ಸಿಡಿ ಪ್ರಕರಣ; ಒಂದೇ ಪದದಲ್ಲಿ ಪ್ರತಿಕ್ರಿಯೆ ಕೊಟ್ಟ ಜಗ್ಗೇಶ್
ಚಿತ್ರದುರ್ಗ, ಮಾರ್ಚ್ 28; "ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು. ಎಲ್ಲರಿಗೂ ಇದೊಂದು ಪದವೇ ಸಾಕು ಎಂಬುದು ನನ್ನ ಭಾವನೆಯಾಗಿದೆ. ಎಲ್ಲಾ ಕ್ಷೇತ್ರದಲ್ಲೂ ಪ್ರಾಮಾಣಿಕತೆಗಿಂತ ವಾಮ ಮಾರ್ಗಗಳೇ ಪ್ರಧಾನವಾಗಿವೆ" ಎಂದು ನಟ, ಬಿಜೆಪಿ ನಾಯಕ ಜಗ್ಗೇಶ್ ಹೇಳಿದರು.
ಭಾನುವಾರ ಚಿತ್ರದುರ್ಗದಲ್ಲಿ ಮಾತನಾಡಿದ ಅವರು, "ಇವತ್ತಿನ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ತಂತ್ರಕ್ಕೆ ಪ್ರತಿ ತಂತ್ರವಾಗಿದೆ. ಸಿಡಿ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ" ಎಂದರು.
"ಎಚ್. ಡಿ.ಕುಮಾರಸ್ವಾಮಿ ನನ್ನ ಸಿನಿಮಾಗಳ ನಿರ್ಮಾಪಕರು ಹಾಗೂ ಡಿ. ಕೆ. ಶಿವಕುಮಾರ್ ರಾಜಕೀಯಕ್ಕೆ ಕರೆ ತಂದವರು. ಎಲ್ಲರೂ ನನಗೆ ಉತ್ತಮ ಸ್ನೇಹಿತರು" ಎಂದು ಜಗ್ಗೇಶ್ ಹೇಳಿದರು.

ಇದಕ್ಕೂ ಮೊದಲು ದಾವಣಗೆರೆ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲಾ ಮಟ್ಟದ ಮಾಧ್ಯಮ ಮಂಥನ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಜಗ್ಗೇಶ್, "ನಾವು ನಿತ್ಯ ಕನಸು ಕಾಣಬೇಕು, ಕನಸು ದೊಡ್ಡ ಪ್ರಮಾಣವಾಗಿರಬೇಕು ಮತ್ತು ಮೌಲ್ಯದ ಬೆಲೆ ಕಾಣಬೇಕಾದರೆ ಸುಂದರ ಕನಸು ಕಾಣಬೇಕು" ಎಂದರು.
"ಇವತ್ತಿನ ದಿನಗಳಲ್ಲಿ ಮಾಧ್ಯಮ ಪರಿಣಾಮಕಾರಿಯಾಗಿದೆ. ಸೋಷಿಯಲ್ ಮೀಡಿಯಾ ಮತ್ತು ಟಿವಿಗಳ ನಡುವೆ ಪ್ರಿಂಟ್ ಮೀಡಿಯಾ ಇಂದು ಸಂಕಷ್ಟಕ್ಕೆ ಸಿಲುಕಿದೆ. ನಾನೂ ಬೆಳೆಯಲು ಮಾಧ್ಯಮ ಕಾರಣ, ಈ ಹಂತಕ್ಕೆ ಬರಲು ಮಾಧ್ಯಮ ಕಾರಣ" ಎಂದರು.
"ಇಂದು ಮೀಡಿಯಾ ಜಗತ್ತಿನ ಪ್ರತಿ ಮೂಲೆಗೂ ತಲುಪುತ್ತಿದೆ ಅದನ್ನು ಸಮರ್ಥವಾಗಿ ಬಳಸಬೇಕು. ಮಾಧ್ಯಮವನ್ನು ಬಳಸಿಕೊಂಡು ಎಲ್ಲಾ ಕಡೆ ಮುಟ್ಟಿರುವ ದೇಶದ ಏಕೈಕ ವ್ಯಕ್ತಿ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು" ಎಂದು ಹೇಳಿದರು.
"ಇಂದು ಪ್ರಭಾವಿ ಮಾಧ್ಯಮ ಮುದ್ರಣ ಮಾಧ್ಯಮವಾಗಿದೆ. ಆನ್ ಲೈನ್ ಮೀಡಿಯಾ, ಇ ಪೇಪರ್ ಬಂದಿದ್ದು ಸ್ಪರ್ಧೆಯೂ ಇದೆ. ಅದನ್ನು ಸೂಕ್ಷ್ಮ ವಾಗಿ ಬಳಸಿಕೊಂಡು ಮುನ್ನುಗ್ಗಿ ಕೆಲಸಮಾಡಬೇಕು" ಎಂದು ಜಗ್ಗೇಶ್ ತಿಳಿಸಿದರು.











Click it and Unblock the Notifications