ಲಾಕ್ ಡೌನ್ ನಡುವೆಯೇ ಆರೋಗ್ಯ ಸಚಿವರಿಗೆ ಚಿತ್ರದುರ್ಗದಲ್ಲಿ ಅದ್ದೂರಿ ಸ್ವಾಗತ!
ಚಿತ್ರದುರ್ಗ, ಜೂನ್ 02: ಕರ್ನಾಟಕದಲ್ಲಿ ದಿನೇ ದಿನೇ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ರಾಜ್ಯದಲ್ಲಿ ಕೊರೊನಾ ವೈರಸ್ ನಿಯಂತ್ರಣ ಮಾಡಲು ಎಷ್ಟೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಆದರೆ ಈ ನಡುವೆ ರಾಜ್ಯದ ಈ ಪರಿಸ್ಥಿತಿಯ ಅರಿವಿರುವ ಆರೋಗ್ಯ ಸಚಿವರೇ ಸಾವಿರಾರು ಜನರಿಂದ ಅದ್ದೂರಿ ಸ್ವಾಗತ ತೆಗೆದುಕೊಂಡಿದ್ದಾರೆ.
ಇಂದು ವೇದಾವತಿ ನದಿಗೆ ಬಾಗಿನ ಅರ್ಪಿಸಲು ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ಪರುಶುರಾಂಪುರ ಗ್ರಾಮಕ್ಕೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ, ಆರೋಗ್ಯ ಸಚಿವ ಶ್ರೀರಾಮುಲು ಅವರಿಗೆ ಅದ್ಧೂರಿ ಸ್ವಾಗತವನ್ನು ಮಾಡಲಾಗಿದೆ. ಅವರನ್ನು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನರು ಎತ್ತಿನ ಗಾಡಿಯಲ್ಲಿ ಮೆರವಣಿಗೆ ಮಾಡಿದರು. ಅಷ್ಟೇ ಅಲ್ಲದೇ ಮೆರವಣಿಗೆಯಲ್ಲಿ ಸಚಿವರಿಗೆ ಬೃಹತ್ ಸೇಬಿನ ಹಾರ ಹಾಕುವ ಮೂಲಕ ಸ್ವಾಗತಿಸಿದರು. ಹೂ ಮಳೆಯನ್ನೂ ಅಭಿಮಾನಿಗಳು ಸುರಿಸಿದ್ದಾರೆ.
ಆದರೆ ಕೊರೊನಾ ವೈರಸ್ ನ ಸಂಕಷ್ಟ ಎದುರಿಸುತ್ತಿರುವ ಈ ಸಮಯದಲ್ಲಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ನಿಯಮವೇ ಆಗಿರುವಾಗ ಆರೋಗ್ಯ ಸಚಿವರೇ ಜನಸ್ತೋಮ ಸೇರಿಸಿ ಈ ರೀತಿ ಅದ್ಧೂರಿ ಸ್ವಾಗತ ತೆಗೆದುಕೊಂಡಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಎದ್ದಿದೆ.

ಮೆರವಣಿಗೆ ಮಾರ್ಗದ ಉದ್ದಕ್ಕೂ ಸಚಿವರಿಗೆ ರಾಶಿ ರಾಶಿ ಹೂ ತೂರಿದ್ದಾರೆ. ಅಲ್ಲಿ ಸೇರಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಹರ ಸಾಹಸ ಪಟ್ಟಿದ್ದಾರೆ. ಇಂಥ ಸಮಯದಲ್ಲಿ ಸಚಿವರಾದವರಿಗೆ ಈ ಬಗ್ಗೆ ಅರಿವಿರಬೇಕಿತ್ತು ಎಂಬ ಮಾತುಗಳೂ ಕೇಳಿಬರುತ್ತಿವೆ.
ಸಚಿವರ ಮೆರವಣಿಗೆಯಲ್ಲಿ ಸಂಸದ ಎ.ನಾರಾಯಣ ಸ್ವಾಮಿ. ಜಿ. ಎಚ್. ತಿಪ್ಪಾರೆಡ್ಡಿ ಭಾಗಿಯಾಗಿದ್ದರು.












Click it and Unblock the Notifications