ಚಿತ್ರದುರ್ಗ; ತಡರಾತ್ರಿ ಅಬ್ಬರಿಸಿದ ಮುಂಗಾರು ಮಳೆ
ಚಿತ್ರದುರ್ಗ, ಜೂನ್ 03; ಜಿಲ್ಲೆಯ ವಿವಿಧ ತಾಲೂಕಿನ ಹಳ್ಳಿಗಳಲ್ಲಿ ಗುಡುಗು, ಸಿಡಿಲು ಸಹಿತ ಮಳೆಯಾಗಿದೆ. ತಡರಾತ್ರಿ ಸುರಿದ ಮಳೆಗೆ ಅಲ್ಲಲ್ಲಿ ಹಳ್ಳಕೊಳ್ಳ, ಚೆಕ್ ಡ್ಯಾಂ, ಕೃಷಿ ಹೊಂಡ ತುಂಬಿ ಹರಿಯುತ್ತಿವೆ.
ಚಳ್ಳಕೆರೆ ತಾಲೂಕಿನ ರೆಡ್ಡಿಹಳ್ಳಿ, ರೇಖಲಗೆರೆ, ತಳುಕು, ಎನ್. ದೇವರಹಳ್ಳಿ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ ಎಂದು ತಿಳಿದು ಬಂದಿದೆ. ಹಿರಿಯೂರು ತಾಲ್ಲೂಕಿನ ಬಹುತೇಕ ಹಳ್ಳಿಗಳಲ್ಲಿ ಮಳೆಯಾಗಿದೆ.
ಮಸ್ಕಲ್, ವಿವಿ ಪುರ, ಬಾಲೆನಹಳ್ಳಿ, ಇಕ್ಕನೂರು ಮತ್ತಿತರ ಹಳ್ಳಿಗಳಲ್ಲಿ ಮಳೆ ಬಿದ್ದಿದೆ. ಹಿರಿಯೂರು 13.8 ಮಿ. ಮೀ., ಬಬ್ಬೂರು 13.0, ಇಕ್ಕನೂರು 13.6, ಈಶ್ವರಗೆರೆ 14.2 ಮಿ. ಮೀ. ಮಳೆಯಾಗಿದೆ.

ತಾಲೂಕಿನ ಆಯ್ದ ಭಾಗಗಳಾದ ಐಮಂಗಲ, ಮಸ್ಕಲ್, ಹರ್ತಿಕೊಟೆ, ಕೊವೆರಹಟ್ಟಿ, ಕಲ್ಲಹಟ್ಟಿ, ಬುರುಜಿನರೊಪ್ಪ, ಹಾಗೂ ಧರ್ಮಪುರ ಹಾಗೂ ಜೆಜಿ ಹಳ್ಳಿ ಹೋಬಳಿಯ ಕೆಲವು ಭಾಗಗಳಲ್ಲಿ ಈರುಳ್ಳಿ ಬಿತ್ತನೆ ಮಾಡಲಾಗಿದೆ.
ಚಿತ್ರದುರ್ಗ ತಾಲ್ಲೂಕಿನ ಭರಮಸಾಗರ ಹೋಬಳಿಯ ಹುಲ್ಲೇನಾಳ್ ಗ್ರಾಮದ ಮಂಜಪ್ಪ ಎನ್ನುವ ರೈತನ ಈರುಳ್ಳಿ ಬೆಳೆ ಮಳೆ ಬಂದ ಹಿನ್ನೆಲೆಯಲ್ಲಿ ಕೊಚ್ಚಿ ಹೋಗಿದೆ. ಅಕ್ಕಪಕ್ಕದ ಸರ್ಕಾರಿ ಹಳ್ಳವನ್ನು ಒತ್ತುವರಿ ಮಾಡಿದ್ದು ಇದರ ಸಲುವಾಗಿ ಹಳ್ಳಕ್ಕೆ ಹರಿದು ಹೋಗಬೇಕಾಗಿದ್ದ ನೀರು ಮಂಜಪ್ಪನ ಜಮೀನಿಗೆ ನುಗ್ಗಿ ಬೆಳೆ ನಾಶವಾಗಿದೆ.
ಹಳ್ಳದ ನೀರು ಹೊಲಕ್ಕೆ ನುಗ್ಗಿದ ಕಾರಣ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆಯುತ್ತಿರುವ ಈರುಳ್ಳಿ ಹಾನಿಯಾಗಿ ನಷ್ಟ ಸಂಭವಿಸಿದೆ. ಅಕ್ಕಪಕ್ಕದವರು ಒತ್ತುವರಿ ಮಾಡಿದ್ದ ಜಮೀನನ್ನು ತೆರವು ಮಾಡಿಸಿ ಕೊಡುವೆಂತೆ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ಗೆ ದೂರು ಸಲ್ಲಿಸಲಾಗಿತ್ತು. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಮಂಜಪ್ಪ ಅಸಹಾಯಕತೆ ವ್ಯಕ್ತಪಡಿಸಿದರು.
ಒಟ್ಟಾರೆಯಾಗಿ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದ್ದು, ಕೊರೊನಾ ಮಧ್ಯೆ ಬಿಸಿಲಿನಿಂದ ಬಸವಳಿದಿದ್ದ ಬರದನಾಡಿನ ಜನತೆಗೆ ವರುಣ ದೇವ ತಂಪೆರೆದಿದ್ದಾನೆ. ಮಳೆಯ ಅಬ್ಬರಕ್ಕೆ ಅನ್ನದಾತರ ಮೊಗದಲ್ಲಿ ಮಂದಹಾಸ ಮೂಡಿದ್ದು, ಜಿಲ್ಲೆಯ ಹಲವೆಡೆ ಕೃಷಿ ಚಟುವಟಿಕೆ ಗರಿಗೆದರಿದೆ.












Click it and Unblock the Notifications