ಹಿರಿಯೂರು: 94 ದಿನಗಳ ಧರಣಿ ವಾಪಸ್, ನೀರಿಗಾಗಿ ಹೋರಾಡುತ್ತಿದ್ದವರಿಗೆ ತಾತ್ಕಾಲಿಕ ಜಯ
ಚಿತ್ರದುರ್ಗ ಜೂ. 14: ನೀರಿಗಾಗಿ ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಹಿರಿಯೂರು ನಗರದ ತಾಲೂಕು ಕಚೇರಿ ಮುಂಭಾಗದಲ್ಲಿ ನಡೆಸುತ್ತಿದ್ದ ರೈತರ ಧರಣಿ ಸತ್ಯಾಗ್ರಹಕ್ಕೆ ತಾತ್ಕಾಲಿಕ ಜಯ ಸಿಕ್ಕಂತಾಗಿದೆ.
ಭದ್ರಾ ಜಲಾಶಯದಿಂದ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಜಲಾಶಯಕ್ಕೆ 10 ಟಿಎಂಸಿ ನೀರು ಮೀಸಲಿಡಬೇಕು, ಧರ್ಮಪುರ ಹಾಗೂ ಜವನಗೊಂಡನಹಳ್ಳಿ ಹೋಬಳಿಯ ಎಲ್ಲ ಕೆರೆಗಳಿಗೆ ನೀರು ಹರಿಸಬೇಕು ಜೊತೆಗೆ ಹಿರಿಯೂರು ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಆಗ್ರಹಿಸಿ ಹಿರಿಯೂರು ತಾಲ್ಲೂಕು ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ನಡೆಸುತ್ತಿದ್ದ ಧರಣಿ ಸತ್ಯಾಗ್ರಹ ಬರೋಬ್ಬರಿ 94 ದಿನಗಳ ನಂತರ ಮಂಗಳವಾರ ಜಿಲ್ಲಾಧಿಕಾರಿ ಕವಿತಾ ಎಸ್ ಮಣ್ಣೀಕೆರಿ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಮನವಿ ಮಾಡಿದ ನಂತರ ರೈತರು ಧರಣಿ ವಾಪಸ್ ಪಡೆದಿದ್ದಾರೆ.
ಮುಂದಿನ ಹೋರಾಟ ತೀರ್ಮಾನದ ರೂಪುರೇಷೆಗಳನ್ನು ಚರ್ಚಿಸೋಣ. 94 ದಿನಗಳ ಶಾಂತಿಯುತವಾಗಿ ಧರಣಿ ಸತ್ಯಾಗ್ರಹ ನಡೆಸಲು ಸಹಕರಿಸಿದ ರೈತ ಸಂಘದ ಕಾರ್ಯಕರ್ತರಿಗೂ, ಪೋಲಿಸ್ ಇಲಾಖೆ ಅಧಿಕಾರಿಗಳಿಗೂ ಮತ್ತು ಹೋರಾಟಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಪ್ಪೇಸ್ವಾಮಿ ಅರ್ಪಿಸಿದರು.

ಧರಣಿ ಸತ್ಯಾಗ್ರಹಕ್ಕೆ ರೈತಸಂಘ ನಾಂದಿ
ಧರಣಿ ಕುರಿತು ಮಾತನಾಡಿದ ಜಿಲ್ಲಾಧಿಕಾರಿ ಕವಿತಾ ಎಸ್ ಮಣ್ಣೀಕೆರಿ ಅವರು ಕಳೆದ ಶುಕ್ರವಾರ ನಾವು ರೈತರ ಧರಣಿಯ ಬೇಡಿಕೆಗಳ ಕುರಿತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಜೊತೆ ಸಭೆ ಮಾಡಲಾಯಿತು. ಪ್ರಸ್ತಾವನೆ ಸಲ್ಲಿಕೆ ಸಿದ್ದಗೊಂಡಿದೆ. ಅದನ್ನು ತಿದ್ದುಪಡಿ ಮಾಡಿ ಸರ್ಕಾರಕ್ಕೆ ನಿಮ್ಮ ಮನವಿಯನ್ನು ಸಲ್ಲಿಸಲಾಗುವುದು. ಅದೊಷ್ಟು ಬೇಗ ಧರಣಿ ರೈತರ ಜೊತೆಗೆ ಸಭೆಯನ್ನು ಕರೆಯಲು ಪತ್ರವನ್ನು ಸರ್ಕಾರಕ್ಕೆ ಕಳಿಸಲಾಗುತ್ತದೆ. ಈಗ ಮಳೆಗಾಲ ಆರಂಭವಾಗಿದ್ದು, ರೈತರಿಗೆ ಸಾಕಷ್ಟು ಕೃಷಿ ಕೆಲಸಗಳಿರುತ್ತವೆ. ಆಗಾಗಿ ಧರಣಿಯನ್ನು ವಾಪಸ್ ಪಡೆಯಿರಿ ಎಂದು ಮನವಿ ಮಾಡಿದರು.
