ಚಿತ್ರದುರ್ಗ; ಗ್ರಾಮ ವಿದ್ಯುತ್ ಪ್ರತಿನಿಧಿಗಳಿಗೆ ಸಂಬಳವೇ ನೀಡಿಲ್ಲ
ಚಿತ್ರದುರ್ಗ, ಜುಲೈ 26; ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕು ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ಗ್ರಾಮ ವಿದ್ಯುತ್ ಪ್ರತಿನಿಧಿಗಳಿಗೆ ಕಳೆದ ಆರೇಳು ತಿಂಗಳಿನಿಂದ ಸಂಬಳವೇ ನೀಡಿಲ್ಲ.
ಸೋಮವಾರ ಬದುಕಿ ಬದುಕಲು ಬಿಡಿ ವೇದಿಕೆ ಈ ಕುರಿತು ಹಿರಿಯೂರಿನ ಕಾರ್ಯಪಾಲಕ ಅಭಿಯಂತರರಿಗೆ ಮನವಿ ಮಾಡಿದೆ. ಗ್ರಾಮ ವಿದ್ಯುತ್ ಪ್ರತಿನಿಧಿಗಳು ಕಡಿಮೆ ಸಂಬಳಕ್ಕೆ ಹೆಚ್ಚು ಕೆಲಸ ಮಾಡುತ್ತಿದ್ದಾರೆ. ಕೋವಿಡ್ ಕಾಲದಲ್ಲೂ ಸಹ ಮನೆಮನೆಗೆ ತೆರಳಿ ಶುಲ್ಕ ವಸೂಲಿ ಮಾಡಿ ಇಲಾಖೆಯ ಕೆಲಸವನ್ನು ಮನೆ ಕೆಲಸ ಎನ್ನುವ ರೀತಿಯಲ್ಲಿ ಮಾಡುತ್ತಾ ಬಂದಿದ್ದಾರೆ ಎಂದು ತಿಳಿಸಿದ್ದಾರೆ.
ಗ್ರಾಮ ವಿದ್ಯುತ್ ಪ್ರತಿನಿಧಿಗಳು ಬೇರೆ ಉದ್ಯೋಗವಿಲ್ಲದೆ ಇದನ್ನೇ ಅವಲಂಬಿಸಿಕೊಂಡು ತಿಂಗಳೆಲ್ಲಾ ದುಡಿದು ಸಂಬಳ ಬರುತ್ತದೆ ಎಂದು ಕಾಯುತ್ತಾರೆ. ವೇತನ ನೀಡದಿದ್ದಲ್ಲಿ ಕುಟುಂಬ ನಿರ್ವಹಣೆಯನ್ನು ಹೇಗೆ ಮಾಡಬೇಕು?. ಇಲಾಖೆಯ ಅಧೀನ ಅಧಿಕಾರಿಗಳ ಬಳಿ ವೇತನ ಕೇಳಿದರೆ ಅಲೆಸುತ್ತಾರೆ ಎಂದು ಆರೋಪಿಸಲಾಗಿದೆ.

ಪ್ರತಿಯೊಬ್ಬನಿಗೂ ಬದುಕು ವ ಹಕ್ಕಿದೆ. ನಿರ್ಗತಿಕ ಬಡವನಿಗೂ ಸಹ, ಭಿಕ್ಷುಕನಿಗೆ ಸಹ ಸಾಮಾಜಿಕ ಭದ್ರತೆ ಯೋಜನೆಗಳು ಸಹಾಯಮಾಡುತ್ತದೆ. ಅದೇ ರೀತಿ ಗ್ರಾಮ ವಿದ್ಯುತ್ ಪ್ರತಿನಿಧಿಗಳಿಗೆ ಮಾಡಿದ ಕೆಲಸಕ್ಕೆ ಸಂಬಳವನ್ನು ಸರಿಯಾದ ಸಮಯಕ್ಕೆ ಕೊಡಬೇಕಾದ ಜವಾಬ್ದಾರಿ ಇಲಾಖೆಯದ್ದು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಚಿತ್ರದುರ್ಗ ಪಕ್ಕದ ತುಮಕೂರು ಜಿಲ್ಲೆಯಲ್ಲಿ ಪ್ರತಿ ತಿಂಗಳು 5ರಿಂದ 10ನೇ ತಾರೀಖಿನೊಳಗೆ ಸಂಬಳ ಮಾಡಿಕೊಡುತ್ತಾರೆ. ಅದೇ ಮಾದರಿಯಲ್ಲಿ ಇಲ್ಲೂ ಹಿರಿಯೂರಿನಲ್ಲಿಯೂ ಸಹ ವೇತನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ವೇತನ ಮಾತ್ರವಲ್ಲ ಹಬ್ಬದ ದಿನಗಳಲ್ಲಿ ರಜಾದಿನಗಳನ್ನು ಕಡಿತಗೊಳಿಸುವುದು ಸರಿಯಲ್ಲ. ಆದ್ದರಿಂದ ಸ್ಥಳೀಯ ಹಬ್ಬಗಳ ದಿನಗಳಲ್ಲಿ ರಜೆಗಳನ್ನು ನೀಡಬೇಕು. ಒಂದು ವಾರದೊಳಗಾಗಿ ಸಂಬಳ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ವೇತನ ನೀಡದಿದ್ದರೆ ಪ್ರಜಾಪ್ರಭುತ್ವ ಮಾದರಿಯಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಮನವಿ ಪತ್ರದಲ್ಲಿ ಎಚ್ಚರಿಕೆಯನ್ನು ಸಹ ನೀಡಲಾಗಿದೆ. ಸಂಬಳವನ್ನು ಒಂದು ವಾರದಲ್ಲಿ ಕೊಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಮಿತಿ ಸದಸ್ಯರಿಗೆ ಭರವಸೆ ನೀಡಲಾಗಿದೆ.
ಸಾಮಾಜಿಕ ಕಾರ್ಯಕರ್ತರ ಕಸವನಹಳ್ಳಿ ರಮೇಶ್, ಪತ್ರಕರ್ತರಾದ ಜಿ. ಎಲ್. ಮೂರ್ತಿ, ವಾಲ್ಮೀಕಿ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮಾಳಿಗೆ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಜೊತೆಗಿದ್ದರು.












Click it and Unblock the Notifications