ಚಿತ್ರದುರ್ಗ; ವಾರದಿಂದ ಬೀಡುಬಿಟ್ಟಿದ್ದ ಒಂಟಿ ಸಲಗ ಕೊನೆಗೂ ಸೆರೆ
ಚಿತ್ರದುರ್ಗ, ಡಿಸೆಂಬರ್ 9: ಕಳೆದ ಒಂದು ವಾರದಿಂದ ಚಿತ್ರದುರ್ಗ ಜಿಲ್ಲೆಯ ಅರಣ್ಯ ಪ್ರದೇಶಕ್ಕೆ ಭದ್ರಾ ಅಭಯಾರಣ್ಯದಿಂದ ದಾರಿ ತಪ್ಪಿ ಬಂದಿದ್ದ ಒಂಟಿ ಸಲಗ ಕೊನೆಗೂ ಸೆರೆ ಸಿಕ್ಕಿದೆ.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಅರಣ್ಯ ವಲಯದ ತಾಳ್ಯ, ಕಸವನಹಳ್ಳಿ ಮೂಲಕ ಚಿತ್ರದುರ್ಗ ಅರಣ್ಯದ ಕೆನ್ಮಡಲು, ಕಕ್ಕೇರು ಮಾರ್ಗವಾಗಿ ಕುರುಮರಡಿಕೆರೆ ಅರಣ್ಯ ವ್ಯಾಪ್ತಿಯಲ್ಲಿ ಒಂದು ವಾರದಿಂದ ಬೀಡುಬಿಟ್ಟಿತ್ತು. ಹೆಜ್ಜೆ ಗುರುತಿನಿಂದ ಆನೆ ಬಂದಿರುವ ಬಗ್ಗೆ ಸುಳಿವು ತಿಳಿದ ಅರಣ್ಯಾಧಿಕಾರಿಗಳು ಒಂಟಿ ಸಲಗವನ್ನು ಹಿಡಿಯಲು ಹರಸಾಹಸ ಪಟ್ಟಿದ್ದರು. ಈ ಆನೆ ಹಿಡಿಯುವ ಕಾರ್ಯಾಚರಣೆಗೆ ಶಿವಮೊಗ್ಗದ ಸಕ್ರೆಬೈಲು ಬಿಡಾರದ ಆನೆಗಳ ಮೂಲಕ ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದರು.

ಇಂದು ಚಿತ್ರದುರ್ಗ ಜಿಲ್ಲೆಯ ಓಬಳದೇವರಗುಡ್ಡದ ಬಳಿ ಆನೆ ಸೆರೆ ಸಿಕ್ಕಿದೆ. ದಸರಾ ಆನೆ ಅಭಿಮನ್ಯು ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸುಮಾರು ಇಪ್ಪತ್ತೈದು ವರ್ಷದ ಒಂಟಿ ಸಲಗ ಸೆರೆ ಸಿಕ್ಕಿದೆ. ಗೋಪಾಲಸ್ವಾಮಿ, ಕೃಷ್ಣ, ಸಾಗರ ಮತ್ತು ಬಾಲಣ್ಣ ಎಂಬ ಹೆಸರಿನ ಆನೆಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದವು. ಆರು ಮಂದಿ ಟ್ರ್ಯಾಕರ್ಸ್, ನಾಲ್ವರು ವನ್ಯಜೀವಿ ತಜ್ಞರು, ವೈದ್ಯರ ತಂಡ ಹಾಗೂ ನಾಗರಹೊಳೆ ವನ್ಯಜೀವಿ ವಿಭಾಗದ ವೈದ್ಯ ಡಾಕ್ಟರ್ ಮುಜೀಬ್ ಉರ್ ರೆಹಮಾನ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು.
ಆನೆಯನ್ನು ಸಕ್ರೆಬೈಲು ಬಿಡಾರಕ್ಕೆ ಬಿಡುವುದಾಗಿ ತಿಳಿದುಬಂದಿದೆ.












Click it and Unblock the Notifications