ಚಿತ್ರದುರ್ಗದಲ್ಲಿ ಶತಕ ದಾಟಿದ ಕೊರೊನಾ ಪ್ರಕರಣ; ಇಲ್ಲಿನ ಸ್ಥಿತಿಗತಿ ಹೇಗಿದೆ?
ಚಿತ್ರದುರ್ಗ, ಜುಲೈ 11: ಚಿತ್ರದುರ್ಗ ಜಿಲ್ಲೆಯಲ್ಲಿ ನಿನ್ನೆ ಸಂಜೆ ಮೂರು ಕೊರೊನಾ ವೈರಸ್ ಪ್ರಕರಣಗಳು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಶತಕದ ಗಡಿ ದಾಟಿದೆ. ಹಿರಿಯೂರಿನ 55 ವರ್ಷದ ಬಸ್ ಕಂಡಕ್ಟರ್, ನಗರದ ಅಶೋಕ ರಸ್ತೆಯ 54 ವರ್ಷದ ಮಹಿಳೆ ಹಾಗೂ 44 ವರ್ಷದ ಲ್ಯಾಬ್ ಟೆಕ್ನೀಷಿಯನ್ ಮಹಿಳೆಗೆ ನಿನ್ನೆ ಸೋಂಕು ತಗುಲಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿನ ಪ್ರಕರಣಗಳು ಶತಕದ ಗಡಿ ಮುಟ್ಟಿದೆ. ಜಿಲ್ಲೆಯಲ್ಲಿ ಇದುವರೆಗೂ 101 ಸೋಂಕಿತರು ದಾಖಲಾಗಿದ್ದಾರೆ.
Recommended Video
ನಗರದ ಸಿ.ಎಂ.ಬಡಾವಣೆಯ ನಿವಾಸಿ 55 ವರ್ಷದ ಖಾಸಗಿ ಬಸ್ ಬಸ್ ಕಂಡಕ್ಟರ್ ನ ಮಗ ಜು.6ರಂದು ಬೆಂಗಳೂರಿನಿಂದ ಬಂದಿದ್ದು, ತಂದೆ ಮಗ ಇಬ್ಬರಿಗೂ ಜ್ವರದ ಲಕ್ಷಣಗಳು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಪರೀಕ್ಷಿಸಿ, ಜು.9ರಂದು ಅವರ ಗಂಟಲು ದ್ರವ ಪಡೆದು ಪರೀಕ್ಷೆಗೆ ಒಳಪಡಿಸಲಾಗಿದೆ. ಶುಕ್ರವಾರ ಬಂದ ವರದಿಯಲ್ಲಿ ತಂದೆಗೆ ಸೋಂಕು ದೃಢಪಟ್ಟಿದೆ. ಮಗನ ವರದಿ ಬರುವುದು ಬಾಕಿಯಿದೆ.

ಬ್ಯಾಂಗಲ್ ಸ್ಟೋರ್ ಮಾಲೀಕನ ಸಂಪರ್ಕದಿಂದ ಸೋಂಕು
ನಗರದ ಮಿರ್ಜಾ ಬಡಾವಣೆಯ ನಿವಾಸಿಯಾಗಿದ್ದು, ಲ್ಯಾಬ್ ಟೆಕ್ನೀಷಿಯನ್ ಆಗಿದ್ದ 44 ವರ್ಷದ ಮಹಿಳೆಗೂ ಸೋಂಕು ತಗುಲಿದೆ. ಸೋಂಕಿತ ಬ್ಯಾಂಗಲ್ ಸ್ಟೋರ್ ಮಾಲೀಕನ ಸಂಪರ್ಕದಿಂದ ನಗರಸಭಾ ಸದಸ್ಯನ 54 ವರ್ಷದ ತಾಯಿಯೊಬ್ಬರಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, ಮಗನ ವರದಿ ಬರುವುದು ಬಾಕಿ ಇದೆ. ಮೂವರನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಿರಿಯೂರಿನಲ್ಲಿ 28 ಪಾಸಿಟಿವ್ ಪ್ರಕರಣ
ಈ ಮೂಲಕ ಹಿರಿಯೂರಿನಲ್ಲಿ ಒಟ್ಟು 28 ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಅದರಲ್ಲಿ ಒಟ್ಟು 20 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ 8 ಮಾತ್ರ ಸಕ್ರಿಯ ಪ್ರಕರಣಗಳಿದ್ದು, ಸೋಂಕಿತರೆಲ್ಲರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ತಿಳಿಸಿದ್ದಾರೆ.

ಹೊಸದುರ್ಗ ಪೊಲೀಸ್ ಠಾಣೆ ಸೀಲ್ ಡೌನ್
ಹೊಸದುರ್ಗ ತಾಲ್ಲೂಕಿನ ಶ್ರೀರಾಂಪುರ ಪೊಲೀಸ್ ಠಾಣೆಯ ಹೆಡ್ ಕಾನ್ ಸ್ಟೆಬಲ್ ಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಹೊಸದುರ್ಗ ತಾಲ್ಲೂಕಿನ ಶ್ರೀರಾಂಪುರ ಪೊಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ. ಇನ್ನು ಹೊಸದುರ್ಗ ನಗರದ ಪೋಲಿಸ್ ಠಾಣೆಯನ್ನು ತಾತ್ಕಾಲಿಕವಾಗಿ ಸೀಲ್ ಡೌನ್ ಮಾಡಲಾಗಿದ್ದು ದುರ್ಗಾಂಬಿಕಾ ಸಮುದಾಯ ಭವನಕ್ಕೆ ಶಿಫ್ಟ್ ಮಾಡಲಾಗಿದೆ. ಚಿತ್ರದುರ್ಗದಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ಇನ್ನೂ ಮುಂದುವರೆಯುವ ಸಾಧ್ಯತೆ ದಟ್ಟವಾಗಿದೆ ಎನ್ನಬಹುದು.

130ಕ್ಕೂ ಹೆಚ್ಚು ಪೊಲೀಸರು ಹೋಂ ಕ್ವಾರಂಟೈನ್
ಪೊಲೀಸ್ ಕಾನ್ ಸ್ಟೆಬಲ್ ಒಬ್ಬರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಶ್ರೀರಾಂಪುರ ಠಾಣೆ, ಹೊಸದುರ್ಗ ಠಾಣೆ, ವೃತ್ತ ನಿರೀಕ್ಷಕರ ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿದೆ. 130ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ, ಅಧಿಕಾರಿಗಳು ಹೋಂ ಕ್ವಾರಂಟೈನ್ ಆಗಿದ್ದಾರೆ. ಎರಡು ಠಾಣೆಗಳು ಹಾಗೂ ಸಿಪಿಐ ಕಚೇರಿ ನಿರ್ವಹಣೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದ್ದು, ಹೊಸದುರ್ಗ ತಾಲೂಕಿಗೆ ಹಿರಿಯೂರು ಮತ್ತು ಹೊಳಲ್ಕೆರೆ ಪೊಲೀಸರ ನಿಯೋಜನೆ ಮಾಡಲಾಗಿದೆ. ಹಿರಿಯೂರಿನ ಸಿಎಂ ಲೇಔಟ್, ಮಿರ್ಜಾ ಬಡಾವಣೆ, ಅಶೋಕ ರಸ್ತೆಯನ್ನು ಕೂಡ ಸೀಲ್ ಡೌನ್ ಮಾಡಲಾಗಿದೆ. ಜಿಲ್ಲೆಯಲ್ಲಿ ಇದುವರೆಗೂ 101 ಸೋಂಕಿತ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 79 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.












Click it and Unblock the Notifications