ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ; ಡಿ.ಟಿ.ಶ್ರೀನಿವಾಸ್ ಅ.7ಕ್ಕೆ ನಾಮಪತ್ರ ಸಲ್ಲಿಕೆ
ಚಿತ್ರದುರ್ಗ, ಅಕ್ಟೋಬರ್ 3: ಇದೇ ತಿಂಗಳ 28ರಂದು ನಡೆಯಲಿರುವ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಡಿ.ಟಿ. ಶ್ರೀನಿವಾಸ್ ಅವರು ಇದೇ 7ರಂದು ನಾಮಪತ್ರ ಸಲ್ಲಿಸುವುದಾಗಿ ತಿಳಿದುಬಂದಿದೆ. ತಮ್ಮ ಫೇಸ್ ಬುಕ್ ಖಾತೆಯಲ್ಲಿ ಈ ಕುರಿತು ಶ್ರೀನಿವಾಸ್ ಅವರೇ ಹೇಳಿಕೊಂಡಿದ್ದಾರೆ.
ಪಕ್ಷದಿಂದ ಟಿಕೆಟ್ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿ ಶ್ರೀನಿವಾಸ್ ಇದ್ದರು. ಆದರೆ ಪಕ್ಷ ಶಿರಾ ನಗರ ಚಿದಾನಂದ ಗೌಡ ಅವರಿಗೆ ಟಿಕೆಟ್ ನೀಡಿತ್ತು. ಟಿಕೆಟ್ ಕೈತಪ್ಪಿದ್ದರಿಂದ ಪಕ್ಷದ ವಿರುದ್ಧ ಶ್ರೀನಿವಾಸ್ ಅಸಮಾಧಾನ ಹೊರಹಾಕಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸೂಚನೆ ನೀಡಿದ್ದರು.

ಮತ್ತೊಂದು ಕಡೆ ಬಿ. ಸತ್ಯನಾರಾಯಣ ಅವರ ಅಕಾಲಿಕ ನಿಧನದಿಂದ ಶಿರಾ ಉಪಚುನಾವಣೆ ಕೂಡ ನಡೆಯುತ್ತಿದ್ದು, ಶಿರಾ ಉಪ ಚುನಾವಣೆಯಲ್ಲಾದರೂ ಬಿಜೆಪಿಯಿಂದ ಟಿಕೆಟ್ ನೀಡುವಂತೆ ವರಿಷ್ಠರಲ್ಲಿ ಮನವಿ ಮಾಡಿದ್ದರು. ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಹಿಂದುಳಿದ ಮತಗಳು ಹೆಚ್ಚಿದ್ದು, ನನಗೆ ಟಿಕೆಟ್ ನೀಡಿದರೆ ಹಿರಿಯೂರಿನಲ್ಲಿ ಕಮಲ ಅರಳಿಸಿದಂತೆ ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ಬಾವುಟ ಹಾರಿಸುತ್ತೇನೆ ಎಂದಿದ್ದರು.
ಆದರೆ ಇವರ ಮಾತಿಗೆ ವರಿಷ್ಠರು ಸೊಪ್ಪು ಹಾಕಲಿಲ್ಲ. ಎಂಎಲ್ಸಿ ಚುನಾವಣೆ, ಶಿರಾ ಉಪಚುನಾವಣೆ ಎರಡಕ್ಕೂ ಟಿಕೆಟ್ ಬಯಸಿದ್ದ ಶ್ರೀನಿವಾಸ್ ಗೆ ಒಂದು ಕಡೆಯೂ ಟಿಕೆಟ್ ದೊರೆಯದ ಕಾರಣ ಅಂತಿಮವಾಗಿ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.
ಇಂದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದ ಹೊರ ವಲಯದಲ್ಲಿರುವ ಸಾಯಿಬಾಬಾ ದೇವಸ್ಥಾನಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿ ಇದೇ 7ರಂದು ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ರಮೇಶ್ ಬಾಬು, ಜೆಡಿಎಸ್ ನಿಂದ ಚೌಡರೆಡ್ಡಿ ತೂಪಲ್ಲಿ, ಬಿಜೆಪಿಯಿಂದ ಚಿದಾನಂದ ಗೌಡ ಸೇರಿದಂತೆ ಇನ್ನೂ ಇತರೆ ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಗೆಲುವು ಯಾರ ಕಡೆ ಇದೆ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications