ಚಿತ್ರದುರ್ಗ: 8 ವರ್ಷ ಗತಿಸಿದರೂ ಕಾರ್ಯರೂಪಕ್ಕೆ ಬಾರದ ಅತಿಥಿಗೃಹ
ಚಿತ್ರದುರ್ಗ, ಜು.8 : ಪ್ರೇಕ್ಷಣೀಯ ಸ್ಥಳವನ್ನು ನೋಡಲು ನೂರಾರು ಕಿಲೋಮೀಟರ್ಗಳಿಂದ ಪ್ರವಾಸಿಗರು ಬರುತ್ತಾರೆ. ಆ ಪ್ರವಾಸಿಗರು ತಂಗಲು ಕೋಟಿ ಕೋಟಿ ರೂಪಾಯಿ ಖರ್ಚು ಮಾಡಿ ಸುಸಜ್ಜಿತವಾದ ಅತಿಥಿ ಗೃಹವನ್ನು ನಿರ್ಮಾಣ ಮಾಡಲಾಗಿದೆ. ಆದರೆ ಕಾರ್ಯರೂಪಕ್ಕೆ ಬರದೇ ಹಾಳಾಗುವ ಸ್ಥಿತಿಯಲ್ಲಿದ್ದು, ಸುತ್ತಲೂ ಗಿಡಗಂಟೆಗಳು ಬೆಳೆದು ನಿಂತಿದ್ದು, ಇವು ಅತಿಥಿ ಗೃಹಗಳ ಅಥವಾ ಪಾಳು ಕಟ್ಟಡಗಳಾ ಎನ್ನುವಂತಾಗಿದೆ.
ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಏಕೈಕ ಜೀವನಾಡಿಯಾಗಿರುವ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸಪುರ ಬಳಿ ಇರುವ ವಾಣಿ ವಿಲಾಸ ಜಲಾಶಯದ ಮುಂಭಾಗದಲ್ಲಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ಪ್ರವಾಸಿಗರು ಬಂದು ತಂಗಲು ಕೋಟಿ ಕೋಟಿ ರೂಪಾಯಿ ಖರ್ಚು ಮಾಡಿ ಅತಿಥಿ ಗೃಹಗಳನ್ನು ನಿರ್ಮಾಣ ಮಾಡಲಾಗಿದೆ.
ಯಶವಂತಪುರ- ಹೊಸೂರು ರೈಲು ಪುನಶ್ಚೇತನಕ್ಕೆ ಚಿಂತನೆ
ವಿಪರ್ಯಾಸವೆಂದರೆ ಈ ಅತಿಥಿ ಗೃಹಗಳ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕಿಟಕಿ, ಬಾಗಿಲು ಹಾಳಾಗಿ ಹೋಗಿವೆ. ಇನ್ನು ಅತಿಥಿ ಗೃಹಗಳು ಕುಡುಕರ ಅಸಡ್ಡೆಯಾಗಿ ಮಾರ್ಪಟ್ಟಿದೆ.
ಈ ಪ್ರವಾಸಿ ಮಂದಿರದಲ್ಲಿ ಕುರಿ ಕೋಳಿಗಳನ್ನು ಕೊಯ್ದು ಊಟ ಮಾಡಿದ ತಟ್ಟೆ, ನೀರಿನ ಬಾಟಲ್ಗಳು ಹಾಗೂ ಮದ್ಯಪಾನದ ಬಾಟಲಿಗಳು ಕಸದ ರಾಶಿ ಹಾಕಿದ್ದು, ಗಬ್ಬೆದ್ದು ನಾರುತ್ತಿದೆ. ಈ ವಸತಿ ಗೃಹಗಳ ಬಗ್ಗೆ ಸಾಕಷ್ಟು ವರದಿ ಮಾಡಿದರೂ ಅಧಿಕಾರಿಗಳು ಮಾತ್ರ ಕ್ರಮಕ್ಕೆ ಮುಂದಾಗುತ್ತಿಲ್ಲ. ಇತ್ತ ತಿರುಗಿಯೂ ನೋಡುತ್ತಿಲ್ಲ. ಏನಾದರೂ ಆಗಲಿ ಎನ್ನುವ ಮಟ್ಟಿಗೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಜುಲೈ 15 ರಿಂದ ವಿವಿ ಸಾಗರಕ್ಕೆ ಭದ್ರಾ ಜಲಾಶಯದಿಂದ ನೀರು, ರೈತರಲ್ಲಿ ಸಂತಸ
5 ಕೋಟಿ ವೆಚ್ಚದಲ್ಲಿ ನಿರ್ಮಾಣ
2014ರಲ್ಲಿ ಪ್ರವಾಸೋದ್ಯಮ ಇಲಾಖೆ ಸಚಿವರಾಗಿದ್ದ ಆರ್ ವಿ. ದೇಶಪಾಂಡೆ ಅವರು 5 ಕೋಟಿ ವೆಚ್ಚದ ಪ್ರವಾಸಿ ಸೌಲಭ್ಯ ಕಲ್ಪಿಸುವ ಕಾಮಗಾರಿಗೆ ಚಾಲನೆ ನೀಡಿದ್ದರು. ಅಂದಿನ ಕಾರ್ಯಕ್ರಮದಲ್ಲಿ ಸಚಿವರಾಗಿದ್ದ ಹೆಚ್. ಆಂಜನೇಯ, ಡಿ. ಸುಧಾಕರ್ ಪಾಲ್ಗೊಂಡಿದ್ದರು. ಒಂದು ವರ್ಷದ ಅವಧಿಯ ಒಳಗೆ ಅಭಿವೃದ್ಧಿ ಪಡಿಸಿದ ಸ್ಥಳವನ್ನು ಪ್ರವಾಸೋದ್ಯಮ ಇಲಾಖೆಗೆ ಅಸ್ತರಿಸುವಂತೆ ನಿರ್ಮಿತಿ ಕೇಂದ್ರಕ್ಕೆ ತಾಕೀತು ಮಾಡಲಾಗಿತ್ತು. ಇದೀಗ ಎಂಟು ವರ್ಷ ಗತಿಸಿದರು ನಿರ್ಮಿತಿ ಕೇಂದ್ರದವರು ಕಾಮಗಾರಿ ಪೂರ್ಣಗೊಳಿಸದ ಕಾರಣ ಇಡೀ ಅತಿಥಿ ಗೃಹಗಳು ಅಸಡ್ಡಿಯ ತಾಣವಾಗಿ ಮಾರ್ಪಟ್ಟಿದೆ.