ಧರಣಿ ಕುರಿತು ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಕೆಟಿ ತಿಪ್ಪೇಸ್ವಾಮಿ ಮಾತನಾಡಿ, ಜೂನ್ 4 ರಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ನಮ್ಮ ತಾಲ್ಲೂಕಿಗೆ ಬಂದಾಗ ವಾಣಿ ವಿಲಾಸ ಜಲಾಶಯಕ್ಕೆ 5 ಟಿಎಂಸಿ ನೀರು ಹಂಚಿಕೆ ಮಾಡಲಾಗುವುದು ಎಂದು ಭರವಸೆ ನೀಡಿ ಹೋಗಿದ್ದಾರೆ. ನೀವು ಯಾವುದೇ ಕಾರಣಕ್ಕೂ ಚಿಂತನೆ ಮಾಡಬೇಡಿ, ಎಲ್ಲೋ ವ್ಯತ್ಯಾಸವಾಗಿದ್ದು ಅದನ್ನು ಸರಿಪಡಿಸಲಾಗುವುದು ಎಂದು ಸಿಎಂ ಹೇಳಿದ್ದಾರೆ. ಜೊತೆಗೆ ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು ಸಹ ಈ ವಿಚಾರವಾಗಿ ಸರ್ಕಾರದ ಜೊತೆ ಸಭೆ ನಡೆಸಿ ಬೇಗ ಇದನ್ನು ಇತ್ಯರ್ಥ ಮಾಡುವ ಜವಾಬ್ದಾರಿ ನಮ್ಮದು ಎಂದಾಗ ಜಿಲ್ಲಾ ಕಮಿಟಿಯವರು ಒಪ್ಪಿ ಧರಣಿಯನ್ನು ವಾಪಸ್ ಪಡೆಯುತ್ತೇವೆ ಎಂದು ತಿಳಿಸಿ ಧರಣಿ ಸತ್ಯಾಗ್ರಹಕ್ಕೆ ನಾಂದಿ ಹಾಡಿದರು.

ರೈತರ ಮನವಿಗೆ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ ಬೊಮ್ಮಾಯಿ
ಭದ್ರಾ ಜಲಾಶಯದಿಂದ ವಾಣಿ ವಿಲಾಸ ಜಲಾಶಯಕ್ಕೆ ಬರಬೇಕಾಗಿರುವ ನೀರಿನ ಕೊರತೆಯನ್ನು ನೀಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಭರವಸೆ ನೀಡಿದರು.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಧರ್ಮಪುರ ಹಾಗೂ ಏತನೀರಾವರಿ ಕೆರೆಗೆ ನೀರು ಹರಿಸುವ 90 ಕೋಟಿ ವೆಚ್ಚದ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಹರಿಯಬ್ಬೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಸಮಾವೇಶದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಳೆದ ಜೂನ್ 4 ರಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರು ಹಿರಿಯೂರು ತಾಲ್ಲೂಕಿನ ಧರ್ಮಪುರ ಕೆರೆಗೆ ನೀರು ಹರಿಸುವ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಬಂದಾಗ ವಿವಿ ಸಾಗರಕ್ಕೆ 10 ಟಿಎಂಸಿ ನೀರು ಮೀಸಲಿಡಬೇಕು ಎಂದು ಮನವಿ ಮಾಡಿದ್ದರು. ರೈತರ ಮನವಿಗೆ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಅಂದು ಹರಿಯಬ್ಬೆ ಗ್ರಾಮದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ " ಭದ್ರಾ ಜಲಾಶಯದಿಂದ ಹಿರಿಯೂರಿನ ವಾಣಿ ವಿಲಾಸ ಜಲಾಶಯಕ್ಕೆ ಬರಬೇಕಾಗಿರುವ ನೀರಿನ ಕೊರತೆಯನ್ನು ಸರಿದುಗಿಸಲಾಗುವುದು" ಪೂರ್ಣಿಮಾ ತಲೆಕೆಡಿಸಿಕೊಳ್ಳಬೇಡ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ವೇದಿಕೆಯಲ್ಲಿ ಮಾತನಾಡಿ ಭರವಸೆ ನೀಡಿದ್ದರು.

