ಬಡ ಕುಟುಂಬಗಳಿಗೆ ಆಸರೆಯಾದ ಬಿ.ವೈ. ವಿಜಯೇಂದ್ರ ಅಭಿಮಾನಿ
ಚಿತ್ರದುರ್ಗ, ಜೂನ್ 22: ಕೊರೊನಾ ವೈರಸ್ನಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಹಸಿವಿನಿಂದ ಬಳಲುತ್ತಿದ್ದಂತಹ ಬಡವರು, ಅಲೆಮಾರಿಗಳು ಹಾಗೂ ನಿರ್ಗತಿಕರನ್ನು ಗುರುತಿಸಿ ಇವರಿಗೆ ಹಸಿವು ನೀಗಿಸುವ ನಿಟ್ಟಿನಲ್ಲಿ ಸಮಾಜ ಸೇವೆಯನ್ನು ಮಾಡುವ ಮೂಲಕ ಎಲೆ ಮರೆ ಕಾಯಿಯಂತೆ ಇದ್ದುಕೊಂಡು ಇದೀಗ ಸದ್ದು ಗದ್ದಲವಿಲ್ಲದೆ ಸೇವೆ ಮಾಡುತ್ತಿರುವ ಯುವಕನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಹಾಗಾದರೆ ಆ ಯುವಕ ಯಾರು ಅಂತೀರಾ ಈ ಸ್ಟೋರಿ ಓದಿ...
ಸಿಎಂ ಬಿ.ಎಸ್. ಯಡಿಯೂರಪ್ಪ ಮಗ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಕರ್ನಾಟಕ ವಿದ್ಯುತ್ ಕಾರ್ಖಾನೆ ನಿಗಮದ ಅಧ್ಯಕ್ಷರಾದ ತಮ್ಮೇಶ್ ಗೌಡ ಅವರ ಆಪ್ತ ವಲಯದಲ್ಲಿ ಅಭಿಮಾನಿಯಾಗಿ ಗುರುತಿಸಿಕೊಂಡಿರುವ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವೇಣುಕಲ್ ಗುಡ್ಡದ ಕೆ. ಅಭಿನಂದನ್ ಸಮಾಜ ಸೇವೆಯಲ್ಲಿ ತೊಡಗಿರುವ ಅಭಿಮಾನಿ.

ಬಡ ಜನರಿಗೆ ದಿನಸಿ ಆಹಾರ ಕಿಟ್ ವಿತರಣೆ
ಕೋವಿಡ್ ಲಾಕ್ಡೌನ್ ಸಮಯದಲ್ಲಿ ಅದೆಷ್ಟೋ ಬಡ ಕುಟುಂಬಗಳು ಕೆಲಸ, ಕಾರ್ಯ ಇಲ್ಲದೆ, ಹಸಿವಿನಿಂದ ಬಳಲುತ್ತಿದ್ದವು. ಇಂತಹ ಸಮಯದಲ್ಲಿ ಬಡಜನರ ಕಷ್ಟ ಅರಿತ ಇವರು, ಸಮಾಜ ಸೇವೆಗೆ ಮುಂದಾಗಿರುವುದು ವಿಶೇಷವಾಗಿದೆ. ಹಿರಿಯೂರು ತಾಲ್ಲೂಕಿನ ಧರ್ಮಪುರ ಹೋಬಳಿಯ ಸುತ್ತಮುತ್ತ ಇರುವ ಗ್ರಾಮಗಳಿಗೆ ಭೇಟಿ ನೀಡಿ ಬಡ ಜನರಿಗೆ ದಿನಸಿ ಆಹಾರ ಕಿಟ್ ವಿತರಣೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಧರ್ಮಪುರ, ಈಶ್ವರಗೆರೆ, ಅಬ್ಬಿನಹೊಳೆ, ಇಕ್ಕನೂರು, ಹರಿಯಬ್ಬೆ, ಕಣಜನಹಳ್ಳಿ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳ ಬಡ ಜನರಿಗೆ ಸುಮಾರು 4 ಸಾವಿರಕ್ಕೂ ಹೆಚ್ಚು ಆಹಾರ ಕಿಟ್, ಮಾಸ್ಕ್, ಸ್ಯಾನಿಟರಿ ವಿತರಣೆ ಮಾಡಲಾಗಿದೆ. ಇದರ ಜೊತೆಗೆ ಕಷ್ಟ ಅಂತ ಬಂದವರಿಗೆ ವೈಯಕ್ತಿಕ ಧನ ಸಹಾಯ, ವಯಸ್ಸಾದ ವೃದ್ಧ, ವೃದ್ಧೆಯರ ಕಷ್ಟಗಳಿಗೆ ಸ್ಪಂದಿಸುವ ಮೂಲಕ ಜನ ಮೆಚ್ಚುಗೆ ಪಾತ್ರರಾಗುತ್ತಿದ್ದಾರೆ.
