ಚಿತ್ರದುರ್ಗ; ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಅವ್ಯವಸ್ಥೆ
ಚಿತ್ರದುರ್ಗ, ಮೇ 16; " ಚಿತ್ರದುರ್ಗ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡುತ್ತಿಲ್ಲ, ಇದು ಅವ್ಯವಸ್ಥೆಯ ಆಗರವಾಗಿದೆ, ಶ್ರೀರಾಮುಲು ಎಲ್ಲಿದಿಯಪ್ಪಾ?, ಬಂದು ನೋಡಪ್ಪಾ ಮೂರು ಜನ ಸತ್ತಿದ್ದಾರೆ" ಎಂದು ಸೋಂಕಿತ ವ್ಯಕ್ತಿ, ವಕೀಲ ಹನುಮಂತರಾಜ ಆರೋಪಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಚಿಕಿತ್ಸೆ ನೀಡಲು ಯಾವುದೇ ವೈದ್ಯರು ಬರುತ್ತಿಲ್ಲ. ಚಿಕಿತ್ಸೆಯೂ ಸಿಗುತ್ತಿಲ್ಲ ಎಂದು ವಿಡಿಯೋದಲ್ಲಿ ದೂರಿದ್ದಾರೆ. ಜಿಲ್ಲಾಧಿಕಾರಿಗಳಿಗೆ ಹೇಳಿದರೂ, ಯಾರಿಗೆ ಹೇಳಿದರೂ ಯಾವುದೇ ಉಪಯೋಗವಿಲ್ಲ ಎಂದು ಹನುಮಂತರಾಯ ಆರೋಪಿಸಿದ್ದಾರೆ.
"ಇಲ್ಲಿನ ಬೆಡ್ ಮೇಲೆ ಮೂರು, ಮೂರು ಜನರು ಸತ್ತರೂ ಅವರನ್ನು ಬಂದು ನೋಡೋರಿಲ್ಲ, ನಮ್ಮ ಜಿಲ್ಲೆಯ ವ್ಯವಸ್ಥೆ ಹೀಗಿದೆ ನೋಡಿ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ, ಉಪಹಾರ ಯಾವುದೂ ಸಿಗುತ್ತಿಲ್ಲ. ಔಷಧಿ, ಮಾತ್ರೆ ಯಾವುದು ಸಿಗುತ್ತಿಲ್ಲ. 8 ದಿನಗಳಾದ್ರೂ ನಮ್ಮನ್ನು ಬಂದು ನೋಡೋರಿಲ್ಲ" ಎಂದು ವಿಡಿಯೋದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ದಿನಕ್ಕೆ ಮೂರು ಸಾವುಗಳಾಗುತ್ತಿವೆ. ನಮ್ಮ ಜೀವಗಳಿಗೆ ಬೆಲೆಯೇ ಇಲ್ಲವೇ? ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಸಿಎಂ ಯಡಿಯೂರಪ್ಪನವರೇ ಏನು ಮಾಡುತ್ತಿದ್ದೀರಿ?, ನೀವು, ನಿಮ್ಮ ಮನೆಯಲ್ಲಿ ಕುಟುಂಬದವರು ಚೆನ್ನಾಗಿರಬೇಕು. ನಾವು ಸತ್ತಗೋಬೇಕಾ?" ಎಂದು ಪ್ರಶ್ನಿಸಿದ್ದಾರೆ.
"ಸಿದ್ದರಾಮಯ್ಯ ಅವರೇ, ಡಿಕೆಶಿ ಅವರೇ ವಿರೋಧ ಪಕ್ಷದವರು ನೀವೇನು ಮಾಡುತ್ತಿದ್ದೀರಿ?, ನಿಮಗೂ ಇದು ಕಾಣಲ್ವಾ?, ನೀವೆನಾದ್ರೂ ಮಾಡುತ್ತಿರಾ, ಇಲ್ಲವಾ?" ಎಂದು ವಿರೋಧ ಪಕ್ಷದವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
"ಸಿಎಂ ಯಡಿಯೂರಪ್ಪ ಇದೇನಾ ನಿಮ್ಮ ಆಡಳಿತ?. ಶ್ರೀರಾಮುಲು ಎಲ್ಲಿದಿಯಪ್ಪಾ?, ಬಂದು ನೋಡಪ್ಪ ಮೂರು ಜನ ಸತ್ತಿದ್ದಾರೆ. ನಮಗೆ ಏನಾದ್ರು ಆದರೆ ಜಿಲ್ಲಾಧಿಕಾರಿ, ಶ್ರೀರಾಮುಲು, ಯಡಿಯೂರಪ್ಪ ನೀವುಗಳೇ ಕಾರಣ" ಎಂದು ವಿಡಿಯೋದಲ್ಲಿ ಹೇಳಿದ್ದಾರೆ.












Click it and Unblock the Notifications