ಮಾರ್ಚ್ ಅಂತ್ಯದ ವೇಳೆಗೆ ಹಿರಿಯೂರು ತಾಲೂಕಿನ ಈ 9 ಕೆರೆಗಳಿಗೂ ನೀರು-ಮಾಹಿತಿ ತಿಳಿಯಿರಿ
ಹಿರಿಯೂರು, ಜನವರಿ, 04: ತಾಲೂಕಿನ ಧರ್ಮಪುರ ಹೋಬಳಿಯ 9 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಪ್ರಾಯೋಗಿಕವಾಗಿ ಮೊದಲ ಹಂತದ ಯಶಸ್ಸು ಸಿಕ್ಕಿದ್ದು, 3 ಹಳ್ಳಿಗಳ ಕೆರೆಗಳಿಗೆ ನೀರು ಹರಿಸಲು ನಡೆಸಿದ ಪರೀಕ್ಷೆ ಯಶಸ್ವಿಯಾಗಿದೆ.
ಹಿಂದಿನ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜ್ ಬೊಮ್ಮಾಯಿ ಅವರು ಕಳೆದ ವರ್ಷ ಧರ್ಮಪುರ ಹೋಬಳಿಗೆ ಆಗಮಿಸಿ 90 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದ್ದು, ಇದೀಗ ಫಲಪ್ರದವಾಗುವ ಹಂತ ತಲುಪಿದೆ. 90 ಕೋಟಿ ರೂಪಾಯಿ ವೆಚ್ಚದ ಕಾಮಗಾರಿ ಎರಡು ಹಂತಗಳಲ್ಲಿ ನಡೆಯುತ್ತಿದ್ದು, ಈಗಾಗಲೇ ಮೊದಲ ಹಂತದಲ್ಲಿ 40 ಕೋಟಿ ಹಣ ಬಿಡುಗಡೆಯಾಗಿ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ.

ಮೊದಲ ಹಂತದಲ್ಲಿ ಗೂಳ್ಯ, ಅಬ್ಬಿನಹೊಳೆ ಹಾಗೂ ಈಶ್ವರಗೆರೆ ಗ್ರಾಮಗಳ ಕೆರೆಗಳ ಕಾಮಗಾರಿ ಪೂರ್ಣಗೊಂಡಿದ್ದು, ಪ್ರಾಯೋಗಿಕವಾಗಿ ನೀರು ಹರಿಸುವ ಪರೀಕ್ಷೆ ಮಾಡಲಾಗಿದೆ. ಎರಡನೇ ಹಂತದ ಕಾಮಗಾರಿಗೆ 50 ಕೋಟಿ ರೂಪಾಯಿ ಹಣ ಬಿಡುಗಡೆಯಾಗಿದ್ದು, ಎರಡನೇ ಹಂತದ ಗ್ರಾಮಗಳ ಕೆರೆಗಳಾದ ಮುಂಗಸವಳ್ಳಿ ಹಾಗೂ ಮಂಗಸವಳ್ಳಿ ಗೋಗಟ್ಟೆ, ಸೂಗೂರು, ಹರಿಯಬ್ಬೆ ಅಜ್ಜಿಕಟ್ಟೆ , ಶ್ರವಣಗೆರೆ ಮತ್ತು ಧರ್ಮಪುರ ಕೆರೆಗಳ ಕೆಲಸ ನಡೆಯುತ್ತಿದೆ.
ಎರಡನೇ ಹಂತದಲ್ಲಿ ಪೈಪ್ ಲೈನ್ ಕಾಮಗಾರಿ ನಡೆಯುತ್ತಿದ್ದು, ಅಲ್ಲಲ್ಲಿ ಕೆಲವು ರೈತರು ಪರಿಹಾರಕ್ಕಾಗಿ ಅಡೆತಡೆ ಉಂಟು ಮಾಡಿದ್ದು, ಶೀಘ್ರದಲ್ಲೇ ಸಮಸ್ಯೆ ಬಗೆಹರಿದು ಕಾಮಗಾರಿ ಪೂರ್ಣಗೊಳ್ಳಲಿದೆ ಎನ್ನಲಾಗಿದೆ. 9 ಹಳ್ಳಿಗಳ ಕೆರೆಗಳಿಗೆ ನೀರು ತುಂಬಿಸುವ ಮಹಾತ್ವಾಕಾಂಕ್ಷಿ ಯೋಜನೆ ಕೊನೆಯ ಹಂತದಲ್ಲಿದ್ದು, ಮಾರ್ಚ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಂಡು ಕೆರೆ ತುಂಬಿಸುವ ಕಾರ್ಯ ಆಗಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸುತ್ತಾರೆ.
