ಹಿರಿಯೂರಿನಲ್ಲಿ ಭಾರತ್ ಜೋಡೋ ಯಾತ್ರೆ; ಮಳೆಯಲ್ಲಿ ಹೆಜ್ಜೆ ಹಾಕಿದ ರಾಹುಲ್
ಚಿತ್ರದುರ್ಗ, ಅಕ್ಟೋಬರ್, 10: ಎಐಸಿಸಿ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಪಾದಯಾತ್ರೆ ಹಿರಿಯೂರು ನಗರಕ್ಕೆ ತಲುಪಿದ್ದು, ಹುಳಿಯಾರು ರಸ್ತೆಯಲ್ಲಿರುವ ವೇದಾವತಿ ಕಾಲೇಜಿನ ಬಳಿ ವಿಶ್ರಾಂತಿ ಪಡೆದಿದ್ದಾರೆ. ನಂತರ ಇಲ್ಲಿಂದ ರಾಹುಲ್ ಗಾಂಧಿ ಮಳೆಯಲ್ಲಿಯೇ ಹೆಜ್ಜೆ ಹಾಕಿ ಗಮನ ಸೆಳೆದಿದ್ದಾರೆ.
ಪಾದಯಾತ್ರೆ ಸಂದರ್ಭದಲ್ಲಿ ಬಳಿಕ ಮಳೆ ಸುರಿದಿದ್ದು, ಮಳೆಯಲ್ಲೇ ನೆನದು ರಾಹುಲ್ ದಾರಿಯೂದ್ದಕ್ಕೂ ಹೆಜ್ಜೆ ಹಾಕಿದರು. ಇನ್ನು ರಾಹುಲ್ ಗಾಂಧಿ ಅವರನ್ನು ನೋಡಲು ಜನಸಾಗರವೇ ಕಿಕ್ಕಿರಿದು ಬಂದಿತ್ತು. ರಾಹುಲ್ ಗಾಂಧಿ ನೋಡಲು ಜನರು ಹುಳಿಯಾರು ರಸ್ತೆಯ ಎರಡೂ ಬದಿಯಲ್ಲಿ ಬಿಲ್ಡಿಂಗ್, ಮನೆ, ಅಂಗಡಿ, ವಾಹನಗಳ ಮೇಲೆ ಹತ್ತಿದ್ದರು. ಇನ್ನು ಯಾತ್ರೆ ಸಾಗುವ ಮಾರ್ಗ ಸಂಪೂರ್ಣವಾಗಿ ಕಾಂಗ್ರೆಸ್ ಬ್ಯಾನರ್ಗಳಿಂದ ಜಗಮಗಿಸುತ್ತಿತ್ತು. ಹಿರಿಯೂರು-ಹುಳಿಯಾರು ಮಾರ್ಗ ಫ್ಲೆಕ್ಸ್ ಹಾಗೂ ಬ್ಯಾನರ್ಗಳಿಂದ ತುಂಬು ತುಳುಕುತ್ತಿತ್ತು. ಯಾತ್ರೆಗೆ ಶಿವಮೊಗ್ಗ, ದಾವಣಗೆರೆ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಸಾವಿರಾರು ಜನರು ಆಗಮಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಚಿವ ಡಿ.ಸುಧಾಕರ್, ಶಾಸಕ ಟಿ.ರಘುಮೂರ್ತಿ, ಎಚ್.ಆಂಜನೇಯ, ಗೋವಿಂದಪ್ಪ , ಕೆ.ಎಚ್. ಮುನಿಯಪ್ಪ, ಶಾಸಕ ರಮೇಶ್ ಕುಮಾರ್, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್, ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಸೇರಿ ಅನೇಕ ಗಣ್ಯರು ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿಗೆ ಸಾಥ್ ನೀಡಿದರು. ಹುಳಿಯಾರು ರಸ್ತೆಯಲ್ಲಿಯಿಂದ ಪಾದಯಾತ್ರೆ ಸಾಗಿದ್ದು, ಬಾಲೆನಹಳ್ಳಿ -ಹರ್ತಿಕೋಟೆ ಮಧ್ಯೆ ವಾಸ್ತವ್ಯ ಹೂಡಲಿದ್ದಾರೆ.

