ಹಿರಿಯೂರು; ತಂದೆಯ ಶವಕ್ಕೆ ಹೆಗಲು ಕೊಟ್ಟ ಮಗಳು
ಚಿತ್ರದುರ್ಗ, ಏಪ್ರಿಲ್ 21; ವಯೋಸಹಜವಾಗಿ ಮೃತಪಟ್ಟ ವ್ಯಕ್ತಿಯ ಅಂತ್ಯಕ್ರಿಯೆ ನಡೆಸುವಾಗ ಶವಕ್ಕೆ ಮಗಳು ಹೆಗಲು ಕೊಟ್ಟಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ನಡೆದಿದೆ.
ಹಿರಿಯೂರು ತಾಲೂಕಿನ ಹರ್ತಿಕೋಟೆ ಸಮೀಪದ ಕಳವಿಭಾಗಿ ಗ್ರಾಮದ ಹಾಲುಮತ ಕುರುಬರ ಸಮುದಾಯದ ಹಿರಿಯ ಮುಖಂಡ, ಹರ್ತಿಕೋಟೆ ಗ್ರಾಮದ ಓರುಗಲ್ಲಮ್ಮ ದೇಗುಲದ ಗುಡಿ ಗೌಡರಾಗಿದ್ದ ಎಂ. ಜೂಲಪ್ಪನವರು (86) ಮೃತಪಟ್ಟಿದ್ದಾರೆ.
ಮೃತರು ತಾಲೂಕು ಕುರುಬರ ಸಂಘದ ನಿರ್ದೇಶಕರೂ, ಯುವ ಮುಖಂಡರಾದ ಜೆ. ರಂಗನಾಥ್ ಸೇರಿದಂತೆ ಪತ್ನಿ ಗೌರಮ್ಮ ಹಾಗೂ ಐವರು ಪುತ್ರಿಯರನ್ನು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಅಂತ್ಯಸಂಸ್ಕಾರ ಕಳವಿಭಾಗಿ ಜಮೀನಿನಲ್ಲಿ ಹಾಲುಮತ ಸಂಸ್ಕೃತಿ, ಸಂಪ್ರದಾಯದಂತೆ ನೆರವೇರಿತು.

ಜೂಲಪ್ಪನವರು ಕಳವಿಭಾಗಿ ಗ್ರಾಮದಲ್ಲಿ ತಮ್ಮದೇ ಆದ ಛಾಫು ಮೂಡಿಸಿದ್ದರು. ಸಮುದಾಯದ ಹಿರಿಯ ಮುಖಂಡರಾಗಿ ಮಾರ್ಗದರ್ಶನ ನೀಡುತ್ತಿದ್ದರು. ಶ್ರೀ ಓರುಗಲ್ಲಮ್ಮ ದೇವಸ್ಥಾನದ ಅಭಿವೃದ್ಧಿಗೆ ಅಪಾರ ಸೇವೆ ಸಲ್ಲಿಸಿದ್ದಾರೆ. ಜೂಲಪ್ಪ ನಿಧನಕ್ಕೆ ತಾಲೂಕು ಕುರುಬರ ಸಂಘದ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ಮತ್ತಿತರರು ಸಂತಾಪ ಸೂಚಿಸಿದ್ದಾರೆ.
ಮೃತ ಜೂಲಪ್ಪನಿಗೆ ರಂಗಮ್ಮ, ಗುಂಡಮ್ಮ, ಶಾಂತಮ್ಮ, ಜ್ಯೋತಿ, ಕವಿತಾ ಎಂಬ ಐವರು ಪುತ್ರಿಯರಿದ್ದಾರೆ. ಜೂಲಪ್ಪ ಅವರು ಹೆಣ್ಣು ಮಕ್ಕಳನ್ನು ಗಂಡು ಮಕ್ಕಳಂತೆ ಪ್ರೀತಿ ತೋರಿ ಬೆಳೆಸಿದ್ದರು. ಅಂತ್ಯ ಸಂಸ್ಕಾರದ ವೇಳೆ ಮಗಳು ಶಾಂತಮ್ಮ ಅವರು ಸ್ವತಃ ತಂದೆಯ ಶವಕ್ಕೆ ಹೆಗಲು ಕೊಟ್ಟು ಸಾಗಿದರು. ಈ ಮೂಲಕ ತಂದೆಯ ಮೇಲಿನ ಪ್ರೀತಿಗೆ ಸಾಕ್ಷಿಯಾದರು ಎಲ್ಲರಿಗೂ ಮಾದರಿ ಎನಿಸಿದರು.












Click it and Unblock the Notifications