ಕುಡಿಯುವ ನೀರಿಗೆಂದು ಯೋಜನೆಗೆ ಅನುಮೋದನೆ ಸಿಕ್ಕಿದ್ದು, ಆ ಭಾಗದ ಕೆರೆಗಳು ತುಂಬುವುದರಿಂದ ಅಂತರ್ಜಲ ಅಭಿವೃದ್ಧಿಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಲಿದೆ. ಧರ್ಮಪುರ ಭಾಗದ ಸುತ್ತ ಮುತ್ತಲಿನ ಹಳ್ಳಿಗಳ ಸಾವಿರಾರು ಎಕರೆ ಭೂಮಿಗೆ ಈ ಯೋಜನೆ ವರದಾನವಾಗಲಿದೆ.
ಈ ಕುರಿತು ಮಾಹಿತಿ ನೀಡಿರುವ ಸಣ್ಣ ನೀರಾವರಿ ಇಲಾಖೆ ಸಹಾಯಕ ಇಂಜಿನಿಯರ್ ಜಿ.ಭೀಮರಾಜ ಅವರು ಮಾತನಾಡಿ, ಯೋಜನೆಯ ಮೋಟರ್ ಪಂಪ್ಗಳ ಸಾಮರ್ಥ್ಯ ಪರೀಕ್ಷಿಸಲಾಗುತ್ತಿದೆ. ಕೇವಲ 5 ನಿಮಿಷಗಳ ಕಾಲ ಟ್ರಯಲ್ ಮಾಡಿ ಗೂಳ್ಯ ಕೆರೆಗೆ ನೀರು ಬಿಡಲಾಗಿದೆ. 4 ಮೋಟರ್ ಪಂಪ್ಗಳ ಟ್ರಯಲ್ ಪೂರ್ಣಗೊಂಡ ನಂತರ ಮೊದಲ ಹಂತದಲ್ಲಿ 3 ಕೆರೆಗಳಿಗೆ, 2ನೇ ಹಂತದಲ್ಲಿ 6 ಕೆರೆಗಳಿಗೆ ನೀರು ಹರಿಸಲಾಗುತ್ತದೆ ಎಂದರು.
ಇನ್ನು ಒಂದು ಮೀಟರ್ ಆಳದಲ್ಲಿ ಪೈಪ್ ಹಾಕುವುದರಿಂದ ಪರಿಹಾರ ನೀಡುವ ಪ್ರಶ್ನೆಯೇ ಬರುವುದಿಲ್ಲ. ತಮ್ಮ ಜಮೀನುಗಳಲ್ಲಿ ಪೈಪ್ಲೈನ್ ಕಾಮಗಾರಿ ನಡೆಯುತ್ತಿದ್ದು, ಕೆಲವು ರೈತರು ಅಸಮಾಧಾನಗೊಂಡಿದ್ದು ಅವರಿಗೆ ವಾಸ್ತವ ಸ್ಥಿತಿ ವಿವರಿಸಿ ಮಾರ್ಚ್ ಅಂತ್ಯಕ್ಕೆ 9 ಕೆರೆಗಳಿಗೂ ನೀರು ತುಂಬಿಸುವ ಯೋಜನೆ ಸಾಕಾರಗೊಳ್ಳಲಿದೆ ಎಂದರು.
ಕಳೆದ ಬಾರಿ ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಧರ್ಮಪುರ ಭಾಗದ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ 90 ಕೋಟಿ ವೆಚ್ಚದಲ್ಲಿ ಕಾಮಗಾರಿ ಆರಂಭಿಸಲಾಗಿತ್ತು . ಈ ಯೋಜನೆ ವಾಣಿವಿಲಾಸ ಜಲಾಶಯದಿಂದ ವೇದಾವತಿ ನದಿಗೆ ನೀರು ಹರಿಸಿ, ಹೊಸಳ್ಳಿ ಬಳಿ ಇರುವ ವೇದಾವತಿ ನದಿಗೆ ಬ್ಯಾರೇಜ್ ನಿರ್ಮಿಸಿ ಪೈಪ್ಲೈನ್ ಮೂಲಕ ನೇರವಾಗಿ ಧರ್ಮಪುರ ಕೆರೆ ಸೇರಿದಂತೆ ಇತರೆ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ರೂಪಿಸಲಾಗಿತ್ತು. 2018ರಲ್ಲಿ ನುಡಿದಂತೆ ನಡೆದಿದ್ದು, ಆ ಭಾಗದ ಜನರ ಋಣ ತೀರಿಸಲಾಗದೆ ಎಂದು ಹಿರಿಯೂರು ಮಾಜಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಹೇಳಿದ್ದಾರೆ.












Click it and Unblock the Notifications