ಚಿತ್ರದುರ್ಗಕ್ಕೆ ನೂತನ ಎಸ್ಪಿ; ಅಸಮಾಧಾನ ಹೊರಹಾಕಿದ ಗೂಳಿಹಟ್ಟಿ ಶೇಖರ್
ಚಿತ್ರದುರ್ಗ, ಫೆಬ್ರುವರಿ 01: ಚಿತ್ರದುರ್ಗಕ್ಕೆ ನೂತನ ಎಸ್ ಪಿಯಾಗಿ ಜಿ.ರಾಧಿಕಾ ಅವರನ್ನು ನೇಮಿಸಿರುವುದಕ್ಕೆ ಅಸಮಾಧಾನ ಹೊರಹಾಕಿದ್ದಾರೆ ಶಾಸಕ ಗೂಳಿಹಟ್ಟಿ ಡಿ.ಶೇಖರ್.
"ನಾಲ್ಕು ಜನ ಶಾಸಕರು ಹೋಗಿ ಪ್ರಾಮಾಣಿಕ ಅಧಿಕಾರಿಯನ್ನು ನೇಮಿಸಿ ಜಿಲ್ಲೆಯಲ್ಲಿನ ಸಮಸ್ಯೆಗಳನ್ನು ನಿರ್ಮೂಲನೆ ಮಾಡಬೇಕೆಂದು ಮನವಿ ಮಾಡಿದ್ದೆವು. ಆದರೆ ಆ ಮಾತಿಗೆ ಬೆಲೆ ನೀಡಿಲ್ಲ. ಕಾಂಗ್ರೆಸ್ ಹಿನ್ನೆಲೆಯಿರುವವರನ್ನು ಎಸ್ಪಿ ಆಗಿ ಇಲ್ಲಿಗೆ ನೇಮಿಸಿದ್ದಾರೆ. ಅವರಿಂದ ಏನು ನಿರೀಕ್ಷೆ ಮಾಡಲು ಸಾಧ್ಯ" ಎಂದು ಪ್ರಶ್ನಿಸಿದ್ದಾರೆ. "ಇಲ್ಲಿ ಶಾಸಕರ ಮಾತು ಏನೂ ನಡೆಯುವುದಿಲ್ಲ. ಕೈ ಕಟ್ ಬಾಯ್ ಮುಚ್ಚು ಅನ್ನುವಂತಾಗಿದೆ. ನಾನೊಬ್ಬನೇ ಅಲ್ಲ, ಬಹಳ ಜನ ಶಾಸಕರ ಗೋಳು ಇದೇ. ಆಡಳಿತ ಪಕ್ಷದ ಶಾಸಕರ ಗೋಳು ನೋಡಿ, ನಾವೆಲ್ಲಾ ಅಸಹಾಯಕರಾಗಿದ್ದೇವೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಜಿಲ್ಲೆಯ ನಾಲ್ಕು ಶಾಸಕರಾದ ತಿಪ್ಪಾರೆಡ್ಡಿ, ಪೂರ್ಣಿಮಾ, ಚಂದ್ರಪ್ಪ ಹಾಗೂ ನಾನು ಸಂಪುಟದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದರೂ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಲ್ಲಿ ಒಟ್ಟಾಗಿರುತ್ತಿದ್ದೆವು. ಹೀಗಾಗಿ ನಮ್ಮ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ದಕ್ಷ ಎಸ್ಪಿ ನೇಮಿಸುವಂತೆ ಸಿಎಂಗೆ ಮನವಿ ಮಾಡಿದ್ದೆವು. ಬಲವಂತವಾಗಿ ನಮ್ಮಿಂದ ಎಸ್ಪಿ ರಾಧಿಕಾ ನೇಮಕಕ್ಕೆ ಪತ್ರ ತೆಗೆದುಕೊಂಡು ಹಿರಿಯೂರಿನ ಕಾಂಗ್ರೆಸ್ ನಾಯಕರೊಬ್ಬರ ಸಂಬಂಧಿಯನ್ನು ಎಸ್ಪಿಯಾಗಿ ನೇಮಿಸಿದ್ದಾರೆ" ಎಂದು ತಿಳಿಸಿದರು.












Click it and Unblock the Notifications