ಒಳಗಡೆ ಹೈಟೆಕ್ ಶೌಚಾಲಯ ಹಾಗೂ ಕೊಠಡಿಗಳಿವೆ. ಆದರೆ ಹೊರಗಡೆಯಿಂದ ನೋಡಲು ಸುಂದರವಾಗಿದ್ದು ಪ್ರವಾಸಿಗರಿಗೆ ಲಭ್ಯವಿಲ್ಲ ಪಾದಾಚಾರಿ ರಸ್ತೆಗಳಿಗೆ ಹಾಕಿರುವ ಟೈಲ್ಸ್ ಗಳು ಕೂಡ ಹಾಳಾಗಿವೆ.
ಕೆಲಸ ಪೂರ್ಣಗೊಳಿಸಲು ಸೂಚನೆ
ಒನ್ಇಂಡಿಯಾ ನ್ಯೂಸ್ ಪ್ರತಿನಿಧಿ ಜೊತೆ ದೂರವಾಣಿ ಮೂಲಕ ಮಾತನಾಡಿದ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಜಿತೇಂದ್ರನಾಥ್ ಅವರು "ಈಗಾಗಲೇ ಕಳೆದ ಐದನೇ ತಾರೀಖು ಸ್ಥಳ ಪರಿಶೀಲನೆ ನಡೆಸಿ, ಅಲ್ಲಿನ ಚಿತ್ರಣವನ್ನು ಗಮನಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ವರದಿ ನೀಡಲಾಗಿದೆ. ಜೊತೆಗೆ ನಿರ್ಮಿತಿ ಕೇಂದ್ರದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಒಂದರಿಂದ ಎರಡು ತಿಂಗಳ ಒಳಗಾಗಿ ಸಂಪೂರ್ಣ ಕಾಮಗಾರಿ ಮುಗಿಸಿಕೊಡುವ ಭರವಸೆ ನೀಡಿದ್ದಾರೆ" ಎಂದು ತಿಳಿಸಿದರು.
4 ಕೋಟಿ ಅನುದಾನ ಬಿಡುಗಡೆ, 1 ಕೋಟಿ ರೂ ಬಾಕಿ
5 ಕೋಟಿಯ ಈ ಯೋಜನೆಗೆ 4 ಕೋಟಿ ಅನುದಾನ ಮಂಜೂರಾಗಿದ್ದು, ಉಳಿದ 1 ಕೋಟಿ ಅನುದಾನ ಬಿಡುಗಡೆ ಆಗಬೇಕಿದೆ. ಇಲ್ಲಿನ ವಸ್ತು ಸ್ಥಿತಿಯ ಬಗ್ಗೆ ಕೇಂದ್ರ ಸರ್ಕಾರಕ್ಕೆ ವಿವರಿಸಿ ಪತ್ರ ಬರೆಯಲಾಗಿದೆ. ಮತ್ತೆ ಕೇಂದ್ರದಿಂದ ಸಮರ್ಪಕವಾದ ವರದಿ ಕೇಳಿದ್ದಾರೆ. ಆ ವರದಿಯನ್ನು ಸಿದ್ಧಪಡಿಸಲಾಗುತ್ತಿದೆ. ಹಾಗೂ ಕಾಮಗಾರಿ ಬೇಗ ಪೂರ್ಣಗೊಳಿಸಿ ಕೊಡಲು ನಿರ್ಮಿತಿ ಕೇಂದ್ರಕ್ಕೆ ಜಿಲ್ಲಾಧಿಕಾರಿಗಳಿಂದ ಆದೇಶ ಮಾಡಿಸಲಾಗುವುದು ಎಂದರು.
ನಿಯಾಮಾನುಸಾರ ಹಸ್ತಾಂತರ
ನಿರ್ಮಿತಿ ಕೇಂದ್ರದಿಂದ ಕಾಮಗಾರಿ ಪೂರ್ಣಗೊಳಿಸಿದರೆ ಸರ್ಕಾರದ ಅನುಮೋದನೆ ಮೇರೆಗೆ ನಿಯಮಾನುಸಾರ ಯಾರಿಗೆ ಹಸ್ತಾಂತರಿಸಬೇಕು ಅದನ್ನು ಮೂರ್ನಾಲ್ಕು ತಿಂಗಳಲ್ಲಿ ಕೆಲಸ ಮುಗಿಸಿ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಕೆಲಸ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.
Recommended Video