅಧಿಕಾರಕ್ಕೆ ತರಬೇಕು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬರೀ ಭಾಗ್ಯ ತರುತ್ತಾರೆ. ಆ ಅನ್ನಭಾಗ್ಯದಲ್ಲಿ ಕನ್ನ ಮಾಡಿದ್ದಾರೆ. ಎಸ್ಸಿ ಎಸ್ಟಿ ಹಾಸ್ಟೆಲ್ನಲ್ಲಿ ಹಾಸಿಗೆಯಲ್ಲಿ ದೊಡ್ಡ ಹಗರಣ ನಡೆದಿದೆ. ಬಿಡಿಎ,ನೀರಾವರಿ, ವಿದ್ಯುತ್ ವಿವಿಧ ಯೋಜನೆಗಳಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ. ಭ್ರಷ್ಟಾಚಾರ ಮುಚ್ಚಿ ಹಾಕಲು ಲೋಕಾಯುಕ್ತ ಮುಚ್ಚಿ ಹಾಕಿದರು. ಅವರ ವಿರುದ್ಧ 50ಕ್ಕಿಂತ ಹೆಚ್ಚು ಕೇಸುಗಳಿವೆ . ಭ್ರಷ್ಟಾಚಾರ ಹುಟ್ಟು ಹಾಕಿದ್ದೇ ಕಾಂಗ್ರೆಸ್. ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿ, ಇಂತವರು ಭ್ರಷ್ಟಾಚಾರ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿಕಾರಿದರು.
ಕಾಂಗ್ರೆಸ್ ಪಕ್ಷವನ್ನು ಬೇರು ಸಮೇತ ಕಿತ್ತು ಹಾಕಬೇಕು
ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಅತ್ಯಧಿಕ ಮತಗಳಿಂದ ಆಯ್ಕೆಯಾಗಿ ಅಧಿಕಾರಕ್ಕೆ ಬರುತ್ತೇವೆ. ಕಾಂಗ್ರೆಸ್ ಪಕ್ಷ ಮೂರನೇ ಸ್ಥಾನಕ್ಕೆ ಕುಸಿಯಲಿದೆ. ಈ ಚುನಾವಣೆ ಕರ್ನಾಟಕದ ರಾಜ್ಯದ ಚುನಾವಣೆಗೆ ದಿಕ್ಸೂಚಿಯಾಗಲಿದೆ. ಬಿಜೆಪಿಯ ಪರಿಕಲ್ಪನೆ ಜನರು ಆರ್ಥಿಕವಾಗಿ ಇರಬೇಕು ಎಂದು ತಿಳಿಸಿದರು. ಭ್ರಷ್ಟಾಚಾರದ ಕಾಂಗ್ರೆಸ್ ಪಕ್ಷವನ್ನು ಬೇರು ಸಮೇತ ಕಿತ್ತು ಹಾಕಬೇಕು ಎಂದು ಜನರಿಗೆ ಕರೆ ನೀಡಿದರು.
ಇನ್ನು ಶುಗರ್ ಕಂಪನಿ ಪ್ರಾರಂಭಿಸಬೇಕು ಎನ್ನುವುದು ಈ ಭಾಗದ ರೈತರ ಬೇಡಿಕೆಯಾಗಿದೆ. ಇದರ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತನೆ ಮಾಡಿ ಹದಿನೈದು ದಿನದೊಳಗೆ ತಜ್ಞರ ಸಮಿತಿಯೊಂದನ್ನು ಕಳಿಸಲಾಗುತ್ತದೆ ಎಂದು ಸಿಎಂ ಭರವಸೆ ನೀಡಿದರು. ಅಲ್ಲದೇ ಅಪ್ಪರ್ ಭದ್ರಾ ರಾಷ್ಟ್ರೀಯ ಯೋಜನೆಯಾಗಬೇಕು. ಶಾಸಕಿ ಕೆ ಪೂರ್ಣಿಮಾ ಶ್ರೀನಿವಾಸ್ ಅವರು ಜನ ಉಪಯೋಗಿ ಶಾಸಕಿಯಾಗಿದ್ದಾರೆ. ಮತ್ತೊಮ್ಮೆ ಪೂರ್ಣಿಮಾ ಅವರಿಗೆ ಆಶಿರ್ವಾದ ಮಾಡಬೇಕು ಎಂದು ಜನರಲ್ಲಿ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಸಚಿವ ಬಿ ಶ್ರೀರಾಮುಲು, ಸಚಿವ ಗೋವಿಂದ ಕಾರಜೋಳ, ಶಾಸಕರಾದ ತಿಪ್ಪಾರೆಡ್ಡಿ, ಶಾಸಕಿ ಕೆ.ಪೂರ್ಣಿಮಾ ರಾಜೇಶ್ ಗೌಡ, ನವೀನ್, ರವಿ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.