ಗಣ್ಯರ ಭೇಟಿ
ನಾನು ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಗಮನ ಹರಿಸಿದ್ದೇನೆ, ಶಿಕ್ಷಣದಿಂದ ಬಡ ಮಕ್ಕಳು ವಂಚಿತರಾಗಬಾರದು ಹಾಗೂ ಕೋವಿಡ್ ಸಮಯದಲ್ಲಿ ವಿದ್ಯಾಭ್ಯಾಸಕ್ಕೆ ತೊಂದರೆಯಾದವರಿಗೆ, ಕೊರೊನಾದಿಂದ ತಂದೆ- ತಾಯಿಯನ್ನು ಕಳೆದುಕೊಂಡು ಅನಾಥವಾಗಿರುವ ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ನೀಡಲಾಗುತ್ತದೆ. ಇಂಥವರಿಗೆ ಸಹಾಯ ಮಾಡಲಾಗುವುದು,'' ಎಂದು ಅಭಿನಂದನ್ ಹೇಳಿದರು.
ಅಭಿನಂದನ್ ಅವರ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ತೋಟಗಾರಿಕೆ ಸಚಿವ ಆರ್. ಶಂಕರ್, ಚಿತ್ರದುರ್ಗ ಲೋಕಸಭಾ ಸಂಸದ ಎ. ನಾರಾಯಣಸ್ವಾಮಿ ಆಹಾರ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯುವಕನ ಸಮಾಜ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಉಳಿದಂತೆ ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್, ವಿದ್ಯುತ್ ಕಾರ್ಖಾನೆ ನಿಗಮದ ಅಧ್ಯಕ್ಷ ತಮ್ಮೇಶ್ ಗೌಡ್ರು, ಎಂಎಲ್ಸಿ ಚಿದಾನಂದ ಎಂ.ಗೌಡ, ಹಾಲಿ ಜೆಡಿಎಸ್ ಶಾಸಕ ನಾಗಮಂಗಲ ಸುರೇಶ್ ಗೌಡ, ಹೊಸದುರ್ಗ ಶಾಸಕ ಗೂಳಿಹಟ್ಟಿ ಡಿ ಶೇಖರ್, ಸರ್ಕಾರಿ ನೌಕರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಸೇರಿದಂತೆ ಸ್ಥಳಿಯ ಮುಖಂಡರು ಮನೆಗೆ ಭೇಟಿ ನೀಡಲಾಗಿದೆ.
'ನಿಮ್ಮೊಂದಿಗೆ ನಾವು ಇದ್ದೇವೆ'
"ಸರ್ ನಾನು ಬಿ.ವೈ. ವಿಜಯೇಂದ್ರ, ಯಡಿಯೂರಪ್ಪ ಹಾಗೂ ಕರ್ನಾಟಕ ವಿದ್ಯುತ್ ಕಾರ್ಖಾನೆ ನಿಗಮದ ಅಧ್ಯಕ್ಷ ತಮ್ಮೇಶ್ ಗೌಡ್ರು ಅವರ ದೊಡ್ಡ ಅಭಿಮಾನಿ, ಕೊರೊನಾ ಸಂದರ್ಭದಲ್ಲಿ ತಳಮಟ್ಟದ ವ್ಯಕ್ತಿಗೆ ಸಹಾಯ ಆಗಲಿ ಎಂಬ ನಿಟ್ಟಿನಲ್ಲಿ ವಿಜಯೇಂದ್ರ ಅಣ್ಣ ಪ್ರತಿಯೊಂದು ಜಿಲ್ಲೆಗೂ ಆಂಬ್ಯುಲೆನ್ಸ್ ನೀಡಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಸೇವೆಯನ್ನು ನೋಡಿದ ನನಗೆ ನನ್ನ ಊರಿಗೆ ಏನಾದರೂ ಸಹಾಯ ಮಾಡಬೇಕು ಎಂಬ ಆಲೋಚನೆ ಬಂದಿತು. ನಮ್ಮದೊಂದು ಧ್ಯೇಯ ಇದ್ದು, "ನಿಮ್ಮೊಂದಿಗೆ ನಾವು ಇದ್ದೇವೆ' ಎಂಬ ಶೀರ್ಷಿಕೆ ಅಡಿಯಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಲಾಗಿದೆ.''

