ಬಳ್ಳಾರಿಯ ಅಂತರ್ಜಾತಿ ಪ್ರೇಮಿಗಳಿಗೆ ವಿವಾಹ ಮಾಡಿಸಿದ ಚಳ್ಳಕೆರೆ ಗ್ರಾಮಸ್ಥರು
ಚಿತ್ರದುರ್ಗ, ಫೆಬ್ರವರಿ 27: ಯುವಕ-ಯುವತಿ ಜಾತಿ, ಬೇಧಗಳ ಎಲ್ಲೆ ಮೀರಿ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು, ಆದರೆ ಪೋಷಕರು ಮಾತ್ರ ಪ್ರೇಮಿಗಳು ಒಂದಾಗುವುದಕ್ಕೆ ವಿರೋಧ ಮಾಡಿದ್ದರು, ಹೀಗಾಗಿ ಮನೆ ಬಿಟ್ಟು ಬಂದ ಜೋಡಿಹಕ್ಕಿಗೆ ಬೇರೊಂದು ಗ್ರಾಮದ ಜನರೆಲ್ಲಾ ಸೇರಿ ಮದುವೆ ಮಾಡಿ ಶುಭ ಹಾರೈಸಿದ್ದಾರೆ.
ಕೋಟೆನಾಡು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ದುರ್ಗಾವರ ಎಂಬ ಪುಟ್ಟ ಗ್ರಾಮದಲ್ಲಿ ಯುವಪ್ರೇಮಿಗಳಿಗೆ ಮದುವೆ ಮಾಡಿಸಿದ್ದಾರೆ. ಆದರೆ ಜೋಡಿ ಆ ಗ್ರಾಮದವರೇ ಅಲ್ಲ, ಇವರು ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಖಾನಾಹೊಸಹಳ್ಳಿ ಗ್ರಾಮದ ಪ್ರೇಮಿಗಳು.
ಇಂಜಿನಿಯರಿಂಗ್ ಓದುತ್ತಿರೋ ನಂದಿನಿ ಹಾಗೂ ಪದವಿ ಮುಗಿಸಿ ಜೀವನೋಪಾಯಕ್ಕಾಗಿ ಫೈನಾನ್ಸ್ ನಡೆಸುತ್ತಿರೋ ಸಂದೀಪ್ ನಡುವೆ ಜಾತಿಯ ಎಲ್ಲೆ ಮೀರಿ ಆರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿರುವ ಈ ಜೋಡಿಹಕ್ಕಿಗೆ ಯುವತಿಯ ಮನೆಯವರ ವಿರೋಧ ಎದುರಾಗಿತ್ತು.

ಹೀಗಾಗಿ ಮನೆ ಬಿಟ್ಟು ದುರ್ಗಾವರ ಗ್ರಾಮಕ್ಕೆ ಬಂದು ಸಂಬಂಧಿಕರು ಹಾಗು ಗ್ರಾಮಸ್ಥರ ಸಹಕಾರದಿಂದ ಸಪ್ತಪದಿ ತುಳಿದಿದ್ದು, ನಾವಿಬ್ಬರೂ ಚೆನ್ನಾಗಿ ಜೀವನ ನಡೆಸುತ್ತೇವೆ, ನಮಗೆ ತೊಂದರೆ ಕೊಡಬೇಡಿ ಅಂತ ಪೋಷಕರಲ್ಲಿ ಮನವಿ ಮಾಡಿದ್ದಾರೆ.
ಇನ್ನು ದುರ್ಗಾವರ ಗ್ರಾಮಕ್ಕೆ ಬಂದ ಪ್ರೇಮಿಗಳಿಗೆ ಗ್ರಾಮದಲ್ಲಿರೋ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಶಾಸ್ತ್ರೋಕ್ತವಾಗಿ ಮದುವೆ ಮಾಡಿಸಿದ್ದಾರೆ. ನಮ್ಮನ್ನೇ ನಂಬಿ ಬಂದ ಪ್ರೇಮಿಗಳು ನಮಗೆ ಮದುವೆ ಮಾಡಿಸಿ ಎಂದು ಕೇಳಿಕೊಂಡರು, ಹೀಗಾಗಿ ನಾವೆಲ್ಲಾ ನಿಂತು ಮದುವೆ ಮಾಡಿಸಿ ಪ್ರೇಮಿಗಳನ್ನು ಒಂದು ಮಾಡಿದ್ದೇವೆ, ಅವರು ಮುಂದೆ ಚೆನ್ನಾಗಿ ಬಾಳುವಂತಾಗಲಿ ಎಂದು ಗ್ರಾಮಸ್ಥ ಶಂಕ್ರಪ್ಪ ಎನ್ನುವವರು ಶುಭ ಹಾರೈಸಿದ್ದಾರೆ.

ಮನೆಯವರ ವಿರೋಧವನ್ನೂ ಲೆಕ್ಕಿಸದೆ ಮನೆ ಬಿಟ್ಟು ಬಂದ ಬಳ್ಳಾರಿ ಜೋಡಿ ದುರ್ಗಾವರ ಗ್ರಾಮಸ್ಥರ ನೆರವಿನಿಂದ ಕೋಟೆನಾಡಿನಲ್ಲಿ ಸಪ್ತಪದಿ ತುಳಿದು ಹೊಸ ಜೀವನ ಆರಂಭಿಸಿದ್ದಾರೆ. ಜಾತಿ, ಧರ್ಮ, ಮೇಲು, ಕೀಳು ಎಂಬದನ್ನು ಬದಿಗೊತ್ತಿ ಒಂದಾಗಿರೋ ಈ ಪ್ರೇಮಜೋಡಿಯನ್ನ ಪೋಷಕರು ಒಪ್ಪಿಕೊಳ್ಳುತ್ತಾರೆಯೇ ಎಂಬುದನ್ನು ನೋಡಬೇಕಿದೆ.












Click it and Unblock the Notifications