ಸಚಿವ ಸಂಪುಟ ಸೇರುವರೇ ಹಿರಿಯೂರಿನ ಕೆ.ಪೂರ್ಣಿಮಾ ಶ್ರೀನಿವಾಸ್?
ಚಿತ್ರದುರ್ಗ, ಜುಲೈ 24: ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನಗೊಂಡಿದ್ದು, ಬಿಜೆಪಿ ಸರ್ಕಾರ ರಚನೆಯಲ್ಲಿ ತೊಡಗಲು ಸಿದ್ಧತೆ ನಡೆಸಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಳೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದು ಬಹುತೇಕ ಖಚಿತವಾಗಿದ್ದು, ಸಚಿವ ಸಂಪುಟದಲ್ಲಿ ಯಾರು ಯಾರು ಸೇರಿಕೊಳ್ಳುತ್ತಾರೆಂಬುದೂ ಸದ್ಯಕ್ಕೆ ಕುತೂಹಲದ ವಿಷಯವಾಗಿದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೆ. ಪೂರ್ಣಿಮಾ ಶ್ರೀನಿವಾಸ್ ಮೊದಲ ಬಾರಿಗೆ ಹಿರಿಯೂರಿನಲ್ಲಿ ಕಮಲದ ಬಾವುಟ ಹಾರಿಸಿ ಹಿಂದುಳಿದ ವರ್ಗದ ನಾಯಕಿಯಾಗಿ ಗುರುತಿಸಿಕೊಂಡಿದ್ದು, ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಸಾರ್ವಜನಿಕ ವಲಯದಲ್ಲಿ ಮಾತುಗಳು ಕೇಳಿಬಂದಿವೆ.
ನಿನ್ನೆ ಮೈತ್ರಿ ಸರ್ಕಾರ ಪತವಾಗುತ್ತಿದ್ದಂತೆ ಇತ್ತ ಹಿರಿಯೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಇದೇ ಸಂದರ್ಭ, ಸಾಮಾಜಿಕ ಜಾಲತಾಣಗಳಲ್ಲಿ ಶಾಸಕಿ ಕೆ.ಪೂರ್ಣಿಮಾ ಅವರಿಗೆ ಸಚಿವ ಸ್ಥಾನ ನೀಡುವಂತೆ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ತಂದೆ ಸೋತ ಕ್ಷೇತ್ರದಲ್ಲಿ ಮಗಳ ಗೆಲುವಿನ ಸಾಧನೆ: 2013ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕೆ.ಆರ್.ಪುರಂನಿಂದ ಟಿಕೆಟ್ ವಂಚಿತವಾಗಿ ಕಾಂಗ್ರೆಸ್ ಪಕ್ಷದಲ್ಲಿ ಮಾಜಿ ಸಚಿವ ದಿ. ಎ.ಕೃಷ್ಣಪ್ಪ ಕೊನೆ ಗಳಿಗೆಯಲ್ಲಿ ಜೆಡಿಎಸ್ ಪಕ್ಷ ಸೇರಿಕೊಂಡು ಹಿರಿಯೂರಿನಿಂದ ಸ್ಪರ್ಧಿಸಿ ಕೇವಲ 1200 ಮತಗಳಿಂದ ಸೋಲುಂಡರು.
ಸೋಲಿಗೆ ಧೃತಿಗೆಡದ ಎ.ಕೃಷ್ಣಪ್ಪ ನಂತರ ಜೆಡಿಎಸ್ ರಾಜ್ಯಧ್ಯಕ್ಷರಾದರು. ಹಿರಿಯೂರಿನಲ್ಲಿ ಕಾರ್ಯಕರ್ತರ ಸಮಾವೇಷ ಮಾಡಿ, ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿದರು. ನಂತರ 2014ರಲ್ಲಿ ತುಮಕೂರು ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ ಎ. ಕೃಷ್ಣಪ್ಪ ಅಕಾಲಿಕ ಮರಣಕ್ಕೆ ತುತ್ತಾದರು. ತಂದೆಯ ಸಾವಿನ ನೋವು ನುಂಗಿಕೊಂಡು ಕಾಂಗ್ರೆಸ್ ನಲ್ಲಿ ಬಿಬಿಎಂಪಿ ಸದಸ್ಯರಾಗಿದ್ದ ಕೆ. ಪೂರ್ಣಿಮಾ ನಂತರ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿ ತಂದೆಯ ಕ್ಷೇತ್ರದಲ್ಲಿ ಸಾಧನೆ ಮಾಡಲು ಮುಂದಾದರು.
ಅದರಂತೆಯೇ ತಂದೆಯ ಹಾದಿಯಲ್ಲಿ ಕೆ. ಪೂರ್ಣಿಮಾ ಪಕ್ಷ ಸಂಘಟನೆಯತ್ತ ಹೆಜ್ಜೆ ಹಾಕಿ ತಳಮಟ್ಟದಿಂದ ಪಕ್ಷ ಸಂಘಟಿಸಿದರು. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಹಿರಿಯೂರಿನಿಂದ ಸ್ಪರ್ಧಿಸಿ ತಮ್ಮ ತಂದೆಯನ್ನು ಸೋಲಿಸಿದ ಮಾಜಿ ಸಚಿವ ಡಿ. ಸುಧಾಕರ ಅವರನ್ನೇ ಸುಮಾರು 12 ಸಾವಿರ ಮತಗಳಿಂದ ಹಿರಿಯೂರಿನಲ್ಲಿ ಮೊದಲ ಬಾರಿಗೆ ಬಿಜೆಪಿ ಬಾವುಟ ಹಾರಿಸಿದರು.
ಹೀಗಾಗಿ ಶಾಸಕಿ ಕೆ. ಪೂರ್ಣಿಮಾಗೆ ಸಚಿವ ಸ್ಥಾನ ನೀಡುವಂತೆ ಅಭಿಮಾನಿಗಳು ಮತ್ತು ಕಾರ್ಯಕರ್ತರಿಂದ ಮಾತುಗಳು ಕೇಳಿ ಬರುತ್ತಿವೆ.












Click it and Unblock the Notifications