ಚಿತ್ರದುರ್ಗದಲ್ಲಿ 156 ಅಡಿ ಎತ್ತರದ ಬಸವಣ್ಣನ ಪ್ರತಿಮೆ
ಚಿತ್ರದುರ್ಗ, ಆ.4 : ನಗರದ ಮುರುಘಾಮಠದ ಹಿಂಭಾಗದಲ್ಲಿ ಸಮಾನತೆಯ ಹರಿಕಾರ ಜಗಜ್ಯೋತಿ ಬಸವಣ್ಣನವರ 156 ಅಡಿ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ಭಾನುವಾರ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಮದ್ಯ ಪ್ರದೇಶದ ಶಿಲ್ಪಿ ತೇಜೇಂದ್ರ ಸಿಂಗ್ ನೇತೃತ್ವದಲ್ಲಿ 30 ಕ್ಕೂ ಹೆಚ್ಚು ಶಿಲ್ಪಿಗಳು ಈ ಪ್ರತಿಮೆಯ ನಿರ್ಮಾಣ ಕಾರ್ಯದಲ್ಲಿ ತೊಡಗಲಿದ್ದಾರೆ.
ಭಾನುವಾರ ಮುರುಘಾಮಠದ ಆವರಣದಲ್ಲಿ ಸಂಸದ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಸವಣ್ಣನವರ ಪ್ರತಿಮೆ ನಿರ್ಮಾಣ ಕಾರ್ಯಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ನಂತರ ಮಾತನಾಡಿದ ಅವರು, ರಾಜ್ಯದ ಎಲ್ಲಾ 28 ಸಂಸದರ ಸಭೆ ಕರೆದು ಸಂದಸರ ನಿಧಿಯಿಂದ ಪ್ರತಿಮೆ ನಿರ್ಮಾಣಕ್ಕೆ ಅನುದಾನ ಕೊಡಿಸಲು ಪ್ರಯತ್ನಿಸುತ್ತೇನೆ ಎಂದರು.

156 ಅಡಿ ಎತ್ತರದ ಈ ಪ್ರತಿಮೆ ನಿರ್ಮಾಣಕ್ಕಾಗಿ 300 ಟನ್ ಕಬ್ಬಿಣ ಬಳಸಿ ತಳಪಾಯ ನಿರ್ಮಿಸಲಾಗಿದೆ. 100 ಎಕರೆಯಷ್ಟು ವಿಶಾಲವಾದ ಜಾಗದಲ್ಲಿ ಪ್ರತಿಮೆ ನಿರ್ಮಾಣವಾಗುತ್ತಿದ್ದು, 100 ಅಡಿ ಎತ್ತರದ ಅಡಿಪಾಯದ ಮೇಲೆ 156 ಅಡಿ ಎತ್ತರದ ಪ್ರತಿಮೆ ನಿರ್ಮಾಣಗೊಳ್ಳಲಿದೆ.
ಮದ್ಯ ಪ್ರದೇಶದ ಶಿಲ್ಪಿಗಳಾದ ತೇಜೇಂದ್ರ ಸಿಂಗ್ ನೇತೃತ್ವದಲ್ಲಿ 30ಕ್ಕೂ ಹೆಚ್ಚು ಶಿಲ್ಪಿಗಳು ಈ ಪ್ರತಿಮೆ ನಿರ್ಮಾಣ ಕಾರ್ಯದಲ್ಲಿ ತೊಡಗಲಿದ್ದಾರೆ. ಬಸವಣ್ಣನವರ ಪ್ರತಿಮೆ ಜೊತೆಗೆ ಉದ್ಯಾನವನ, ಲೇಸರ್ ಷೋ ಸೇರಿದಂತೆ ವಿವಿಧ ಕಾಮಗಾರಿಗಳು ನಡೆಯಲಿದ್ದು, ಒಟ್ಟು 100 ಕೋಟಿ ರೂ. ವೆಚ್ಚದಲ್ಲಿ ಈ ಕಾಮಗಾರಿ ನಡೆಯುತ್ತಿದೆ.
ಮೂರು ವರ್ಷಗಳಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿದೆ. ಪ್ರತಿಮೆ ನಿರ್ಮಾಣಕ್ಕಾಗಿ ವಿವಿಧ ದಾನಿಗಳಿಂದ ಅನುದಾನ ಸಂಗ್ರಹಿಸಲಾಗುತ್ತದೆ ಎಂದು ಶ್ರೀ ಶಿವಮೂರ್ತಿ ಮುರುಘಾ ಶರಣರು ಹೇಳಿದ್ದಾರೆ.












Click it and Unblock the Notifications