ಯಡಿಯೂರಪ್ಪ, ಹೆಚ್ಡಿಕೆ ನಡುವೆ ವಿಪರೀತ ಪ್ರೀತಿ ಏಕೆ?
ಚಿತ್ರದುರ್ಗ, ಡಿಸೆಂಬರ್ 18: "ಅಧಿಕಾರದಲ್ಲಿ ಇರುವವರ ಜೊತೆ ಎಚ್. ಡಿ. ಕುಮಾರಸ್ವಾಮಿ ಸಂಬಂಧ ಚೆನ್ನಾಗಿರುತ್ತದೆ. ಆಗ ಕಾಂಗ್ರೆಸ್ ಬೇಕಾಗಿತ್ತು, ಈಗ ಅವರು ಯಡಿಯೂರಪ್ಪ ಹೊಗಳುವುದು, ಯಡಿಯೂರಪ್ಪ ಇವರನ್ನು ಹೊಗಳೋದು ಅದೇನು ಪ್ರೀತಿ?" ಎಂದು ಮಾಜಿ ಸಂಸದ ಬಿ. ಎನ್. ಚಂದ್ರಪ್ಪ ವ್ಯಂಗ್ಯವಾಡಿದರು.
ಚಿತ್ರದುರ್ಗದ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್ ನಾಯಕ ಬಿ. ಎನ್. ಚಂದ್ರಪ್ಪ, "ಇತ್ತೀಚೆಗೆ ಮಾಜಿ ಸಿಎಂ ಕುಮಾರಸ್ವಾಮಿ ಅವರ ವರ್ತನೆ ಬದಲಾಗಿದೆ. ಯಾವ ಕಾರಣಕ್ಕೆ ಬದಲಾಗಿದೆ ಅಂದರೆ ಅಧಿಕಾರ ಎಲ್ಲಿರುತ್ತೋ ಅಲ್ಲಿ ಅವರು ಸಂಬಂಧ ಇಟ್ಟುಕೊಳ್ಳುತ್ತಾರೆ" ಎಂದು ಟೀಕಿಸಿದರು.
"ಅವಾಗ ಕಾಂಗ್ರೆಸ್ ಬೇಕಾಗಿತ್ತು ಅದಕ್ಕೆ ನಮ್ಮ ಜೊತೆ ಚೆನ್ನಾಗಿದ್ದರು. ಈಗ ಬಿಜೆಪಿ ಬೇಕಾಗಿದೆ ಅದಕ್ಕೆ ಅವರ ಜೊತೆ ಚೆನ್ನಾಗಿದ್ದಾರೆ. ಈಗ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಹೊಗಳುತ್ತಾರೆ. ಅವರು ಯಡಿಯೂರಪ್ಪರನ್ನು ಹೊಗಳುತ್ತಾರೆ" ಎಂದರು.

"ಹಿಂದಿನದನ್ನು ಒಮ್ಮೆ ನೋಡಿದರೆ ಎಷ್ಟು ಬೈದಾಡಿಕೊಂಡರು, ಮಣ್ಣು ತೂರಿದರು, ಶಾಪ ಹಾಕಿದರು. ಇವಾಗ ಆತ್ಮೀಯ ಸ್ನೇಹಿತರು ಎಂದು ಕೊಳ್ಳುತ್ತಾರೆ. ಅದ್ಯಾವಾಗ ಆತ್ಮೀಯ ಸ್ನೇಹಿತರೋ? ವಿರೋಧಿಗಳೋ? ಜನರನ್ನ ಮರಳು ಮಾಡುತ್ತಿದ್ದಾರೆ" ಎಂದು ದೂರಿದರು.
ಒಳ ಒಪ್ಪಂದ: "ಇಂದು ಸಂಸತ್ನಲ್ಲಿ ಕರ್ನಾಟಕ ಕಾಂಗ್ರೆಸ್ನ 7-8 ಜನ ಸಂಸದರು ಇರುತ್ತಿದ್ದೆವು. ಯಾವ ಕಾರಣಕ್ಕೆ ಸೋತೆವು ಎಂದು ನಾನು ಆರೋಪ ಮಾಡಲು ಹೋಗುವುದಿಲ್ಲ. ಹೊಂದಾಣಿಕೆ ಮಾಡಿಕೊಂಡಿದ್ದರಿಂದ ಒಳ್ಳೆಯದು, ಕೆಟ್ಟದ್ದು ಎರಡನ್ನೂ ನೋಡಿದ್ದೇವೆ" ಎಂದರು.
ಬಿಜೆಪಿ ಮತ್ತು ಜೆಡಿಎಸ್ ನಡುವೆ ಒಳ ಒಪ್ಪಂದವಿದೆ ಎಂದು ಬಿ. ಎಸ್. ಚಂದ್ರಪ್ಪ ಆರೋಪ ಮಾಡಿದರು. "ಇವರ ಮಧ್ಯೆ ಒಳ ಒಪ್ಪಂದ ಇಲ್ಲದೇ ಈ ರೀತಿಯ ಚಟುವಟಿಕೆಗಳನ್ನ ಮಾಡಲು ಆಗಲ್ಲ" ಎಂದು ಹೇಳಿದರು.
"ಇನ್ನು ಮುಂದೆಯಾದರೂ ನಮ್ಮ ಪಕ್ಷ ಯಾರ ಬೆಂಬಲವನ್ನು ಬಯಸದೇ ನಮ್ಮದೇ ಸಿದ್ಧಾಂತ ಹಾಗೂ ಕಾರ್ಯಕರ್ತರ ಪಡೆಯ ಮೇಲೆ ಚುನಾವಣೆಗೆ ಹೋಗಬೇಕು" ಎಂದು ಚಂದ್ರಪ್ಪ ಮನವಿ ಮಾಡಿದರು.












Click it and Unblock the Notifications