ಹರಿಯಬ್ಬೆ ಕೆರೆಗೆ ನೀರು ಹರಿಸಲು ಕ್ರಮ
ನಾವು ಹಂಚಿಕೆ ಮಾಡಿದ 5 ಟಿಎಂಸಿ ನೀರಿನಲ್ಲಿ, ಕಾಂಗ್ರೆಸ್ ಸರಕಾರ 3 ಟಿಎಂಸಿ ನೀರು ಕಡಿತಗೊಳಿಸಿ, 2 ಟಿಎಂಸಿಗೆ ಇಳಿಸಲಾಗಿದೆ. ಭದ್ರಾ ಜಲಾಶಯದಿಂದ ವಿವಿ ಸಾಗರಕ್ಕೆ ಬಾಕಿ ಇರುವ ನೀರಿನ ಬಗ್ಗೆ ಶಾಸಕಿ ಕೆ ಪೂರ್ಣಿಮಾ ತಲೆಕೆಡಿಸಿಕೊಳ್ಳುವಂತಿಲ್ಲ ಅದನ್ನು ಸರಿದೂಗಿಸಲಾಗುವುದು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು.
ತುಮಕೂರು, ಚಿತ್ರದುರ್ಗ ಹಾಗೂ ದಾವಣಗೆರೆ ನೇರ ರೈಲು ಸಂಪರ್ಕ ಕಲ್ಪಿಸುವ ಯೋಜನೆಗೆ ಕೇಂದ್ರ ಸಚಿವರೊಂದಿಗೆ ಶೀಘ್ರದಲ್ಲೇ ಅಡಿಗಲ್ಲು ಹಾಕಲಾಗುತ್ತದೆ.ಇನ್ನು ಹಿರಿಯೂರು ತಾಲ್ಲೂಕಿನಲ್ಲಿ ಒಂದೇ ದಿನ ಹಲವಾರು ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಶಾಸಕಿ ಕೆ ಪೂರ್ಣಿಮಾ ಶ್ರೀನಿವಾಸ್ ಅವರು ಹಿರಿಯೂರು ಕ್ಷೇತ್ರದಲ್ಲಿ ಸಾಮಾಜಿಕ ಅವಕಾಶ ಒದಗಿಸುತ್ತಾ ಬಂದಿದ್ದಾರೆ ಎಂದು ಪೂರ್ಣಿಮಾ ಅವರ ಕಾರ್ಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಇನ್ನು ಬಿಟ್ಟು ಹೋಗಿರುವ ಹರಿಯಬ್ಬೆ ಕೆರೆಗೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಹೊಸಳ್ಳಿ ಚೆಕ್ ಡ್ಯಾಂ ಬಳಿ ಕಾಮಗಾರಿ
ಹೊಸಳ್ಳಿ ಚೆಕ್ ಡ್ಯಾಂ ಬಳಿ ಕಾಮಗಾರಿಗೆ ಶಂಕುಸ್ಥಾಪನೆ ಹೌದು ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಧರ್ಮಪುರ ಹಾಗೂ ಹೋಬಳಿಯ 7 ಕೆರೆಗಳಿಗೆ ನೀರು ತುಂಬಿಸುವ 90 ಕೋಟಿ ರೂಪಾಯಿ ಮೊತ್ತದ ಕಾಮಗಾರಿ ಶಂಕುಸ್ಥಾಪನೆ ಹಾಗೂ ಹಿರಿಯೂರು ತಾಲ್ಲೂಕಿನ ಧರ್ಮಪುರ ಹೋಬಳಿಗೆ ಆಗಮಿಸಲಿದ್ದು ಹೊಸಳ್ಳಿ ಚೆಕ್ ಡ್ಯಾಂ ಬಳಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ವಾಣಿವಿಲಾಸ ಜಲಾಶಯದಿಂದ ನೀರು ವೇದಾವತಿ ನದಿಗೆ ಹರಿಸಿ, ಹೊಸಳ್ಳಿ ಬ್ಯಾರೇಜ್ ನಿಂದ ನೇರವಾಗಿ ಪೈಪ್ ಲೈನ್ ಮೂಲಕ ಧರ್ಮಪುರ ಕೆರೆಗೆ ನೀರು ತುಂಬಿಸಲು ಯೋಜನೆ ರೂಪಿಸಲಾಗಿದೆ. ಮಾರ್ಗ ಮಧ್ಯ ಬರುವ ಮುಂಗಸವಳ್ಳಿ, ಸೂಗೂರು, ಅಬ್ಬಿನಹೊಳೆ, ಈಶ್ವರಗೆರೆ, ಗೂಳ್ಯ ಹಾಗೂ ಶ್ರವಣೆಗೆ ಕೆರೆಗಳಿಗೂ ಸಹ ನೀರು ತುಂಬಿಸಲಾಗುತ್ತಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications