ಚಿತ್ರದುರ್ಗ; ಕುಸಿದ ಶಾಲೆ ಗೋಡೆ, ಭಯದಲ್ಲೇ ಮಕ್ಕಳಿಗೆ ಪಾಠ
ಚಿತ್ರದುರ್ಗ, ಡಿಸೆಂಬರ್ 06; ಅರ್ಧ ಶತಮಾನ ಪೂರೈಸಿದ ಸರಕಾರಿ ಶಾಲಾ ಕಟ್ಟಡ ಅಭಿವೃದ್ಧಿ ಕಾಣದೇ ಗೋಡೆಗಳು ಬಿರುಕು ಬಿಟ್ಟು, ಸೋರುತ್ತಿದೆ. ಜೀವ ಭಯದಲ್ಲಿಯೇ ವಿದ್ಯಾರ್ಥಿಗಳು ಪಾಠ ಕೇಳುವ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಸೋಮಗುದ್ದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕ ಮಧುರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 7 ನೇ ತರಗತಿಯವರೆಗೆ 80 ವಿದ್ಯಾರ್ಥಿಗಳು ಇದ್ದಾರೆ. ಶಾಲೆಯಲ್ಲಿ 6 ಕೊಠಡಿಗಳಿವೆ. ಅವುಗಳಲ್ಲಿ ಮೂರು ಶಿಥಿಲವಾಗಿ ಗೋಡೆಗಳು ಬಿರುಕುಬಿಟ್ಟಿದ್ದು ಜೀವ ಭಯದಲ್ಲೇ ದಿನಲೂ ಕೊಠಡಿಯಲ್ಲಿ ಕುಳಿತು ವಿದ್ಯಾಭ್ಯಾಸ ಮಾಡಬೇಕಾದ ಅನಿವಾರ್ಯತೆ ಮಕ್ಕಳಿಗೆ ಎದುರಾಗಿದೆ.
ಶುಕ್ರವಾರ ಸಂಜೆ ಸುರಿದ ಮಳೆಯಿಂದಾಗಿ ಶಾಲಾ ಕೊಠಡಿದ್ದ ದಿಧೀರ್ ಕುಸಿದು ಬಿದ್ದಿದೆ. ಇದರಿಂದಾಗಿ ಪೋಷಕರು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಒಂದು ವೇಳೆ ಶಾಲಾ ಅವಧಿಯಲ್ಲಿ ಕಟ್ಟಡ ಕುಸಿದಿದ್ದರೆ? ಎಂದು ಪೋಷಕರು ಭಯಗೊಂಡಿದ್ದಾರೆ.

ತಾಲೂಕಿನಾದ್ಯತಂದ ಅಕಾಲಿಕ ಮಳೆ ಸುರಿಯುತ್ತಿರುವುದರಿಂದ ಬಹುತೇಕ ಸರಕಾರಿ ಶಾಲೆಗಳು ಮಳೆಗೆ ಸೋರುತ್ತಿವೆ. ಕಟ್ಟಡದ ಗೋಡೆಗಳು ಅಲ್ಲಲ್ಲಿ ಬಿರುಕು ಬಿಟ್ಟಿವೆ. ಮೇಲ್ಛಾವಣಿಯ ಬಹುತೇಕ ತೊಲೆಗಳು ಮುರಿದಿವೆ. ಯಾವುದೇ ಸಂದರ್ಭದಲ್ಲಾದರೂ ಮೇಲ್ಛಾವಣಿ ಹಾಗೂ ಗೋಡೆ ಕುಸಿದು ಬೀಳುವ ಸಾಧ್ಯತೆ ಇದೆ.
ಈ ಹಿನ್ನೆಲೆಯಲ್ಲಿ ಶಿಥಿಲವಾದ ಕೊಠಡಿಗಳ ಬಾಗಿಲು ಮುಚ್ಚಲಾಗಿದ್ದು, ಬೋಧನಾ ಕೊಠಡಿಗಳು ಇಲ್ಲದೆ, ಶಾಲಾ ಆವರಣದಲ್ಲಿ ಮರದ ಕೆಳಗೆ ಶಿಕ್ಷಕರು ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಹಲವು ವರ್ಷಗಳಿಂದ ಸರಕಾರಿ ಶಾಲಾ ಕಟ್ಟಡಗಳು ಶಿಥಿಲಾವಸ್ಥೆ ಹಂತದಲ್ಲಿದ್ದು, ಬಹುತೇಕ ಪೋಷಕರು ಕಟ್ಟಡ ಕುಸಿಯುವ ಆತಂಕದ ನಡುವೆಯೂ ಮಕ್ಕಳನ್ನು ಶಾಲೆಗಳಿಗೆ ಕಳಿಸುತ್ತಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಟಿ. ನಿಜಲಿಂಗಪ್ಪ "ನಾನು ಪ್ರತಿ ನಿತ್ಯ ಶಾಲಾ ಆವರಣಕ್ಕೆ ಬಂದು ಇಲ್ಲಿನ ಕಲಿಕೆ ಬಗ್ಗೆ ವಿಚಾರಣೆ ಮಾಡುತ್ತಿದ್ದೇನೆ. ಗೋಡೆಗಳು ಬಿರುಕು ಬಿಟ್ಟ ಶಾಲಾ ಕೊಠಡಿಗಳಲ್ಲಿ ಶಿಕ್ಷರು ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿರುವ ದೃಶ್ಯ ಕಂಡು ಮಕ್ಕಳನ್ನು ಕೊಠಡಿಯಲ್ಲಿ ಕೂರಿಸಬೇಡಿ ಶಾಲಾ ಆವರಣದಲ್ಲಿ ಮರದ ಕೆಳೆಗೆ ಕೂರಿಸಿ ಪಾಠ ಮಾಡಿ ಎಂದು ಸಲಹೆ ನೀಡಿದ್ದೆ, ಅಕಾಲಿಕ ಮಳೆಯಿಂದ ಶುಕ್ರವಾರ ಶಾಲಾ ಕೊಠಡಿಯ ಗೋಡೆ ಕುಸಿದಿದೆ ಇದರಿಂದದಾಗಿ ಪೋಷಕರಲ್ಲಿ ಆತಂಕ ಉಂಟಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಶಾಲಾ ಕಟ್ಟಡ ದುರಸ್ಥಿಗೆ ಮುಂದಾಗಬೇಕಿದೆ" ಎಂದು ಹೇಳಿದರು.
ಇದಲ್ಲದೆ ಚಳ್ಳಕೆರೆ ತಾಲೂಕಿನ ಮಿರಸಾಭಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿಶ್ವೇಶ್ವರಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡದ ಗೋಡೆ ತಳಪಾಯ ಕೊರೆದಿರುವುದು ಹಾಗೂ ಕಟ್ಟಡ ಪಿಲ್ಲರ್ ಶಿಥಿಲವಾಗಿದೆ.
ಎರಡು ಕೊಠಡಿಗಳ ಮೇಲ್ಛಾವಣಿ ಕುಸಿತ : ಹಿರಿಯೂರು ತಾಲ್ಲೂಕಿನ ಮಾರೇನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡು ಬೋಧನಾ ಕೊಠಡಿಗಳ ಮೇಲ್ಛಾವಣಿ ಕುಸಿದಿದ್ದು, ಮತ್ತೊಂದು ಕೊಠಡಿಯಲ್ಲಿ ಮಳೆ ಬಂದರೆ ಸೋರುತ್ತಿದೆ. ಇದರಿಂದ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರು ಆತಂಕದಲ್ಲಿದ್ದಾರೆ.

ಮಕ್ಕಳಿಗೆ ಬೋಧನೆ ಮಾಡಲು ಕೊಠಡಿಗಳಿಲ್ಲದೇ ಶಿಕ್ಷಕರ ಆಫೀಸ್ ರೂಂನಲ್ಲಿ ಮಕ್ಕಳನ್ನು ಕೂರಿಸಿಕೊಂಡು ಪಾಠ ಮಾಡಲಾಗುತ್ತಿದೆ. ಶಾಲೆಯಲ್ಲಿ 1 ರಿಂದ 7 ನೇ ತರಗತಿಯ ಒಟ್ಟು 72 ಮಕ್ಕಳಿದ್ದಾರೆ. ಆದರೆ ಕಲಿಕೆಗೆ ತಕ್ಕಂತೆ ಬೋಧನಾ ಕೊಠಡಿಗಳಿಲ್ಲ. ಕೊಠಡಿಗಳ ಬಾಗಿಲು ಹಾಗೂ ಕಿಟಕಿಗಳು ಮುರಿದು ಹಾಳಾಗಿವೆ. ಶಿಕ್ಷಣ ಇಲಾಖೆಗೆ ಕೊಠಡಿಗಳ ಅವಶ್ಯಕತೆ ಬಗ್ಗೆ ಪತ್ರ ಬರೆಯಲಾಗಿದೆ. ನಮಗೆ ತುರ್ತಾಗಿ ಮೂರು ಕೊಠಡಿಗಳು ಬೇಕಿದೆ ಎಂದು ಶಾಲೆಯ ಶಿಕ್ಷಕರೊಬ್ಬರು ಮಾಹಿತಿ ನೀಡಿದರು.












Click it and Unblock the Notifications