ಚಿತ್ರದುರ್ಗದ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಬಂಧನ
ಚಿತ್ರದುರ್ಗ, ಏ. 8 : ಚಿತ್ರದುರ್ಗದ ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿಯನ್ನು ದಾವಣಗೆರೆ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಸ್ವಾಮೀಜಿಯನ್ನು 24 ಗಂಟೆಯೊಳಗೆ ಬಂಧಿಸುವಂತೆ ಕೋರ್ಟ್ ಪೊಲೀಸರಿಗೆ ಮಂಗಳವಾರ ಆದೇಶ ನೀಡಿತ್ತು.
ಸರ್ದಾರ್ ಸೇವಾಲಾಲ್ ಸ್ವಾಮೀಜಿ ನನ್ನನ್ನು ಮುದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ನಡೆಸಿದ್ದಾರೆ ಮತ್ತು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದಾವಣಗೆರೆಯ ನಾಗಿಬಾಯಿ ಎಂಬ ಮಹಿಳೆ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. [ಸೇವಾಲಾಲ್ ಸ್ವಾಮಿ ಕರಾಟೆ ಪಟು]

ಈ ಪ್ರಕರಣದ ವಿಚಾರಣೆಗೆ ಕೋರ್ಟ್ಗೆ ಎರಡು ಬಾರಿ ಸ್ವಾಮೀಜಿ ಗೈರು ಹಾಜರಾಗಿದ್ದರು. ನೋಟಿಸ್ ಜಾರಿಗೊಳಿಸಿದರೂ ಅದನ್ನು ಸ್ವೀಕರಿಸಿರಲಿಲ್ಲ. ಆದ್ದರಿಂದ, ಮಂಗಳವಾರ ದಾವಣಗೆರೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 24 ಗಂಟೆಯೊಳಗೆ ಸ್ವಾಮೀಜಿಯನ್ನು ಬಂಧಿಸುವಂತೆ ಪೊಲೀಸರಿಗೆ ಆದೇಶ ನೀಡಿತ್ತು.
2 ವರ್ಷಗಳ ನಂತರ ಬಂಧನ : 2013ರ ಜನವರಿಯಲ್ಲಿ ನಾಗಿಬಾಯಿ ಅವರು ಸೇವಾಲಾಲ್ ಸ್ವಾಮೀಜಿ ವಿರುದ್ಧ ದೂರು ನೀಡಿದ್ದರು. ಎರಡು ವರ್ಷಗಳಿಂದ ವಿಚಾರಣೆಗೆ ಸರಿಯಾಗಿ ಹಾಜರಾಗದ ಕಾರಣ ಸ್ವಾಮೀಜಿಯನ್ನು ಬಂಧಿಸಲು ಕೋರ್ಟ್ ಆದೇಶ ನೀಡಿತ್ತು. ಈ ಆದೇಶದಂತೆ ಬುಧವಾರ ಸ್ವಾಮೀಜಿಯನ್ನು ಬಂಧಿಸಲಾಗಿದೆ.
ಮಹಿಳೆ ನೀಡಿದ್ದ ದೂರೇನು? : ದಾವಣಗೆರೆ ಜಿಲ್ಲೆ ಬೆಳವನೂರು ಸಮೀಪದ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ನಾಗಿಬಾಯಿ ಅವರು 2006ರಿಂದಲೂ ಸ್ವಾಮೀಜಿ ನನ್ನನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ನಡೆಸಿ ವಂಚನೆ ಮಾಡಿದ್ದಾರೆ. ಎರಡು ಬಾರಿ ನನ್ನ ಕೊಲೆಗೆ ಯತ್ನಿಸಿದ್ದಾರೆ. ಅವರಿಂದ ನನಗೆ ಪ್ರಾಣ ಬೆದರಿಕೆ ಇದೆ ಎಂದು ದಾವಣಗೆರೆ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.












Click it and Unblock the Notifications