ರೈತರ ಚಳವಳಿ ಮುಂದುವರೆಯಲಿದೆ; ರಾಕೇಶ್ ಟಿಕಾಯತ್
ಚಿತ್ರದುರ್ಗ, ಮಾರ್ಚ್ 22: "ಕಳೆದ 4 ತಿಂಗಳುಗಳಿಂದ ರೈತರು ದೆಹಲಿಗೆ ಮುತ್ತಿಗೆ ಹಾಕಿ ಹೋರಾಟ ಮಾಡುತ್ತಿದ್ದಾರೆ. ನಮ್ಮ ಹೋರಾಟ ಬಹಳಷ್ಟು ಮುಂದುವರೆಯಲಿದೆ" ಎಂದು ಕರ್ನಾಟಕ ಪ್ರವಾಸದಲ್ಲಿರುವ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖ್ಯಸ್ಥ ರಾಕೇಶ್ ಟಿಕಾಯತ್ ಹೇಳಿದರು.
Recommended Video
ಸೋಮವಾರ ಅವರು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಹೊರವಲಯದಲ್ಲಿರುವ ಮಾಜಿ ಸಚಿವ ಏಕಾಂತಯ್ಯ ತೋಟದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು.
"ಬಹಳ ಮುಖ್ಯವಾದ ಕೃಷಿ ಮತ್ತು ಬದುಕಿಗೆ ಸಂಬಂಧಪಟ್ಟ ಮೂರು ಕಾನೂನುಗಳು ಬಂದಿವೆ. ಈ ಕಾನೂನುಗಳು ಸಂಪೂರ್ಣ ರೈತರ ವಿರೋಧಿಯಾಗಿವೆ. ಕಾನೂನುಗಳನ್ನು ವಾಪಸ್ ಪಡೆಯಬೇಕು" ಎಂದು ಸರ್ಕಾರವನ್ನು ಒತ್ತಾಯಿಸಿದರು.

"ಕನಿಷ್ಠ ಬೆಂಬಲ ಬೆಲೆ ನೀತಿ ಜಾರಿಗೆ ತರಬೇಕು ಎನ್ನುವ ಉದ್ದೇಶದಿಂದ ನಾವು ಹೋರಾಟ ಮಾಡುತ್ತಿದ್ದೇವೆ. ನಮ್ಮ ಹೋರಾಟ ಪ್ರಾರಂಭವಾಗಿ ನಾಲ್ಕು ತಿಂಗಳು ಕಳೆದಿದೆ. ಎರಡು ತಿಂಗಳುಗಳಿಂದ ಸರ್ಕಾರ ನಮ್ಮ ಜೊತೆ ಮಾತುಕತೆ ನಡೆಸಿಲ್ಲ" ಎಂದು ಆರೋಪಿಸಿದರು.
"ಕರ್ನಾಟಕದ ಬೆಳೆಗಳಾದ ರಾಗಿ, ಜೋಳ, ಸಜ್ಜೆ ಇತರೆ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಸರ್ಕಾರ ಘೋಷಣೆ ಮಾಡುತ್ತದೆ ಅಷ್ಟೇ. ಇದಕ್ಕೆ ಕಾನೂನು ಇಲ್ಲ, ಯಾವ ಕಾನೂನು ಚೌಕಟ್ಟಿನಲ್ಲಿ ತೆಗೆದುಕೊಳ್ಳುವ ನಿಯಮ ಇಲ್ಲ. ಕೇವಲ ಘೋಷಣೆಗೆ ಅಷ್ಟೇ ಅದು ಸೀಮಿತವಾಗಿದೆ" ಎಂದರು.
"ರೈತರಿಗೆ ಪ್ರತಿ ಕ್ವಿಂಟಲ್ಗೆ 700 ರಿಂದ 800 ರೂ. ನಷ್ಟ ಉಂಟಾಗುತ್ತದೆ. ಹಾಗಾಗಿ ಶಾಸನಬದ್ಧವಾಗಿ ಬೆಂಬಲ ಬೆಲೆ ಜಾರಿಗೆ ಬರಬೇಕು. ನಮ್ಮ ಚಳುವಳಿಗೆ ದೇಶದ ಅನೇಕ ಭಾಗಗಳಲ್ಲಿ ಬೆಂಬಲ ಸಿಕ್ಕಿದೆ. ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ರೈತರ ಸಂಘಟನೆ ತುಂಬಾ ಬಲಿಷ್ಠವಾಗಿವೆ" ಎಂದು ತಿಳಿಸಿದರು.
"ಈ ಚಳವಳಿ ಸರ್ಕಾರ ಮತ್ತು ಮೂರು ಕಾನೂನುಗಳನ್ನು ಮಾತ್ರ ವಾಪಸ್ ಪಡೆಯಲು ನಡೆಯುವ ಚಳುವಳಿಯಲ್ಲ. ದುಡಿಯುವ ವರ್ಗ ಹಾಗೂ ಲೂಟಿಕೋರರ ವಿರುದ್ಧ ನಡೆಯುವ ಚಳುವಳಿಯಾಗಿದೆ. ದೆಹಲಿಯಲ್ಲಿ ನಡೆಯುತ್ತಿರುವ ಚಳವಳಿಗೆ ದಕ್ಷಿಣ ಭಾರತದ ರೈತರು ಹೆಚ್ಚು ಬಲ ಕೊಡಬೇಕು" ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಏಕಾಂತಯ್ಯ, ನಂಜುಂಡಸ್ವಾಮಿ ಪುತ್ರಿ ಚುಕ್ಕಿ, ನಂದಿನಿ ಜಯರಾಮ್, ವಿಜಯಕುಮಾರ್, ಸುರೇಶ್, ಹೆಚ್. ಆರ್. ತಿಮ್ಮಯ್ಯ, ಕೆ. ಟಿ. ತಿಪ್ಪೇಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.












Click it and Unblock the Notifications