ಧೈರ್ಯ ತುಂಬುವ ಕೆಲಸ
"ಒಬ್ಬ ವ್ಯಕ್ತಿಗೆ ಎಲ್ಲವನ್ನೂ ನಾವು ಸಹಾಯ ಮಾಡಲು ಸಾಧ್ಯವಿಲ್ಲ, ಆದರೆ, ಧೈರ್ಯ ತುಂಬುವ ಕೆಲಸ ಮಾಡಿದರೆ ಅವರ ಜೀವನದಲ್ಲಿ ನೀನು ಮಾಡಿದ ಅತಿ ದೊಡ್ಡ ಸಹಾಯವಾಗುತ್ತದೆ ಹಾಗೂ ಆ ವ್ಯಕ್ತಿ ಬದುಕಲು ಸಾಧ್ಯವಾಗುತ್ತದೆ ಎಂಬುದೇ ನಮ್ಮ ತತ್ವವಾಗಿದೆ. ನಾವು ಹುಟ್ಟಿರುವುದಕ್ಕೆ ಸಾರ್ಥಕ ಆಗಬೇಕೆಂದರೆ ಹುಟ್ಟಿದ ಊರಿಗೆ ಏನಾದರೂ ಸಹಾಯ ಮಾಡಬೇಕು ಅದು ನಿಜವಾದ ಜೀವನದಲ್ಲಿ ಸಾರ್ಥಕವಾಗುತ್ತದೆ,'' ಎಂದರು.

ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಗಮನ
"ಕೊರೊನಾ ನಿಯಂತ್ರಣದಲ್ಲಿ ಸೇವೆ ಸಲ್ಲಿಸಿದ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಸೇವೆ ಶ್ಲಾಘನೀಯವಾಗಿದೆ. ಪ್ರಾಣವನ್ನೇ ಪಣಕ್ಕಿಟ್ಟು ಮತ್ತೊಬ್ಬರ ಜೀವ ಉಳಿಸಿರುವ ಅವರಿಗೆ ನಮ್ಮ ಕಡೆಯಿಂದ ಸಣ್ಣದೊಂದು ಗೌರವ ಸಲ್ಲಿಸಲಾಗಿದೆ. ನಾನು ಹೇಳಿಕೊಳ್ಳುವಷ್ಟು ಸಹಾಯ ಮಾಡಿಲ್ಲ, ನನ್ನ ಕೈಲಾದ ಮಟ್ಟಿಗೆ ಸಹಾಯ ಮಾಡುತ್ತೇನೆ. ಇಂತಹ ಸಮಯದಲ್ಲಿ ಜನರ ಮಧ್ಯೆ ಸೇವೆ ಸಲ್ಲಿಸುತ್ತಿರುವುದು ನನಗೆ ಖುಷಿ ತಂದಿದೆ. ಮುಂದಿನ ದಿನಗಳಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಗಮನ ಹರಿಸಲಾಗುತ್ತದೆ ಇದಕ್ಕೆಲ್ಲ ವಿಜಯೇಂದ್ರ ಮತ್ತು ತಮ್ಮೇಶ್ ಗೌಡ್ರು ಅಣ್ಣನವರೇ ನನಗೆ ಸ್ಪೂರ್ತಿ,'' ಎಂದು ಕೆ.ಅಭಿನಂದನ್ ಒನ್ ಇಂಡಿಯಾ ಜೊತೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.












Click it and Unblock the Notifications