ಬಿಜೆಪಿಯವರಿಗೆ ಸಂವಿಧಾನದ ಅರಿವಿಲ್ಲ
ಇನ್ನು ಒಬಿಸಿ ಮೀಸಲಾತಿಯಿಂದ ಮುಸ್ಲಿಂ ಸಮುದಾಯದವನ್ನು ಕೈ ಬೀಡಲು ಬಿಜೆಪಿ ಹುನ್ನಾರ ನಡೆಸುತ್ತಿದೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಆರೋಪಿಸಿದರು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಇಂತಹ ಅನ್ಯಾಯಗಳು ನಡೆಯುತ್ತಲೇ ಇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ವಿರುದ್ಧ ಗುಡುಗಿದ ಪ್ರಿಯಾಂಕ್
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಒಬಿಸಿ ಮೀಸಲಾತಿಯಿಂದ ಮುಸ್ಲಿಂ ಸಮುದಾಯವನ್ನು ಕೈ ಬಿಡಲು ಬಿಜೆಪಿ ಹುನ್ನಾರ ನಡೆಸುತ್ತಿದೆ. ಯಾವ ಸಮಾಜಕ್ಕೆ ಎಷ್ಟು ಮೀಸಲಾತಿ ಕೊಡಬೇಕು ಎಂದು ಚರ್ಚೆ ಆಗಿದೆ. ಅವರಿಗೆ ಮೀಸಲಾತಿ ತೆಗೆದು, ಇವರಿಗೆ ಕೊಡಿ ಎನ್ನುವ ಶಾಸಕರಿಗೆ ಸಂವಿಧಾನದ ಅರಿವಿಲ್ಲ ಎಂದು ಗುಡುಗಿದ್ದಾರೆ.

ಬಿಜೆಪಿ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ
ಮುಸ್ಲಿಂ, ದಲಿತ ಹೀಗೆ ಎಲ್ಲರನ್ನೂ ಬಿಜೆಪಿ ಟಾರ್ಗೆಟ್ ಮಾಡುತ್ತಿದೆ. ರಾಜ್ಯ ಸರ್ಕಾರದಿಂದ ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳಕ್ಕೆ ಕ್ರಮ ಕೈಗೊಳ್ಳುವ ವಿಚಾರದಲ್ಲಿ ರಾಜ್ಯ ಬಿಜೆಪಿ ಸರ್ಕಾರ ದೊಂಬರಾಟ ನಡೆಸಿದೆ. ಇವರು ಕಳುಹಿಸಿದ ಫೈಲ್ ಕೇಂದ್ರದಲ್ಲಿ ದೂಳು ತಿನ್ನುತ್ತದೆ. ಇಷ್ಟು ವರ್ಷ ಯಾಕೆ ಮೀಸಲಾತಿ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಿಲ್ಲ? ಬಿಜೆಪಿ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ವಿರೋಧಿ ಆಗಿದೆ. ಆರ್ಎಸ್ಎಸ್ ಸಿದ್ಧಾಂತ ಒಪ್ಪದವರನ್ನು ವಿರೋಧಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸಿದ್ಧಾಂತ ಮರೆತ್ರಾ ಸುಧಾಕರ್?
ಬ್ರಿಟೀಷರಂತೆ ಕಾಂಗ್ರೆಸ್ಸಿಗರನ್ನು ಜನ ಓಡಿಸುತ್ತಾರೆ ಎಂದ ಸಚಿವ ಸುಧಾಕರ್ ಹೇಳಿಕೆಗೆ ಖರ್ಗೆ ಟಾಂಗ್ ಪ್ರತಿಕ್ರಿಯಿಸಿದ ಅವರು, ಸಚಿವ ಡಾ.ಸುಧಾಕರ್ ಎರಡು ಬಾರಿ ಯಾವ ಸಿದ್ಧಾಂತ ಒಪ್ಪಿಕೊಂಡು ಶಾಸಕ ಆಗಿದ್ದರು? ಈಗ ಬಿಜೆಪಿ ಸೇರುತ್ತಿದ್ದಂತೆ ಕಾಂಗ್ರೆಸ್ ಸಿದ್ಧಾಂತದ ಬಗ್ಗೆ ಟೀಕಿಸುತ್ತಾರೆ. ಕಾಂಗ್ರೆಸ್ ಮುಕ್ತ ಭಾರತ ಎಂಬುದು ಅಸಾಧ್ಯ. 40 ಪರ್ಸೆಂಟ್ ಭ್ರಷ್ಟಾಚಾರದ ಸರ್ಕಾರವನ್ನು ಜನ ಕಂಡಿದ್ದಾರೆ. ಬಿಜೆಪಿ ಮುಕ್ತ ಕರ್ನಾಟಕದ ಕಾಲ ಸನ್ನಿಹಿತವಾಗಿದೆ ಎಂದು ಕಿಡಿಕಾರಿದರು.












Click it and Unblock the Notifications